ಬೆಂಗಳೂರು: ಸರ್ಕಾರದಿಂದ ಹಾಲಿನ ದರ ಏರಿಕೆ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಹೋಟೆಲ್ ಮಾಲೀಕರು ಬೆಲೆ ಹೆಚ್ಚಳ ಮಾಡಲು ಮುಂದಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಈಗಾಗಲೇ ಸಾಲು ಸಾಲು ದರ ಏರಿಕೆಯಿಂದ ಜನರು ಕಂಗಾಲಾಗಿದ್ದು, ಹೊಸ ಸರ್ಕಾರ ಬಂದರೆ ದರ ಏರಿಕೆಗೆ ಕಡಿವಾಣ ಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗುತ್ತಿದೆ.
ಸರ್ಕಾರ ರಚನೆಯಾದ ಬೆನ್ನಲ್ಲೇ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್ ಎದುರಾಗಿತ್ತು. ಇದೀಗ ಹಾಲಿನ ದರವು ಏರಿಕೆಯಾಗಲಿದೆ. ನಿನ್ನೆ ಹಾಲು ಒಕ್ಕೂಟಗಳ ಜತೆ ನಡೆದ ಸಭೆಯ ಬಳಿಕ ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹಿನ್ನಲೆ: ಸಚಿವ ಬಿ. ನಾಗೇಂದ್ರ ಹೇಳಿದ್ದಿಷ್ಟು…
ಹಾಲಿನ ದರ ಏರಿಕೆಯ ಬೆನ್ನಲ್ಲೇ ಹೋಟೆಲ್ ಮಾಲೀಕರು ದರ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಹೋಟೆಲ್ ಮಾಲೀಕ ಸಂಘದ ಅಧ್ಯಕ್ಷ ಪಿಸಿ ರಾವ್ ಮಾತನಾಡಿದ್ದು, ದಿನನಿತ್ಯದ ವಸ್ತುಗಳು ದರ ಜಾಸ್ತಿ ಆಗಿದೆ. ಕಾಫಿ ಪೌಡರ್ ದರ ಹೆಚ್ಚಾಗಿತ್ತು. ಇದೀಗ ಹಾಲಿನ ದರ ಜಾಸ್ತಿ ಆಗಲಿದೆ. ಹೀಗಾಗಿ ಹೋಟೆಲ್ ತಿಂಡಿಗಳು 10% ರಷ್ಟು ಏರಿಕೆ ಆಗಲಿದೆ ಎಂದು ಹೇಳಿದ್ದಾರೆ.
ದರ ಏರಿಕೆ ತೀರ್ಮಾನ ಮಾಡಲು ಇದೇ ಜುಲೈ 25 ರಂದು ಸಭೆ ಮಾಡಲಿದ್ದೇವೆ. ಸಭೆಯಲ್ಲಿ ಯಾವ ತಿಂಡಿಗೆ ಎಷ್ಟು ಜಾಸ್ತಿ ಮಾಡಬೇಕೆಂದು ನಿರ್ಧಾರವಾಗಲಿದೆ ಎಂದು ಹೇಳುವ ಮೂಲಕ ದರ ಏರಿಕೆ ಖಚಿತ ಎಂಬುದನ್ನು ಪಿಸಿ ರಾವ್ ತಿಳಿಸಿದ್ದಾರೆ.
ಹಾಲಿನ ದರ ಉತ್ಪಾದಕರಿಗೆ
5 ರೂಪಾಯಿ ಏರಿಕೆ ಮಾಡಲು ಹಾಲು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದರು. ಆದರೆ, ಸಿಎಂ 3 ರೂ. ಏರಿಕೆಗೆ ಮಾತ್ರ ಅನುಮತಿ ನೀಡಿದ್ದಾರೆ. ಅಲ್ಲದೆ, ಏರಿಕೆಯಾಗುವ 3 ರೂಪಾಯಿ, ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಹಾಲಿನ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಇದರ ಬೆನ್ನಲ್ಲೇ ಹೋಟೆಲ್ ಬಿಲ್ ದರವು ಹೆಚ್ಚಾಗಲಿದ್ದು, ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. (ದಿಗ್ವಿಜಯ ನ್ಯೂಸ್)
ಈ ಕೀಟ ಕಚ್ಚಿದ್ರೆ ಸ್ಥಳದಲ್ಲೇ ಸಾಯ್ತಾರಾ? ವೈರಲ್ ಫೋಟೋದಲ್ಲಿರುವ ಕೀಟದ ಅಸಲಿ ಸಂಗತಿ ಇಲ್ಲಿದೆ…