More

    ಭೀಮೇಶ್ವರ ಜೆಜೆಎಂ ಯೋಜನೆ ಅವೈಜ್ಞಾನಿಕ

    ತೀರ್ಥಹಳ್ಳಿ: ಜೆಜೆಎಂ ಯೋಜನೆಯಡಿ ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕ ಮತ್ತು ಜನವಿರೋಧಿಯಾಗಿರುವ ಕಾರಣ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ನಿರ್ಧಾರ ಮಾಡಿದ್ದೇವೆ ಎಂದು ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಸದಸ್ಯರು ಮಂಗಳವಾರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

    ಯೋಜನೆಯನ್ನು ವಿರೋಧಿಸಿ ಕಳೆದ ಆರು ತಿಂಗಳುಗಳಿಂದ ಪ್ರತಿಭಟನೆ, ಅಹೋರಾತ್ರಿ ಧರಣಿ, ಜನಪ್ರತಿನಿಧಿಗಳ ಜತೆ ಸಭೆ ಮತ್ತು ಗಂಜಿ ಚಳವಳಿಯನ್ನು ನಡೆಸಲಾಗಿದೆ. ಜನಪರ ಎಂದು ಜಾರಿಗೊಳ್ಳುವ ಯೋಜನೆಗಳು ಜನರಿಂದ ವಿರೋಧ ವ್ಯಕ್ತವಾದ ನಂತರವೂ ಪೊಲೀಸ್ ಬಲ ಬಳಸಿ ಮಲೆನಾಡಿನ ಪರಿಸರವನ್ನೇ ಹಾಳುಗೆಡವಿ ಮನಸೋಇಚ್ಛೆ ಬದಲಾಯಿಸಿಕೊಳ್ಳಲಾಗಿದೆ ಎಂದು ದೂರಿದರು.
    ಸರ್ಕಾರ ವಿಕೇಂದ್ರೀಕರಣ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳನ್ನು ಕಡೆಗಣಿಸಿರುವುದರಿಂದ ನಮಗಿದ್ದ ನಂಬಿಕೆ, ವಿಶ್ವಾಸ ಕಡಿಮೆಯಾಗಿದೆ. ಬಂಡವಾಳಶಾಹಿ ಧೋರಣೆಯ ಸರ್ಕಾರದ ನಿಲುವನ್ನು ಖಂಡಿಸಿ ಮತದಾನ ಬಹಿಷ್ಕರಿಸುವ ನಿರ್ಧಾರ ಮಾಡಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟರು. ಜತೆಗೆ ಕೋಡ್ಲು, ಆಲಗೇರಿ, ಗುಡ್ಡೇಕೊಪ್ಪ, ಕಾಸರವಳ್ಳಿ, ಹಾರೋಗುಳಿಗೆ, ಹುಣಸವಳ್ಳಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ವೈಯಕ್ತಿಕ ವಿವರಗಳುಳ್ಳ ಘೋಷಣಾ ಪತ್ರ ಸಲ್ಲಿಸಿದರು.
    ಕಂಬ್ಳಿಗೆರೆ ರಾಜೇಂದ್ರ, ಕೋಡ್ಲು ವೆಂಕಟೇಶ್, ತಲುಬಿ ರಾಘವೇಂದ್ರ, ಅಭಿ ಸವಳಿ, ನಾಗರಾಜ್, ಚೆನ್ನಕೇಶವ, ಗಣೇಶ್, ಸುಧೀರ್ ಹೊನ್ನಾನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts