ಚೆನ್ನೈ: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ವಿಜಯ್, ರಾಜಕೀಯಕ್ಕೆ ಪ್ರವೇಶ ಮಾಡಿರುವುದನ್ನು ತಮಿಳು ಪ್ರಗತಿಪರ ಪಕ್ಷದ ಸಂಸ್ಥಾಪಕಿ ವೀರಲಕ್ಷ್ಮೀ ತೀವ್ರವಾಗಿ ಟೀಕಿಸಿದ್ದಾರೆ.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೀರಲಕ್ಷ್ಮೀ, ವಿಜಯ್ ಅವರ ದೊಡ್ಡ ಅಭಿಮಾನಿಯಾಗಿದ್ದ ಹುಡುಗಿಯೊಬ್ಬಳು ಒಂದು ವರ್ಷದ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಳು. ಈ ವಿಚಾರವನ್ನು ಮನೆಗೆ ಹೇಳಲು ಭಯಗೊಂಡ ಹುಡುಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಳು.
ದೇಹದ ಮೇಲೆ ಶೇ.60ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಹಣವಿಲ್ಲದ ಕಾರಣ ಹುಡುಗಿ ವಿಡಿಯೋ ಮೂಲಕ ವಿಜಯ್ ಬಳಿ ಸಹಾಯ ಕೋರಿದಳು. ಆದರೆ, ವಿಜಯ್ ಆಕೆಯ ನೆರವಿಗೆ ಬಾರಲೇ ಇಲ್ಲ.
ನೆರವು ಸಿಗದೇ, ಸಮರ್ಪಕ ಚಿಕಿತ್ಸೆಯೂ ದೊರೆಯದೇ ಹುಡುಗಿ ಮೃತಪಟ್ಟಳೆಂದು ವೀರಲಕ್ಷ್ಮೀ ಆರೋಪಿಸಿದ್ದಾರೆ. ತನ್ನ ಅಭಿಮಾನಿಗೂ ಸಹಾಯ ಮಾಡುವ ಮನಸ್ಸು ಇಲ್ಲದ ವಿಜಯ್, ರಾಜಕೀಯಕ್ಕೆ ಬಂದು ಜನರ ಉದ್ಧಾರ ಮಾಡುತ್ತಾರಾ ಎಂದು ಪ್ರಶ್ನಿಸುವ ಮೂಲಕ ವೀರಲಕ್ಷ್ಮೀ, ವಿಜಯ್ ರಾಜಕೀಯ ಎಂಟ್ರಿಯನ್ನು ಟೀಕಿಸಿದ್ದಾರೆ.
ಅಲ್ಲದೆ, ವಿಜಯ್ ರಾಜಕೀಯಕ್ಕೆ ಇಳಿದಿರುವುದು ಹಣ ಮಾಡುವ ದುರುದ್ದೇಶದಿಂದ ಮತ್ತು ತಾನು ಸಿನಿಮಾದಿಂದ ಸಂಪಾದಿಸಿರುವ ಹಣವನ್ನು ಉಳಿಸಿಕೊಳ್ಳುವ ಸಲುವಾಗಿ ಎಂದು ವೀರಲಕ್ಷ್ಮೀ ಆರೋಪಿಸಿದ್ದಾರೆ.
ಅಂದಹಾಗೆ ಇಳಯದಳಪತಿ ವಿಜಯ್ ಫೆ. 02ರಂದು ತಮ್ಮ ನೂತನ ರಾಜಕೀಯ ಪಕ್ಷದ ಹೆಸರನ್ನು ಘೋಷಣೆ ಮಾಡುವ ಮೂಲಕ ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ ವಿಜಯ್, ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ತಮ್ಮ ಹೊಸ ಪಕ್ಷಕ್ಕೆ “ತಮಿಳಗಾ ವೆಟ್ರಿ ಕಳಗಂ” ಎಂದು ಹೆಸರಿಟ್ಟಿದ್ದಾರೆ. ಕಳೆದ ವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಅವರ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ ರಾಜಕೀಯ ಪಕ್ಷದ ರಚನೆಗೆ ಒಪ್ಪಿಗೆ ನೀಡಿದ ಬಳಿಕ ನಟ ವಿಜಯ್ ದೊಡ್ಡ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿಜಯ್, ನಾವು ನಮ್ಮ ಪಕ್ಷ ‘ತಮಿಳಗಾ ವೆಟ್ರಿ ಕಳಗಂ’ ಅನ್ನು ನೋಂದಾಯಿಸಲು ಚುನಾವಣಾ ಆಯೋಗಕ್ಕೆ ಇಂದು ಅರ್ಜಿ ಸಲ್ಲಿಸುತ್ತಿದ್ದೇವೆ. ಮುಂಬರುವ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತವಾಗಿ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ. ಜನರು ಕೂಡ ಇದನ್ನೇ ಬಯಸುತ್ತಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿದ ನಟ ವಿಜಯ್: ಹೊಸ ಪಕ್ಷದ ಹೆಸರು ಘೋಷಣೆ