ಹೈದರಾಬಾದ್: ಇಲ್ಲಿನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ (ಮಾರ್ಚ್ 27) ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊಸ ಇತಿಹಾಸವನ್ನು ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಮಯಾಂಕ್ ಅವಗರ್ವಾಲ್ (11) ಬಿಟ್ಟರೆ ಎಸ್ಆರ್ಎಚ್ ತಂಡದ ಉಳಿದ ಆಟಗಾರರು ಬಿರುಸಿನ ಆಟವಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದರು. ಈ ಐತಿಹಾಸಿಕ ದಾಖಲೆಗೆ ಹೈದರಾಬಾದ್ ಬ್ಯಾಟ್ಸ್ಮನ್ಗಳ ರನ್ ಕೊಡುಗೆ ಒಂದೆಡೆಯಾದರೆ, ಹಾರ್ದಿಕ್ ಪಾಂಡ್ಯ ಅವರ ಕಳಪೆ ನಾಯಕತ್ವವು ಕೂಡ ಪ್ರಮುಖ ಕಾರಣವಾಗಿದೆ. ಏಕೆಂದರೆ, ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ನಿರ್ಧಾರಗಳೇ ಹೈದರಾಬಾದ್ ತಂಡಕ್ಕೆ ವರವಾದವು. ಹಾರ್ದಿಕ್ ಪಾಂಡ್ಯರಂತಹ ಕೆಟ್ಟ ನಾಯಕತ್ವವನ್ನು ಎಲ್ಲಿಯೂ ನೋಡಿಲ್ಲ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಹಾಗಾದರೆ, ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ಆ ಕೆಟ್ಟ ನಿರ್ಧಾರಗಳು ಯಾವುವು ಎಂದು ನೋಡೋಣ.
ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದೆ. ಮೊದಲ 10 ಓವರ್ಗಳಲ್ಲಿ ಹೈದರಾಬಾದ್ 148 ರನ್ ಗಳಿಸಿತ್ತು. ಇಂತಹ ಪರಿಸ್ಥಿತಿಗೆ ಪ್ರಮುಖ ಕಾರಣ ಹಾರ್ದಿಕ್ ಪಾಂಡ್ಯ. ಏಕೆಂದರೆ ಈ ಪಂದ್ಯದ ಬೌಲಿಂಗ್ ಫಾರ್ಮ್ಯಾಟ್ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಜಸ್ಪ್ರೀತ್ ಬುಮ್ರಾ ಅವರಂತಹ ವಿಶ್ವದರ್ಜೆಯ ಬೌಲರ್ ಆಡುವ ಹನ್ನೊಂದರ ಬಳಗದಲ್ಲಿದ್ದರು ಸರಿಯಾಗಿ ಬಳಸಿಕೊಳ್ಳಲಿಲ್ಲ. ಮೊದಲ ಓವರ್ ನೀಡುವ ಬದಲು ನಾಲ್ಕನೇ ಓವರ್ ಅನ್ನು ಬುಮ್ರಾಗೆ ನೀಡಿದರು. ಆದರೆ, ಅಷ್ಟರಲ್ಲಾಗಲೇ ಹೈದರಾಬಾದ್ ರನ್ಗಳ ಮಹಾಪೂರವನ್ನೇ ಹರಿಸಿತ್ತು. 3 ಓವರ್ಗೆ ತಂಡದ ಮೊತ್ತ ಯಾವುದೇ ವಿಕೆಟ್ ನಷ್ಟವಿಲ್ಲದೆ 40 ರನ್ ಆಗಿತ್ತು. 4ನೇ ಓವರ್ ಎಸೆದ ಬುಮ್ರಾ ಕೇವಲ 5 ರನ್ ನೀಡುವ ಮೂಲಕ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಇದಾದ ಬಳಿಕ ಮತ್ತೆ 12ನೇ ಓವರ್ವರೆಗೂ ಬುಮ್ರಾಗೆ ಹಾರ್ದಿಕ್ ಬೌಲಿಂಗ್ ಮಾಡಲು ಅವಕಾಶವನ್ನೇ ನೀಡಲಿಲ್ಲ. ಅಷ್ಟರಲ್ಲಾಗಲೇ ಹೈದರಾಬಾದ್ ತಂಡದ ಮೊತ್ತ 173 ರನ್ಗೆ 3 ವಿಕೆಟ್ ಕಳೆದುಕೊಂಡಿತ್ತು. 13ನೇ ಓವರ್ ಎಸೆದ ಬುಮ್ರಾ ಕೇವಲ 7 ರನ್ ನೀಡಿದರು. ಬಳಿಕ 15ನೇ ಓವರ್ನಲ್ಲಿ 11 ರನ್ ಹಾಗೂ 19ನೇ ಓವರ್ನಲ್ಲಿ 13 ರನ್ ನೀಡಿದರು. ಅಲ್ಲಿಗೆ 4 ಓವರ್ಗಳಲ್ಲಿ ಕೇವಲ 36 ರನ್ಗಳನ್ನು ಮಾತ್ರ ಬುಮ್ರಾ ನೀಡಿದರು. ಆದರೆ, ಹಾರ್ದಿಕ್ ಸೇರಿದಂತೆ ಉಳಿದ ಎಲ್ಲ ಬೌಲರ್ಗಳು ಎಸ್ಆರ್ಎಚ್ ಬ್ಯಾಟ್ಸ್ಮನ್ಗಳಿಗೆ ಸುಲಭ ತುತ್ತಾದರು.
ವಿಶ್ವ ಶ್ರೇಷ್ಠ ಬೌಲರ್ನನ್ನು ಸರಿಯಾಗಿ ಬಳಸಿಕೊಳ್ಳದೆ ಹಾರ್ದಿಕ್ ತಪ್ಪು ಮಾಡಿದರು. ಗಲ್ಲಿ ಕ್ರಿಕೆಟ್ನಲ್ಲೂ ಕೂಡ ಇಂಥಾ ಎಡವಟ್ಟು ಮಾಡುವುದಿಲ್ಲ. ಗಲ್ಲಿ ಕ್ರಿಕೆಟ್ನ ಪ್ರತಿಯೊಬ್ಬರಿಗೂ ಇರುವ ಕನಿಷ್ಠ ಜ್ಞಾನವೂ ಹಾರ್ದಿಕ್ಗೆ ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್ಗಳ ಮೂಲಕ ಹಾರ್ದಿಕ್ ಕಾಲೆಳೆಯುತ್ತಿದ್ದಾರೆ.
ಇನ್ನೂ ಪದಾರ್ಪಣೆ ಟೂರ್ನಿಯಲ್ಲೇ ಕ್ವೆನಾ ಮಫಕಾ 4 ಓವರ್ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ ಗರಿಷ್ಠ 66 ರನ್ ನೀಡಿದರು. ಹೈದರಾಬಾದ್ ತಂಡದ ಆಟಗಾರರು ರನ್ ಮಳೆ ಹರಿಸುತ್ತಿದ್ದರೆ ಹಾರ್ದಿಕ್ ಪಾಂಡ್ಯ ಮುಗುಳ್ನಗುತ್ತಿದ್ದದ್ದು ಮುಂಬೈ ಅಭಿಮಾನಿಗಳನ್ನು ಕೆರಳಿಸಿದೆ. ಪಂದ್ಯದ ನಂತರವೂ ಹಾರ್ದಿಕ್ ಪಾಂಡ್ಯ ಮಗುವಿನಂತೆ ಚಪ್ಪಾಳೆ ತಟ್ಟಿದ್ದು ಕಂಡು ಬಂತು. ಮುಂಬೈ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಈಗಾಗಲೇ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಗಂಭೀರತೆ ಕಾಯ್ದುಕೊಳ್ಳಬೇಕಾದ ಹಾರ್ದಿಕ್, ಸುಮ್ಮನೇ ನಗುತ್ತಿದ್ದು ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ. (ಏಜೆನ್ಸೀಸ್)
ಉತ್ತರಕಾಂಡ ಸಿನಿಮಾದಿಂದ ಹೊರಬಂದಿದ್ದೇಕೆ? ಕೊನೆಗೂ ಮೌನ ಮುರಿದ ನಟಿ ರಮ್ಯಾ
9 ನಿಂಬೆಹಣ್ಣಿಗೆ 2.3 ಲಕ್ಷ ರೂಪಾಯಿ! ಈ ದೇವಸ್ಥಾನದ ನಿಂಬೆಗಿರುವ ಶಕ್ತಿ ಎಂಥದ್ದು? ಯಾಕಿಷ್ಟು ಡಿಮ್ಯಾಂಡ್?