ಬೆಂಗಳೂರು: ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಆಯುಕ್ತರಾಗಿ ಎನ್. ಮಂಜುನಾಥ್ ಪ್ರಸಾದ್ ನೇಮಕಗೊಂಡಿದ್ದಾರೆ. ತತ್ಕ್ಷಣವೇ ಜಾರಿ ಬರುವಂತೆ ಸರ್ಕಾರ ಈ ಆದೇಶ ಹೊರಡಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆಯಷ್ಟೇ(ಶುಕ್ರವಾರ) ಬೆಂಗಳೂರು ಲಾಕ್ಡೌನ್ ಕುರಿತು ಮಾತನಾಡಿದ್ದ ಅನಿಲ್ ಕುಮಾರ್, ನಗರದಲ್ಲಿ ಕೋವಿಡ್ ಸೋಂಕಿನ ಚೈನ್ ಲಿಂಕ್ ಕತ್ತರಿಸಲು ಲಾಕ್ಡೌನ್ ಅವಧಿಯ ವಿಸ್ತರಣೆ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಂದೆಯೂ ಪ್ರಸ್ತಾವನೆ ಇಟ್ಟಿದ್ದು, ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದರು. ಆದರೆ, ಕರೊನಾ ನಿರ್ವಹಣೆ ಕುರಿತು ಸಿಎಂ ಯಡಿಯೂರಪ್ಪ ನಿನ್ನೆ ನಡೆಸಿದ ಬೆಂಗಳೂರಿನ 8 ವಲಯಗಳ ಉಸ್ತುವಾರಿಗಳ ಸಭೆಯಲ್ಲಿ ಅನಿಲ್ಕುಮಾರ್ ಪಾಲ್ಗೊಂಡಿರಲಿಲ್ಲ. ಸಿಎಂ ಅವರೇ ಅನಿಲ್ ಕುಮಾರ್ರನ್ನು ಸಭೆಯಿಂದ ಹೊರಗಿಟ್ಟಿದ್ದರು ಎನ್ನಲಾಗಿತ್ತು. ಇದೀಗ ಅನಿಲ್ಕುಮಾರ್ರನ್ನು ಎತ್ತಂಗಡಿ ಮಾಡಲಾಗಿದೆ.
ಇದನ್ನೂ ಓದಿರಿ ಸಿಎಂ ಯಡಿಯೂರಪ್ಪಗೆ ಕರೊನಾ ನೆಗೆಟಿವ್
ಬೆಂಗಳೂರಿನಲ್ಲಿ ಕರೊನಾ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ರನ್ನು ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ನೂತನ ಕಮಿಷನರ್ ಮಂಜುನಾಥ್ ಪ್ರಸಾದ್ ಈ ಹಿಂದೆಯೂ ಬಿಬಿಎಂಪಿ ಆಯುಕ್ತರಾಗಿದ್ದವರು.