ನವದೆಹಲಿ: ಜೂನ್ 01ರಿಂದ ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ಗೆ ಭಾರತ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ತಂಡಗಳನ್ನು ಪ್ರಕಟಿಸಿವೆ. ಇನ್ನು ಭಾರತ ತಂಡ ಪ್ರಕಟವಾಗಿದ್ದು, ಹಲವು ಅಚ್ಚರಿಯ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಐಸಿಸಿ ನಡೆಸುವಂತಹ ಪ್ರಮುಖ ಟೂರ್ನಮೆಂಟ್ಗಳಲ್ಲಿ ಅನುಭವ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಟಿ-20 ವಿಶ್ವಕಪ್ಗೆ ಆಟಗಾರರ ಆಯ್ಕೆಗೆ ಐಪಿಎಲ್ ಮಾನದಂಡವಾಗಬಾರದು. ಸಣ್ಣ ಸ್ಟೇಡಿಯಂ ಹಾಗೂ ಫ್ಲ್ಯಾಟ್ ಪಿಚ್ಗಳಲ್ಲಿನ ಪ್ರದರ್ಶನಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಂಪೂರ್ಣ ಆಘಾತಕಾರಿ; ಕೆಕೆಆರ್ ಆಟಗಾರನ ನಡೆಗೆ ಸುನೀಲ್ ಗಾವಸ್ಕರ್ ಕೆಂಡ
ಕೆಲವು ಆಟಗಾರರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂಬ ಮಾತ್ರಕ್ಕೆ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕೆಂಬ ಮಾನದಂಡವೇನಿಲ್ಲ. ಐಪಿಎಲ್ನಲ್ಲಿ, ಯಾವಾಗಲೂ ಒಬ್ಬರು ಅಥವಾ ಇಬ್ಬರು ಅನ್ಕ್ಯಾಪ್ಡ್ ಬೌಲರ್ ಹಾಗೂ ಬ್ಯಾಟ್ಸ್ಮನ್ಗಳು ಸಣ್ಣ ಸ್ಟೇಡಿಯಂ ಹಾಗೂ ಫ್ಲ್ಯಾಟ್ ಪಿಚ್ಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದು. ಆದರೆ, ಅವರೆಲ್ಲಾ ತಿಳಿದುಕೊಳ್ಳಬೇಕಿರುವುದು ಏನೆಂದರೆ ಐಪಿಎಲ್ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ನಡುವೆ ಸಾಕಷ್ಟು ವ್ಯತ್ಯಾಸವಿದೆ.
ಪ್ರತಿಯೊಬ್ಬರು ರಾಷ್ಟ್ರೀಯ ತಂಡ ಅಥವಾ ವಿಶ್ವಕಪ್ಗೆ ಆಯ್ಕೆಯಾಗುವ ಮುನ್ನ ಗಮನಾರ್ಹ ಸಂಖ್ಯೆಯ ಪಂದ್ಯಗಳನ್ನು ಆಡಿರಬೇಕು ಮತ್ತು ಅಪಾರ ಅನುಭವವನ್ನು ಹೊಂದಿರಬೇಕು. ಉದಾಹರಣೆಗೆ 2007ರಲ್ಲಿ ಭಾರತ ಪ್ರಪಥಮ ಬಾರಿಗೆ ಟಿ-20 ವಿಶ್ವಕಪ್ ಗೆದ್ದಾಗ ತಂಡದಲ್ಲಿ ಹೆಚ್ಚು ಮಂದಿ ಅನುಭವಿ ಆಟಗಾರರಿದ್ದ ಕಾರಣ ಇದು ನಮಗೆ ಟ್ರೋಫಿ ಗೆಲ್ಲುವಲ್ಲಿ ಸಹಕಾರಿಯಾಯ್ತು. ಅದೇ ರೀತಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕೆಂದರೆ ಐಪಿಎಲ್ನಲ್ಲಿ ನೀಡುವ ಪ್ರದರ್ಶನ ಮಾನದಂಡವಾಗಬಾರದು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.