More

    ದಶಕ ಕಳೆದರೂ ಪೂರ್ತಿಗೊಳ್ಳದ ಕಾಮಗಾರಿ

    -ಪುರುಷೋತ್ತಮ ಪೆರ್ಲ ಕಾಸರಗೋಡು

    ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರು ಎದುರಿಸುತ್ತಿರುವ ಭೀಕರತೆ ಚಿತ್ರಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಎದುರು ನಿರ್ಮಾಣಗೊಳ್ಳುತ್ತಿರುವ ಕಾಂಕ್ರೀಟ್ ಶಿಲ್ಪದ ಕೆಲಸ ಮತ್ತೆ ಆರಂಭಗೊಂಡಿದೆ.

    2005ರಲ್ಲಿ ಆರಂಭಗೊಂಡಿದ್ದ ಕಾಂಕ್ರೀಟ್ ಶಿಲ್ಪದ ಕೆಲಸ ಹಲವು ಬಾರಿ ಸ್ಥಗಿತಗೊಂಡಿದ್ದು, ಪ್ರಸ್ತುತ ಬಹುತೇಕ ಪೂರ್ತಿಗೊಂಡಿದ್ದರೂ, ಅಂತಿಮ ಹಂತದ ಕೆಲಸ ಮತ್ತೆ ಕೈಗೆತ್ತಿಕೊಳ್ಳಲಾಗಿದೆ. 2008ರಲ್ಲಿ ಅಂದಿನ ಜಿಪಂ ಅಧ್ಯಕ್ಷ ಎಂ.ವಿ. ಬಾಲಕೃಷ್ಣನ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಕಾಂಕ್ರೀಟ್ ಶಿಲ್ಪ ಕಲೆ ಕಾಮಗಾರಿ ಒಂದೂವರೆ ದಶಕ ಕಳೆದರೂ ಪೂರ್ತಿಗೊಳ್ಳದಿರುವ ಬಗ್ಗೆ ಎಂಡೋಸಲ್ಫಾನ್ ಸಂತ್ರಸ್ತರೂ ಸೇರಿದಂತೆ ಜಿಲ್ಲೆಯ ಜನತೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

    ರಾಜ್ಯದ ಪ್ರಮುಖ ಶಿಲ್ಪಿ ಕಾನಾಯಿ ಕುಞಿರಾಮನ್ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಕಾಂಕ್ರೀಟ್ ಶಿಲ್ಪ, ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಕಂದಮ್ಮಗಳ ತಾಯಿಯ ರೋದನ ಪ್ರತಿಬಿಂಬಿಸುವ ರೀತಿಯಲ್ಲಿ ನಿರ್ಮಿಸಲಾಗಿದೆ. ಕಾಂಕ್ರೀಟ್ ಶಿಲ್ಪದಲ್ಲಿ ಎಂಡೋಸಲ್ಫಾನ್ ಪೀಡಿತ ಇಬ್ಬರು ಮಕ್ಕಳು ಅಳುತ್ತಿರುವುದು ಹಾಗೂ ತಾಯಿಯೊಬ್ಬಳು ಹೋರಾಟದ ಸಂಕೇತವಾಗಿ ಕೈಮೇಲಕ್ಕೆತ್ತಿ ಮುಷ್ಟಿಹಿಡಿದು ಯಾಚಿಸುತ್ತಿರುವ ದೃಶ್ಯ ಚಿತ್ರಿಸಲಾಗಿದೆ.

    ಇನ್ನೊಂದು ಶಿಲ್ಪದಲ್ಲಿ ಸ್ವಾತಂತ್ರೃ ಹೋರಾಟದಲ್ಲಿ ಜಿಲ್ಲೆಯ ಸಹಭಾಗಿತ್ವ, ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಾಗಿದೆ. ರಾಜ್ಯದಲ್ಲೇ ಅತಿ ಎತ್ತರದ ಕಾಂಕ್ರಿಟ್ ಶಿಲ್ಪ ಇದಾಗಿದೆ. ಕಾಂಕ್ರೀಟ್ ಶಿಲ್ಪ 45ಅಡಿ ಎತ್ತರ ಹೊಂದಿದೆ. 2008ರಲ್ಲಿ 20ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಶಿಲ್ಪ ನಿರ್ಮಾಣಕ್ಕೆ ಯೋಜನೆ ತಯಾರಿಸಿದ್ದರೂ, ಈ ಮೊತ್ತ ಇಂದು 40ಲಕ್ಷ ರೂ.ಅಂಚಿಗೆ ತಲುಪಿದೆ. ಮೊತ್ತ ಲಭ್ಯತೆ ವಿಳಂಬ ಹಿನ್ನೆಲೆಯಲ್ಲಿ ಹಲವು ಬಾರಿ ಕಾಮಗಾರಿ ಸ್ಥಗಿತಗೊಳಿಸಬೇಕಾಗಿ ಬಂದಿದೆ.

    ಶಿಲ್ಪಕ್ಕೆ ಅಪಸ್ವರ

    ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರು ಸಂಕಷ್ಟದಲ್ಲಿರುವಾಗ ಲಕ್ಷಾಂತರ ರೂ.ವೆಚ್ಚದಲ್ಲಿ ಶಿಲ್ಪ ನಿರ್ಮಾಣದ ಅಗತ್ಯವೇನು ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ. ಎಂಡೋಸಲ್ಫಾನ್ ಪೀಡಿತರ ಪ್ರತೀಕವಾಗಿ 2008ರಲ್ಲಿ ಆರಂಭಿಸಿದ ಕಾಮಗಾರಿ ಶೀಘ್ರ ಪೂರ್ತಿಗೊಳಿಸದಿರುವುದರ ಹಿಂದೆ ಆಡಳಿತ ಪಕ್ಷದ ಹಿಡನ್ ಅಜೆಂಡಾ ಒಳಗೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಕಾಮಗಾರಿ ಶೀಘ್ರ ಪೂರ್ತಿಗೊಳಿಸಿದಲ್ಲಿ, ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಅಸ್ತಿತ್ವವನ್ನು ಸ್ವತಃ ಸರ್ಕಾರವೇ ಒಪ್ಪಿಕೊಂಡಂತಾಗುತ್ತದೆ ಎಂಬ ಭೀತಿಯೂ ಸರ್ಕಾರಕ್ಕೆ ಒಳಗಿಂದೊಳಗೆ ಕಾಡಲಾರಂಭಿಸಿದೆ ಎಂಬುದು ಎಂಡೊಸಲ್ಫಾನ್ ವಿರೋಧಿ ಹೋರಾಟಗಾರರೊಬ್ಬರ ಅಭಿಪ್ರಾಯವಾಗಿದೆ.

    ಸುಮಾರು 20ಲಕ್ಷ ರೂ. ವೆಚ್ಚದಲ್ಲಿ ಆರಂಭಿಸಿದ ಯೋಜನೆ ಇಂದು 40ಲಕ್ಷದ ವರೆಗೆ ಬಂದು ನಿಂತಿದೆ. ಹಲವು ಬಾರಿ ಸ್ಥಗಿತಗೊಳಿಸಲಾಗಿದ್ದ ಶಿಲ್ಪದ ಕಾಮಗಾರಿಯನ್ನು ಖುದ್ದು ಶಿಲ್ಪಿ ಕಾನಾಯಿ ಕುಞಿರಾಮನ್ ನೇತೃತ್ವದಲ್ಲೇ ನಡೆಸಲಾಗುತ್ತಿದೆ.

    ಪ್ರಸಿದ್ಧ ಶಿಲ್ಪಿ

    ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ಕುಟ್ಟಮ್ಮತ್ ವಿವಾಸಿ ಕಾನಾಯಿ ಕುಞಿರಾಮನ್ ಖ್ಯಾತ ಕಾಂಕ್ರೀಟ್ ಶಿಲ್ಪ ಕಲಾವಿದರಾಗಿ ಹೆಸರು ಗಳಿಸಿದ್ದಾರೆ. 1965ರಲ್ಲಿ ಮದ್ರಾಸ್‌ನಲ್ಲಿ ಶಿಲ್ಪಕಲೆಯ ಬಗ್ಗೆ ತರಬೇತಿ ಪಡೆದಿರುವ ಇವರಿಗೆ ಬ್ರಿಟಿಷ್ ಸರ್ಕಾರದಿಂದ ಸ್ಕಾಲರ್‌ಶೀಪ್ ಲಭಿಸಿತ್ತು. ಅವರ ಅದ್ಭುತ ಶಿಲ್ಪಕಲೆಯನ್ನು ಮೆಚ್ಚಿ 1982ರಲ್ಲಿ ಅಮೆರಿಕಾ ತನ್ನ ಸ್ಟೇಟ್ ಗೆಸ್ಟ್ ಆಗಿ ಒಂದುವರೆ ತಿಂಗಳ ಕಾಲ ಅಮೆರಿಕಾದ ನಾನಾ ಕಡೆ ಪ್ರವಾಸಕ್ಕೆ ಅವಕಾಶ ಕಲ್ಪಿಸಿತ್ತು. ಮಲಪ್ಪುರಂನ ಶಂಖುಮುಖದಲ್ಲಿ ಅವರು ನಿರ್ಮಿಸಿರುವ ಅದ್ಭುತ ಶಿಲ್ಪಕಲೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿದೆ. ಕೇರಳದ ವಿವಿಧೆಡೆ ಅಲ್ಲದೆ ಮುಂಬೈ, ದೆಹಲಿ ಸೇರಿದಂತೆ ದೇಶದ ನಾನಾ ಕಡೆ ಅವರ ಶಿಲ್ಪಕಲೆ ನಿರ್ಮಾಣಗೊಂಡಿದೆ.

    ಶಿಲ್ಪಕಲೆ ನಿರ್ಮಿಸಲು 15ವರ್ಷಗಳ ಸುದೀರ್ಘ ಅವಧಿ ತೆಗೆದುಕೊಳ್ಳಬೇಕಾಗಿ ಬಂದಿರುವುದು ವಿಪರ್ಯಾಸ. ಸಕಾಲದಲ್ಲಿ ಮೊತ್ತ ಲಭ್ಯವಾಗದಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ತಿಯಾಗಲಿದ್ದು, ಇದು ರಾಜ್ಯದಲ್ಲೇ ಅತ್ಯಂತ ಎತ್ತರದ ಕಾಂಕ್ರೀಟ್ ಶಿಲ್ಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
    -ಕಾನಾಯಿ ಕುಞಿರಾಮನ್
    ಕಾಂಕ್ರೀಟ್ ಶಿಲ್ಪಿ

    ಶಿಲ್ಪ ನಿರ್ಮಾಣದ ಜತೆಗೆ ಎಂಡೋಸಲ್ಫಾನ್ ಪೀಡಿತರ ಅಳಲು ಆಲಿಸಲೂ ಸರ್ಕಾರ ಮುಂದಾಗಬೇಕು. ಹಲವಾರು ಮಂದಿ ಸಂತ್ರಸ್ತರು ಇನ್ನೂ ಸವಲತ್ತುಗಳಿಂದ ವಂಚಿತರಾಗಿದ್ದು, ಸಂತ್ರಸ್ತರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಅವರಿಗೆ ಅಗತ್ಯ ಚಿಕಿತ್ಸೆಯೂ ಲಭ್ಯವಾಗುತ್ತಿಲ್ಲ. ಸಂತ್ರಸ್ತರನ್ನು ಮತ್ತೆ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಕಾಞಂಗಾಡಿನಲ್ಲಿ ನಡೆಯುತ್ತಿರುವ ಸತ್ಯಾಗ್ರಹ 60ನೇ ದಿನಕ್ಕೆ ಕಾಲಿರಿಸಿದೆ. ಅಧಿಕಾರಿಗಳು ಸಂತ್ರಸ್ತರ ಬಗ್ಗೆ ಕರುಣೆ ತೋರಬೇಕು.
    -ಅಂಬಲತ್ತರ ಕುಞಿಕೃಷ್ಣನ್, ಕಾರ್ಯದರ್ಶಿ
    ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts