ಬ್ರಹ್ಮಾವರ: ಬಾರಕೂರು-ಬ್ರಹ್ಮಾವರ ರಸ್ತೆಯ ಆಕಾಶವಾಣಿ ಬಳಿ ಸೋಮವಾರ ಬೆಳಗ್ಗೆ ಎಲೆಕ್ಟ್ರಿಕ್ ವಾಹನವೊಂದು ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ ಸಂಭವಿಸಿದೆ.
ಸೂಚನೆ ತಿಳಿದ ಕೂಡಲೇ ನಿಲುಗಡೆ
ಬಾರಕೂರು ಭಾಗದಿಂದ ಉಡುಪಿ ಕಡೆ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನಕ್ಕೆ ಬೆಂಕಿ ತಗುಲಿದ್ದು, ಸೂಚನೆ ತಿಳಿದ ಕೂಡಲೇ ಅವರು ವಾಹನವನ್ನು ನಿಲುಗಡೆ ಮಾಡಿ ಪಾರಾಗಿದ್ದಾರೆ. ಇಲ್ಲದಿದ್ದರೆ ಪ್ರಾಣಾಪಾಯ ಸಂಭವವಿತ್ತು.
ನೀರು ಸುರಿದರೂ ಆರಲಿಲ್ಲ ಬೆಂಕಿ
ರಸ್ತೆಯಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಬೈಕ್ ಹೊತ್ತಿ ಉರಿಯುವುದನ್ನು ಕಂಡು ನೀರು ಸುರಿಯುವ ಪ್ರಯತ್ನ ಮಾಡಿದರೂ, ಬೆಂಕಿಯ ಕೆನ್ನಾಲಿಗೆ ಇಡೀ ವಾಹನವನ್ನು ಸುಟ್ಟು ಕರಕಲಾಗಿಸಿದೆ.
ಯಾವ ಕಂಪನಿಯೆಂದು ಗುರುತಿಸಲಾಗದ ಸ್ಥಿತಿ
ವಾಹನ ಸವಾರ ಯಾರು? ಯಾವ ಕಂಪನಿಯ ವಾಹನ ಎನ್ನುವುದನ್ನು ಗುರುತಿಸಲಾಗದ ಸ್ಥಿತಿಯಲ್ಲಿ ಬೈಕ್ ಇದೆ. ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗುವುದನ್ನು ಕಂಡು ದಾರಿಹೋಕರು ಬದಿಗೆ ಸರಿಸಿದ್ದಾರೆ. ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ವಾಹನಗಳು ಕೆಲವು ಕಡೆ ಇದೇ ರೀತಿ ಹೊತ್ತಿ ಉರಿಯುತ್ತಿದ್ದು ಬಿಸಿಲಿನ ಝಳ ಕಾರಣವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.