ಮುಂಬೈ: ‘ಮೌಸಮ್’, ‘ಹೀರೋ’, ‘ರಾಮ್ ಲಖನ್’, ‘ಕರ್ಜ್’, ‘ಸೌದಾಗರ್’, ‘ಅಗ್ನೀಪಥ್’, ‘ಗುಲಾಮ್’, ‘ಆಂಧಿ’ ಸೇರಿದಂತೆ ಬಾಲಿವುಡ್ನ ಹಲವು ಸೂಪರ್ ಹಿಟ್ ಚಿತ್ರಗಳ ಸಂಕಲನಕಾರರಾಗಿದ್ದ ವಾಮನ್ ಭೋಂಸ್ಲೆ (87) ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ನಾವ್ಯಾರೂ ಆರಾಮಾಗಿಲ್ಲ.. ಪ್ಲೀಸ್ ಒಬ್ರಿಗೊಬ್ರು ಹೆಲ್ಪ್ ಮಾಡಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
ವಾಮನ್ ಭೋಂಸ್ಲೆ ಅವರು ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಡಯಾಬಿಟೀಸ್ಗೆ ತುತ್ತಾಗಿದ್ದ ಅವರು, ಇತ್ತೀಚೆಗೆ ನೆನಪಿನ ಶಕ್ತಿ ಸಹ ಕಳೆದುಕೊಂಡಿದ್ದರಂತೆ. ಕಳೆದ ನಾಲ್ಕೈದು ದಿನಗಳಿಂದ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದ ಅವರು, ಸೋಮವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಕೊನೆಯುಸಿರೆಳೆದರು ಎಂದು ಅವರ ಸಂಬಂಧಿ ದಿನೇಶ್ ಭೋಂಸ್ಲೆ ತಿಳಿಸಿದ್ದಾರೆ.
ಮೂಲತಃ ಗೋವಾದವರಾದ ಭೋಂಸ್ಲೆ, 50ರ ದಶಕದಲ್ಲಿ ಮುಂಬೈಗೆ ಬಂದು ಅಂದಿನ ಖ್ಯಾತ ಸಂಕಲನಕಾರ ಡಿ.ಎನ್. ಪೈ ಅವರ ಸಹಾಯಕರಾಗಿ ಕೆಲಸ ಶುರು ಮಾಡಿದ್ದಾರೆ. ಫಿಲ್ಮಿಸ್ಥಾನ್ ಸೇರಿದಂತೆ ಹಲವು ಸ್ಟುಡಿಯೋಗಳಲ್ಲಿ ಸಂಕಲನ ವಿಭಾಗದಲ್ಲಿ ಕೆಲಸ ಮಾಡಿದ್ದ ಅವರು, 1969ರಲ್ಲಿ ಬಿಡುಗಡೆಯಾದ ರಾಜ್ ಖೋಸ್ಲಾ ನಿರ್ದೇಶನದ ‘ದೋ ರಾಸ್ತೆ’ ಚಿತ್ರದ ಮೂಲಕ ಸ್ವತಂತ್ರ ಸಂಕಲನಕಾರರಾದರು.
ನಂತರದ ವರ್ಷಗಳಲ್ಲಿ ಬಾಲಿವುಡ್ನ ಬೇಡಿಕೆಯ ಸಂಕಲನಕಾರರಾದ ಅವರು, ಹಲವು ಜನಪ್ರಿಯ ನಿರ್ದೇಶಕರ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಅದರಲ್ಲೂ ಸುಭಾಶ್ ಘಾಯ್ ನಿರ್ದೇಶನದ ಮೊದಲ ಚಿತ್ರ ‘ಕಾಲಿಚರಣ್’ನಿಂದ ‘ಖಳನಾಯಕ್’ವರೆಗೂ ಎಲ್ಲ ಚಿತ್ರಗಳ ಸಂಕಲನಕಾರರಾಗಿ ದುಡಿದಿದ್ದಾರೆ. ಈ ಪೈಕಿ, 1978ರಲ್ಲಿ ಬಿಡುಗಡೆಯಾದ ‘ಇಂಕಾರ್’ ಚಿತ್ರದ ಸಂಕಲನಕ್ಕಾಗಿ ಭೋಂಸ್ಲೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಸಿಕ್ಕಿತ್ತು.
ಇದನ್ನೂ ಓದಿ: ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿಯ ಒಟ್ಟು ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?
ವಾಮನ್ ಭೋಂಸ್ಲೆ ಅವರ ನಿಧನಕ್ಕೆ ಸುಭಾಶ್ ಘಾಯ್, ಮಧುರ್ ಭಂಡಾರ್ಕರ್, ವಿಕ್ರಮ್ ಭಟ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.