ಹೈದರಾಬಾದ್: ಕನ್ನಡ ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿ ತೆಲುಗು ಚಿತ್ರರಂಗಕ್ಕೆ ಹಾರಿ, ಭರ್ಜರಿ ಯಶಸ್ಸು ಕಂಡಿರುವ ನಟಿ ಶ್ರೀಲೀಲಾ ಇದೀಗ ಡೇಂಜರ್ ಝೋನ್ನಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ನಟಿಯರು ಮೊದಲ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದುಬಿಡುತ್ತಾರೆ. ಸಿನಿಮಾ ಚೆನ್ನಾಗಿಲ್ಲ ಅಂದ್ರು ನಾಯಕಿಯರು ಮಾತ್ರ ಮೊದಲ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ, ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಸ್ಟಾರ್ ನಟಿಯರ ಸಾಲಿಗೆ ಸೇರಿಬಿಡುತ್ತಾರೆ. ಇಂತಹ ನಾಯಕಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರು.
ಶ್ರೀಲೀಲಾ ತಾನು ನಟಿಸಿದ ಮೊದಲ ತೆಲುಗು ಸಿನಿಮಾ “ಪೆಳ್ಳಿಸಂದಡಿ” ಯಲ್ಲೇ ಎಲ್ಲರ ಗಮನ ಸೆಳೆದರು. ಆದರೆ, ಈ ಸಿನಿಮಾ ಹೇಳಿಕೊಳ್ಳುವಷ್ಟು ಹಿಟ್ ಆಗಲಿಲ್ಲ. ಬಳಿಕ ಧಮಾಕ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ತನ್ನ ನಟನೆ, ಗ್ಲಾಮರ್ ಲುಕ್ ಮತ್ತು ಡಾನ್ಸ್ನಿಂದಲೇ ಶ್ರೀಲೀಲಾ ಟಾಲಿವುಡ್ನಲ್ಲಿ ಒಳ್ಳೆಯ ಹೆಸರು ಮಾಡಿದರು. ಎರಡನೇ ಚಿತ್ರದಲ್ಲೇ ಸ್ಟಾರ್ ಹೀರೋಯಿನ್ ಪಟ್ಟ ಗಿಟ್ಟಿಸಿದರು.
ಧಮಾಕ ಬಳಿಕ ಟಾಲಿವುಡ್ನಲ್ಲಿ ಎಲ್ಲರೂ ಶ್ರೀಲೀಲಾ ಜಪ ಮಾಡಲು ಶುರು ಮಾಡಿದರು. ಎಲ್ಲ ಬಿಗ್ ಬ್ಯಾನರ್ ನಿರ್ಮಾಣ ಸಂಸ್ಥೆಗಳು ಕೂಡ ಶ್ರೀಲೀಲಾರನ್ನು ಹುಡುಕಿಕೊಂಡು ಬಂದರು. ಸಾಕಷ್ಟು ಸಿನಿಮಾಗಳಿಗೆ ಸಹಿ ಹಾಕಿದ ಶ್ರೀಲೀಲಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಸ್ಕ್ರಿಪ್ಟ್ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ ಶ್ರೀಲೀಲಾ ಇದೀಗ ಡೇಂಜರ್ ಝೋನ್ಗೆ ಬಂದು ನಿಂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾ ನಟನೆಯ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿವೆ.
ಸ್ಕಂದ, ಆದಿಕೇಶವ ಮತ್ತು ಎಕ್ಸ್ಟ್ರಾರ್ಡಿನರಿ ಮ್ಯಾನ್ ಸಿನಿಮಾಗಳು ಫ್ಲಾಪ್ ಆಗಿವೆ. ನಂದಮುರಿ ಬಾಲಕೃಷ್ಣ ಅಭಿನಯದ ಭಗವಂತ್ ಕೇಸರಿ ಸಿನಿಮಾ ಮಾತ್ರ ಹಿಟ್ ಆಯಿತು. ಈ ಚಿತ್ರದಲ್ಲಿ ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ನಟಿಸಿದರೂ ಸಿನಿಮಾ ಯಶಸ್ಸು ಬಾಲಯ್ಯ ಖಾತೆಗೆ ಸೇರಿಕೊಂಡಿತು. ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು ನೀಡಿದರೂ ಶ್ರೀಲೀಲಾಗೆ ಅವಕಾಶಗಳು ಮಾತ್ರ ಕಮ್ಮಿ ಆಗಿಲ್ಲ. ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಈ ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಯಿತು.
ಈ ಸಿನಿಮಾ ಖಂಡಿತವಾಗಿ ಹಿಟ್ ಆಗಿ ಇಂಡಸ್ಟ್ರಿಯಲ್ಲಿ ಒಳ್ಳೆಯ ಟಾಕ್ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಶ್ರೀಲೀಲಾ ಇದ್ದರು. ಆದರೆ, ಜನವರಿ 12ರಂದು ಬಿಡುಗಡೆಯಾದ ಗುಂಟೂರು ಖಾರಂ ಸಿನಿಮಾ ಮೊದಲ ದಿನವೇ ನೆಗಿಟಿವ್ ವಿಮರ್ಶೆಯನ್ನು ಪಡೆದುಕೊಂಡಿದೆ. ಅಲ್ಲದೆ, ಶ್ರೀಲೀಲಾ ಪಾತ್ರವು ಕೂಡ ಯಾರಿಗೂ ಇಷ್ಟವಾಗಿಲ್ಲ. ಈ ಹಿಂದೆ ಪೂಜಾ ಹೆಗ್ಡೆ ಮತ್ತು ಕೃತಿ ಶೆಟ್ಟಿ ಕೂಡ ಇದೇ ಹಾದಿಯಲ್ಲಿ ಬಂದು ಇದ್ದಕ್ಕಿದ್ದಂತೆ ಕಣ್ಮರೆಯಾದರು ಇದೀಗ ಶ್ರೀಲೀಲಾ ಕೂಡ ಇದೇ ರೀತಿ ಕಣ್ಮರೆಯಾಗಲಿದ್ದಾರೆ ಎಂಬುದು ಟಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರವಾಗಿದೆ.
ಶ್ರೀಲೀಲಾ ಮಾಡಿದ ತಪ್ಪೇನು?
ಶ್ರೀಲೀಲಾ ಬ್ಯೂಟಿಫುಲ್ ಹೀರೋಯಿನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಬೆಳ್ಳಿ ಪರದೆಯ ಮೇಲೆ ತಮ್ಮ ಗ್ಲಾಮರ್ ಮೂಲಕವೇ ಎಲ್ಲರನ್ನು ಮನಸೂರೆಗೊಳಿಸಿದ್ದಾರೆ. ತಮ್ಮ ಡಾನ್ಸ್ನಿಂದ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಆದರೆ, ಸ್ಟೋರಿ ಆಯ್ಕೆಯಲ್ಲಿ ಶ್ರೀಲೀಲಾ ಎಡವುತ್ತಿದ್ದಾರೆ ಎಂದು ಸಿನಿ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಗ್ಲಾಮರ್ಗೆ ಸೀಮಿತವಾಗಿ ಪಾತ್ರಗಳು ಕೂಡ ಪ್ರಭಾವ ಬೀರುವಂತಹ ಸ್ಟೋರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ತಮ್ಮ ನಟನೆಯ ಸಾಬೀತು ಮಾಡುಬಹುದಾಗ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಸ್ಟಾರ್ ನಾಯಕಿಯ ಪಟ್ಟವನ್ನು ಕಳೆದುಕೊಳ್ಳಲಿದ್ದಾರೆ ಎಂಬುದು ಸಿನಿ ತಜ್ಞರ ಅಭಿಪ್ರಾಯವಾಗಿದೆ.
ಸದ್ಯ ಶ್ರೀಲೀಲಾ ಅವರು ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)
ಫೋನ್ ಚಾರ್ಜ್ ಮಾಡುವ ಅಗತ್ಯವೇ ಇಲ್ಲ: ಶೀಘ್ರದಲ್ಲೇ ಬರಲಿದೆ 50 ವರ್ಷ ತಾಳಿಕೆ ಬರುವ ಬ್ಯಾಟರಿ!!
ಜ್ಞಾನವಾಪಿ ಮಸೀದಿ ಒಳಗಿರುವ ವಾಝುಖಾನ ಟ್ಯಾಂಕ್ ಸ್ವಚ್ಛತೆಗೆ ಗ್ರೀನ್ ಸಿಗ್ನಲ್ ಕೊಟ್ಟ ಸುಪ್ರೀಂಕೋರ್ಟ್