ಮುಂಬೈ: ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದ ವೇಳೆ ಟ್ವಿಟರ್ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪ ಹೊತ್ತ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಇತ್ತೀಚೆಗಷ್ಟೇ ತುಮಕೂರಿನ ಕ್ಯಾತಸಂದ್ರ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದರು. ಇದೀಗ ಇದೇ ಘಟನೆಗೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಹ ದೂರು ದಾಖಲಿಸುವಂತೆ ಆದೇಶಿಸಿದೆ.
ಇದನ್ನೂ ಓದಿ: ಮಹೇಶ್ ಬಾಬು ಚಿತ್ರಕ್ಕೆ ನಾಯಕಿ ಫಿಕ್ಸ್; ಕೀರ್ತಿ ಸುರೇಶ್ಗೆ ಜನ್ಮದಿನವೇ ಸಿಕ್ತು ಸರ್ಪ್ರೈಸ್
ಸೆಪ್ಟೆಂಬರ್ 21ರಂದು ಕಂಗನಾ ತಮ್ಮ ಟ್ವಿಟರ್ ಖಾತೆಯಲ್ಲಿ ಕೃಷಿ ಮಸೂದೆ ಪ್ರತಿಭಟನೆ ವಿರೋಧವಾಗಿ ಟ್ವೀಟ್ ಮಾಡಿದ್ದರು. ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗೆ ಕರ್ನಾಟಕ, ಪಂಜಾಬ್, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಕಂಗನಾ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು.
ಇದನ್ನೂ ಓದಿ: ಆಮೀರ್ ಖಾನ್ ಪುತ್ರ ಬಾಲಿವುಡ್ಗೆ ಎಂಟ್ರಿ; ಸೌತ್ನ ಈ ಚಿತ್ರದ ರಿಮೇಕ್ನಲ್ಲಿ ನಟನೆ
ಇದೀಗ ಇದೇ ಘಟನೆಗೆ ಸಂಬಂಧಿಸಿದಂತೆ ಕಂಗನಾ ಮತ್ತವರ ಸಹೋದರಿ ರಂಗೋಲಿ ಚಾಂಡೆಲಾ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಕೋರ್ಟ್ ಆದೇಶಿಸಿದೆ. ಜತೆಗೆ ಹೇಳಿಕೆಗೆ ಕಾರಣ ಮತ್ತು ಹಿನ್ನೆಲೆಯ ಸಂಪೂರ್ಣ ವಿಚಾರಣೆ ಮಾಡುವಂತೆಯೂ ತಿಳಿಸಿದೆ. (ಏಜೆನ್ಸೀಸ್)