ಹುಬ್ಬಳ್ಳಿ : ಕೇಂದ್ರ ಸರ್ಕಾರ ರಾಜ್ಯಕ್ಕೆ 3,456 ಕೋಟಿ ರೂ. ಎನ್ಡಿಆರ್ಎಫ್ ಅನುದಾನ ಬಿಡುಗಡೆ ಮಾಡಿದೆ. ಕೇಂದ್ರದಿಂದ ರಾಜ್ಯಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಹಣ ಬಂದಿದ್ದು ಇದೇ ಮೊದಲ ಬಾರಿಗೆ. ರಾಜ್ಯ ಸರ್ಕಾರ ಈ ಹಣಕ್ಕೆ ತನ್ನ ಸಮಪಾಲು ಸೇರಿಸಿ, ರೈತರ ಖಾತೆಗೆ ಜಮಾ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಒತ್ತಾಯಿಸಿದ್ದಾರೆ.
ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರದಂದು ‘ಡೇಂಜರ್ಸ್ ಕಾಂಗ್ರೆಸ್ ಪೋಸ್ಟರ್ ಬಿಡುಗಡೆ ಹಾಗೂ ಟೆಂಗಿನಕಾಯಿ ಚಿಪು್ಪ’ ಬಿಡುಗಡೆಗೊಳಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ, ಕರ್ನಾಟಕ, ಕೇರಳ ಹಾಗೂ ಅಸ್ಸಾಂ ರಾಜ್ಯಗಳಿಗೆ ಎನ್ಡಿಆರ್ಎಫ್ ಹಣ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರ ಮೊದಲೇ ನಿರ್ಧರಿಸಿತ್ತು. ಚುನಾವಣೆ ಆಯೋಗದ ಅನುಮತಿಗಾಗಿ ಕಾಯುತ್ತಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಮುಖಂಡರು ತಮ್ಮ ಪ್ರಯತ್ನದಿಂದಾಗಿಯೇ ಕೇಂದ್ರ ಅನುದಾನ ಬಿಡುಗಡೆಗೊಳಿಸಿತೆಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಈ ಹಣವನ್ನು ಅಧಿಕಾರ ಇಲ್ಲದ ರಾಜ್ಯಗಳಿಗೆ ಚುನಾವಣೆ ವೆಚ್ಚಕ್ಕಾಗಿ ಕಳುಹಿಸಬಾರದು. ಈ ಹಣವನ್ನು ಚುನಾವಣೆ ವೆಚ್ಚದ ಎಟಿಎಂ ಎಂದು ಭಾವಿಸದೇ, ಸಕಾರಣಕ್ಕೆ ಬಳಸಬೇಕು ಎಂದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಂದ್ರದ ಅನುದಾನಕ್ಕೆ ಸಮವಾದ ಹಣವನ್ನು ರಾಜ್ಯ ಸರ್ಕಾರವೂ ಹೊಂದಿಸಿ ರೈತರ ಖಾತೆಗೆ ಜಮಾ ಮಾಡಿತ್ತು. ಬಿಜೆಪಿ ಸದಾ ರೈತರ ಪರ ಇದೆ. ಕಾಂಗ್ರೆಸ್ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಕೇಂದ್ರದಷ್ಟೇ ಸಮಪಾಲು ಹಣವನ್ನು ರಾಜ್ಯ ಸರ್ಕಾರವೂ ನೀಡುವ ಮೂಲಕ ತಾನು ಆರ್ಥಿಕವಾಗಿ ಸದೃಢವಾಗಿದ್ದೇನೆ ಎಂಬುದನ್ನು ರಾಜ್ಯ ಸರ್ಕಾರ ಸಾಬೀತುಪಡಿಸಬೇಕು ಎಂದರು.
ಕೇಂದ್ರದಿಂದ ಬಿಡುಗಡೆಗೊಂಡಿರುವ ಅನುದಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅರೆಕಾಸಿನ ಮಜ್ಜಿಗೆ ಎನ್ನುತ್ತಿರುವುದು ಹಾಸ್ಯಾಸ್ಪದ. ಯುಪಿಎ ಅಧಿಕಾರದ ಅವಧಿಯಲ್ಲಿ ರಾಜ್ಯಕ್ಕೆ ಸಾಸಿವೆ ಕಾಳಿನಷ್ಟೂ ಪರಿಹಾರ ಬಂದಿರಲಿಲ್ಲ ಎಂಬುದನ್ನು ಕಾಂಗ್ರೆಸ್ ಮುಖಂಡರು ನೆನಪಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
2005 ರಿಂದ 2014ರವರೆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರ 44,838 ಕೋಟಿ ರೂ.ಗಳನ್ನು ಕೇಳಿತ್ತು. ಆದರೆ, ಯುಪಿಎ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು ಕೇವಲ 4,571 ಕೋಟಿ ರೂ. ಹಣ. ಅಂದರೆ, ಕೇವಲ ಶೇ. 10ರಷ್ಟು ಅನುದಾನ ನೀಡಿತ್ತು. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ 25,591 ಕೋಟಿ ರೂ. ಕೇಳಿತ್ತು. ಕೇಂದ್ರ ಸರ್ಕಾರ ರಾಜ್ಯಕ್ಕೆ 15,920 ಕೊಟ್ಟಿದೆ. ಅಂದರೆ ಶೇ. 62.21ರಷ್ಟು ಅನುದಾನ ನೀಡಿದೆ ಎಂದು ವಿವರಿಸಿದರು.
ಯುಪಿಎ ಅವಧಿಯಲ್ಲಿ ರಾಜ್ಯದ ಕಾಂಗ್ರೆಸ್ ಸಂಸದರು ಕೇಂದ್ರದಿಂದ ಸಮರ್ಪಕ ಅನುದಾನ ತರುವಲ್ಲಿ ವಿಫಲರಾಗಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರು ನಿದ್ರಿಸುತ್ತಿದ್ದರಾ ? ಎಂದು ಆರ್. ಅಶೋಕ ಪ್ರಶ್ನಿಸಿದರು.
ಕೇಂದ್ರದಿಂದ ಕರ್ನಾಟಕಕ್ಕೆ ತಾರತಮ್ಯ ಆಗಿಲ್ಲ. ಹೀಗಿರುವಾಗ, ರಾಜ್ಯ ಕಾಂಗ್ರೆಸ್ ಸರ್ಕಾರ ನ್ಯಾಯಾಲಯಕ್ಕೆ ಹೋದರೆ, ಛೀಮಾರಿ ಹಾಕಿಸಿಕೊಳ್ಳುವುದು ಖಚಿತ ಎಂದರು.
ವಿಧಾನಸಬೇ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಮಾಳವಿಕಾ, ಎಂ. ನಾಗರಾಜ, ತಿಪ್ಪಣ್ಣ ಮಜ್ಜಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ಕೋಟ್
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶರಿಯಾ ಕಾನೂನು ಜಾರಿಗೆ ತರುತ್ತಾರಂತೆ.
– ಆರ್. ಅಶೋಕ, ವಿಧಾನಸಭೆ ಪ್ರತಿಪಕ್ಷ ನಾಯಕ