ಬೆಂಗಳೂರು: ಕೆಳಮನೆ ಪತ್ನಿ ಹಾಗೂ ಮೇಲ್ಮನೆ ಗಂಡ ಪರಾರಿಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇಬ್ಬರು ಒಟ್ಟಿಗೆ ಎಸ್ಕೇಪ್ ಆಗಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ, ತಡರಾತ್ರಿ ವಕೀಲರ ಜೊತೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಹಾಜರಾಗಿದ್ದ ಶೋಯಬ್ ಅಲಿಯಾಸ್ ಮಹಮ್ಮದ್ ನವೀದ್ ನಾನು ಕೆಳಮನೆಯ ಶಾಜಿಯಾಳನ್ನು ಕರೆದುಕೊಂಡು ಹೋಗಿಲ್ಲ ಎಂದು ಹೇಳಿದ್ದಾರೆ.
ಸುಮಾರು 10 ದಿನದ ಬಳಿಕ ನವೀದ್ ವಕೀಲರೊಂದಿಗೆ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ನಾನು ಶಾಜಿಯಾಳನ್ನು ಕರೆದುಕೊಂಡು ಹೋಗಿಲ್ಲ. ಕೆಲಸದ ಮೇಲೆ ಚೆನ್ನೈಗೆ ಹೋಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಇನ್ನೊಂದೆಡೆ ಕೆಳಮನೆಯ ಮಹಿಳೆ ಶಾಜಿಯಾ ತನ್ನ ಗಂಡ ಮುಬಾರಕ್ಗೆ ವಕೀಲರ ಬಳಿ ಡಿವೋರ್ಸ್ ಪೇಪರ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನವೀದ್ ಮತ್ತು ಶಾಜಿಯ ಒಟ್ಟಿಗೆ ಇರುವುದರ ಬಗ್ಗೆ ಎರಡು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಬ್ಬರು ಸೇರಿಕೊಂಡು ಏನೋ ಪ್ಲ್ಯಾನ್ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ. ಸದ್ಯ ನವೀದ್ ಜೊತೆ ಹೋಗಿದ್ದಾರೆ ಎನ್ನಲಾದ ಶಾಜಿಯಾ, ಈ ಹಿಂದೆ ಬೇರೊಬ್ಬನ ಜೊತೆ ಓಡಿ ಹೋಗಿದ್ದರೆಂಬ ಆರೋಪ ಕೇಳಿಬಂದಿದೆ.
ಒಂದೇ ಕಟ್ಟಡದ ಕೆಳ ಮಹಡಿಯಲ್ಲಿ ಮುಬಾರಕ್ ಮತ್ತು ಶಾಜಿಯಾ ಹಾಗೂ ಎರಡನೇ ಮಹಡಿಯಲ್ಲಿ ನವೀದ್- ಝೀನತ್ ದಂಪತಿ ವಾಸವಾಗಿದ್ದರು. ಮುಬಾರಕ್ ಪತ್ನಿ ಶಾಜಿಯಾ ಜೊತೆಗೆ ಝೀನತ್ ಪತಿ ನವೀದ್ಗೆ ದೈಹಿಕ ಸಂಬಂಧ ಇದೆ ಎಂಬ ಆರೋಪವಿದೆ. ಈ ಜೋಡಿ ಕಳೆದ ಒಂದೂವರೆ ತಿಂಗಳಿನಿಂದ ಕಾಣೆಯಾಗಿತ್ತು. ಕಾಣೆಯಾದ ಹಿನ್ನಲೆ ಮುಬಾರಕ್ ಮತ್ತು ಝೀನತ್ ಪಶ್ಚಿಮ ವಿಭಾಗದ ಡಿಸಿಪಿ ಮೊರೆ ಹೋಗಿದ್ದರು.
ಡಿ. 9ರಂದು ಇವರಿಬ್ಬರೂ ಕಾಣೆಯಾಗಿದ್ದು, ಅದಾಗಿ ಒಂದು ತಿಂಗಳ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತನ್ನ ಪತಿ ಕಾಣೆಯಾಗಿದ್ದು ಹುಡುಕಿ ಕೊಡಿ ಎಂದು ಝೀನತ್ ಎಂಬಾಕೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನ್ನ ಪತ್ನಿಯನ್ನು ಹುಡುಕಿ ಕೊಡಿ ಎಂದು ಮುಬಾರಕ್ ಸಹ ದೂರು ದಾಖಲಿಸಿದ್ದರು.
37 ವರ್ಷದ ನನ್ನ ಗಂಡ ಶೋಯಬ್ ಅಲಿಯಾಸ್ ಮಹಮ್ಮದ್ ನವೀದ್ ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದು, ಡಿ. 9ರಂದು ಬೆಳಗ್ಗೆ 6 ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಸ್ಯಾಂಟ್ರೊ ಕ್ಸಿಂಗ್ ಕಾರಲ್ಲಿ ಹೋಗಿದ್ದು, ಅಂದಿನಿಂದ ಇಂದಿನವರೆಗೂ ವಾಪಸ್ ಬಂದಿಲ್ಲ. ಹನ್ನೆರಡು ವರ್ಷಗಳ ಹಿಂದೆ ನಮ್ಮ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ನಾನು ಗೃಹಿಣಿಯಾಗಿ ಮನೆಯಲ್ಲಿದ್ದು, ಪತಿಯನ್ನು ಹುಡುಕಿ ಕೊಡಿ ಎಂದು ಝೀನತ್ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪತಿಯ ಬಗ್ಗೆ ಸ್ನೇಹಿತರು, ಸಂಬಂಧಿಕರ ಬಳಿ ವಿಚಾರಿಸಿದ್ದರೂ ಮಾಹಿತಿ ಸಿಕ್ಕಿಲ್ಲ. ನಾವಿರುವ ಕೆಳಗಿನ ಮನೆಯಲ್ಲಿ ವಾಸ ಮಾಡುತ್ತಿರುವ ಮುಬಾರಕ್ ಪತ್ನಿ ಶಾಜಿಯಾ ಕೂಡ ಅದೇ ದಿನದಿಂದ ಕಾಣಿಸುತ್ತಿಲ್ಲ. ಅವಳ ಜೊತೆ ನನ್ನ ಗಂಡ ಹೋಗಿರಬಹುದು ಎಂಬ ಗುಮಾನಿ ನನಗಿದ್ದು, ಎಲ್ಲ ಕಡೆ ಹುಡುಕಿದ್ದರೂ ಪತ್ತೆಯಾಗದ ಕಾರಣ ದೂರು ನೀಡುತ್ತಿದ್ದೇನೆ ಎಂಬುದಾಗಿ ತಿಳಿಸಿದ್ದರು.
ಇನ್ನೊಂದೆಡೆ ಮುಬಾರಕ್, ನಾನು ನನ್ನ ಹೆಂಡತಿ ಮತ್ತು ಇಬ್ಬರ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿರುತ್ತೇನೆ. ಜೀವನಕ್ಕಾಗಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿರುತ್ತೇನೆ. ನಾನು ಮತ್ತು ನನ್ನ ಹೆಂಡತಿ ಒಳ್ಳೆಯ ರೀತಿಯ ಜೀವನ ಮಾಡಿಕೊಂಡಿರುತ್ತೇವೆ. ನನ್ನ ಹೆಂಡತಿ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಾಳೆ. ಡಿ. 8ರಂದು ರಾತ್ರಿ ಎಷ್ಟು ಹೊತ್ತಾದರೂ ಮೊಬೈಲ್ ಪೋನ್ ನೋಡಿಕೊಂಡಿದ್ದಕ್ಕೆ ಬೈದು ನಂತರ ಮಲಗಿಕೊಂಡುರುತ್ತೇನೆ. ಮರುದಿನ ಬೆಳಗ್ಗೆ 5.30ಕ್ಕೆ ಹೆಂಡತಿಗೆ ಹೇಳಿ ಕೆಲಸಕ್ಕೆ ಹೋಗಿದ್ದೆ. ಅದೇ ದಿನ ಬೆಳಗ್ಗೆ 9-30ಕ್ಕೆ ಹೆಂಡತಿಗೆ ಕರೆಮಾಡಿ ಏನು ಮಾಡುತ್ತಿದ್ದೀಯಾ? ಎಂದು ವಿಚಾರಿಸಿದಾಗ ಮೊದಲನೇ ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದೇನೆ ಎಂದಿದ್ದಳು. ನಂತರ 10 ಗಂಟೆಗೆ ಕರೆಮಾಡಿದಾಗ ಮೊಬೈಲ್ಫೋನ್ ಸ್ವಿಚ್ಡ್ ಆಫ್ ಇತ್ತು. ಗಾಬರಿಗೊಂಡು ಸುಮಾರು 10.30ಕ್ಕೆ ಮನೆಗೆ ಹೋಗಿ ನೋಡಿದಾಗ ಡೋರ್ ಲಾಕ್ ಆಗಿತ್ತು. ಮನೆಯ ಕೀ ಮಾಲೀಕರಿಗೆ ಕೊಟ್ಟಿದ್ದು, ಗಂಡ ಬಂದರೆ ಕೊಡಿ ಎಂದು ಹೇಳಿ ಹೋಗಿದ್ದಳಂತೆ. ಮನೆಯ ಒಳಗೆ ಹೋಗಿ ನೋಡಿದಾಗ ಅವಳು ಬಳಸುತ್ತಿದ್ದ ಮೊಬೈಲ್ಫೋನ್ ಮನೆಯಲ್ಲೇ ಇತ್ತು. ಹೆಂಡತಿಯನ್ನು ಅವರ ತಾಯಿ ಮನೆ, ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ. ಆದ್ದರಿಂದ ನನ್ನ ಹೆಂಡತಿ ಮತ್ತು ಮಗುವನ್ನು ಪತ್ತೆ ಮಾಡಿಕೊಡಬೇಕೆಂದು ಮುಬಾರಕ್ ಪೊಲೀಸರಿಗೆ ದೂರು ನೀಡಿದ್ದರು.
ಸದ್ಯ ನವೀದ್ ಪ್ರತ್ಯಕ್ಷರಾಗಿದ್ದಾರೆ. ಆದರೆ, ಶಾಜಿಯಾಳ ಬಗ್ಗೆ ಆಕೆಯ ವಕೀಲರು ಯಾವುದೇ ಮಾಹಿತಿ ನೀಡಿಲ್ಲ. ಮಿಸ್ಸಿಂಗ್ ಕಂಪ್ಲೆಂಟ್ ಹಿನ್ನಲೆ ಸಹಿ ಮಾಡಿಸಿ, ನವೀದ್ನನ್ನ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಪೊಲೀಸ್ ವೇಷ ಧರಿಸಿ ವೃದ್ಧೆಯ ಬಳಿ 7 ಸವರನ್ ಚಿನ್ನ ದೋಚಿದ ಕರ್ನಾಟಕ ಗ್ಯಾಂಗ್ ಕೇರಳದಲ್ಲಿ ಅರೆಸ್ಟ್!
ಸಂಕಷ್ಟದ ನಡುವೆಯೂ ಭಾರತ ವೇಗದ ಓಟ: ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ