ಚೆನ್ನೈ: ನಟಿ ಅರುಂಧತಿ ನಾಯರ್ ಬೈಕ್ ಮಾರ್ಚ್ 14 ರಂದು ಅಪಘಾತಕ್ಕೀಡಾಯಿತು. ಆಕೆಯ ಸಹೋದರಿ ಆರತಿ ನಾಯರ್ ಈ ಸುದ್ದಿಯನ್ನು ಖಚಿತಪಡಿಸಿದ್ದು, ಅರುಂಧತಿ ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಅರುಂಧತಿ ತಿರುವನಂತಪುರಂನ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿದ್ದಾರೆ. ಈ ಸುದ್ದಿ ತಿಳಿದ ನಂತರ ನಟಿಯ ಅಭಿಮಾನಿಗಳು ತುಂಬಾ ಆತಂಕಗೊಂಡಿದ್ದು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದಾರೆ.
ಸೋಮವಾರ (ಮಾರ್ಚ್ 18) ಸಹೋದರಿ ಆರತಿ ನಾಯರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ‘ತಮಿಳುನಾಡಿನ ಪತ್ರಿಕೆಗಳು ಮತ್ತು ದೂರದರ್ಶನ ಚಾನೆಲ್ಗಳಲ್ಲಿ ವರದಿಯಾದ ಸುದ್ದಿಗಳನ್ನು ಸ್ಪಷ್ಟಪಡಿಸುವ ಅಗತ್ಯವಿದೆ’ ಎಂದು ನಾವು ಭಾವಿಸಿದ್ದೇವೆ. ಮೂರು ದಿನಗಳ ಹಿಂದೆ ನನ್ನ ತಂಗಿ ಅರುಂಧತಿ ನಾಯರ್ ಅವರಿಗೆ ಅಪಘಾತವಾಗಿದ್ದು ನಿಜ. ಆಕೆ ಗಂಭೀರವಾಗಿ ಗಾಯಗೊಂಡಿದ್ದು, ತಿರುವನಂತಪುರಂನ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ.
ಅಪಘಾತವಾಗಿದ್ದೆಲ್ಲಿ?
ವರದಿಗಳ ಪ್ರಕಾರ, ಕೋವಲಂ ಬೈಪಾಸ್ನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅರುಂಧತಿ ಅವರ ತಲೆಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಅಪಘಾತ ಸಂಭವಿಸಿದಾಗ ಆಕೆ ತನ್ನ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಮನೆಗೆ ಮರಳುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಹೋದರಿ ಈ ಸುದ್ದಿಯನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಮತ್ತು ಉದ್ಯಮದ ತಾರೆಯರು ಆತಂಕಗೊಂಡಿದ್ದಾರೆ. ಅನೇಕ ಅಭಿಮಾನಿಗಳು ಕಾಮೆಂಟ್ಗಳಲ್ಲಿ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ ಮತ್ತು ನಟಿಯ ಆರೋಗ್ಯದ ಕುರಿತು ನಿರಂತರವಾಗಿ ಅಪ್ಡೇಟ್ಸ್ ಕೇಳುತ್ತಿದ್ದಾರೆ.
ಅರುಂಧತಿ ನಾಯರ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ 2014 ರಲ್ಲಿ ‘ಪೊಂಗಿ ಎಜು ಮನೋಹರ’ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಅವರು ನಟ ವಿಜಯ್ ಆಂಟೋನಿ ಅವರ ‘ಸೈತಾನ್’ ಚಿತ್ರದ ಮೂಲಕ ಪ್ರಸಿದ್ಧರಾದರು. 2018 ರಲ್ಲಿ, ಅವರು ‘ಒಟ್ಟಕೋರು ಕಾಮುಕನ್’ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೊನೆಯದಾಗಿ 2023 ರ ತಮಿಳು ಚಿತ್ರ ‘ಆಯಿರಂ ಪೊರಕಾಸುಕಲ್’ ನಲ್ಲಿ ಕಾಣಿಸಿಕೊಂಡರು.