ಬೆಂಗಳೂರು: ರಾಜ್ಯಾದ್ಯಂತ 6ರಿಂದ 8ನೇ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದು, ಮೊದಲ ದಿನ ಹಾಜರಾತಿ ಶೇ.30 ಕೂಡ ದಾಟಿಲ್ಲ. 6ನೇ ತರಗತಿಗೆ ಶೇ.29.15, 7ನೇ ತರಗತಿಗೆ ಶೇ.28.05 ಹಾಗೂ 8ನೇ ತರಗತಿಗೆ ಶೇ.23.22 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಮೊದಲ ದಿನ ಇಷ್ಟು ಹಾಜರಾತಿ ಬಂದಿರುವುದು ಉತ್ತಮ ಬೆಳವಣಿಯೇ ಆಗಿದೆ. 9ರಿಂದ 12ನೇ ತರಗತಿ ಆರಂಭಿಸಿದ ವೇಳೆಯಲ್ಲಿ ಮೊದಲ ದಿನದ ಹಾಜರಾತಿ ಶೇ.21 ಇತ್ತು. ಇದೀಗ ಹಾಜರಾತಿ ಪ್ರಮಾಣ ಶೇ.50 ದಾಟಿದೆ. ಇದೇ ರೀತಿ ಈ ವಿದ್ಯಾರ್ಥಿಗಳ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಳವಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ರಾಜ್ಯದಲ್ಲಿ 6ರಿಂದ 8ನೇ ತರಗತಿ ಬೋಧನೆ ಮಾಡುವ ಶಾಲೆಗಳು 37,693 ಇದ್ದು, ಇದರಲ್ಲಿ 13,435 ಶಾಲೆಗಳು ಮಾತ್ರ ಸೋಮವಾರ ಮಕ್ಕಳ ಹಾಜರಾತಿಯನ್ನು ನಮೂದಿಸಿವೆ. ಅಂದರೆ, ಶೇ.35.64 ಶಾಲೆಗಳು ಹಾಜರಾತಿ ದಾಖಲಿಸಿದ್ದು, ಶೇ.64.36 ಶಾಲೆಗಳು ದಾಖಲಿಸಿಲ್ಲ. ಕೆಲವು ಜಿಲ್ಲೆಗಳಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವುದರಿಂದ ಶಾಲೆಗಳು ತೆರೆದಿಲ್ಲ. ಕೇವಲ ಶೇ.35 ಶಾಲೆಗಳು ಹಾಜರಾತಿ ಪ್ರಮಾಣ ದಾಖಲಿಸಿರುವುದರಿಂದ ಹಾಜರಾತಿ ಕಡಿಮೆ ತೋರಿಸುತ್ತಿದೆ ಎಂದೂ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..
ಶಿಕ್ಷಕರ ದಿನಾಚರಣೆ: ಬಹುತೇಕ ಶಾಲೆಗಳು ಕರೊನಾ ಸೋಂಕಿನ ಕಾರಣದಿಂದಾಗಿ ತೆರೆದಿಲ್ಲ. ಇನ್ನು ಕೆಲವು ಖಾಸಗಿ ಶಾಲೆಗಳು ತರಗತಿಗಳನ್ನು ತೆರೆದು ಶಿಕ್ಷಕರ ದಿನವನ್ನು ಆಚರಿಸಿವೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿರಲಿಲ್ಲ. ಬಹುತೇಕ ಶಾಲೆಗಳು ಗಣೇಶ-ಗೌರಿ ಹಬ್ಬದ ನಂತರದಲ್ಲಿ ಶಾಲೆ ಆರಂಭಿಸಲು ತೀರ್ಮಾನಿಸಿವೆ.
ಪಾಲಕರಲ್ಲಿ ಆತಂಕ: ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ತಕ್ಷಣ ಶಾಲೆಗೆ ಕಳುಹಿಸಲು ಮನಸು ಮಾಡುತ್ತಿಲ್ಲ. ಕರೊನಾ 3ನೇ ಅಲೆಯ ಭಯ ಪಾಲಕರಲ್ಲಿದೆ. ಅಲ್ಲದೆ, ಶಾಲೆಗಳು ಸುರಕ್ಷತೆ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಮೇಲೂ ಹೆಚ್ಚಿನ ನಂಬಿಕೆ ಇಲ್ಲದೆ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ.
ಇದನ್ನೂ ಓದಿ: ಪತಿಯನ್ನು ಬಿಟ್ಟು ಹೊರಟಿದ್ದ ಪತ್ನಿಯನ್ನು ಮತ್ತೆ ಮನೆಗೆ ಸೇರಿಸಿದ ಚಾರ್ಜರ್; ಮನೆ ಬಿಡುವಂತೆ ಮಾಡಿದ್ದು ಗಂಡನ ಫೋನಲ್ಲಿದ್ದ ಆ ಆಟ!
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ನಗರದ ಜೀವನ್ಬಿಮಾ ನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಚಾಕೋಲೆಟ್, ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಶಾಲೆ ಆರಂಭದ ಕುರಿತು ವಿದ್ಯಾರ್ಥಿಗಳಲ್ಲಿರುವ ಅಭಿಪ್ರಾಯ ಪಡೆದರು. ಶಾಲೆಗೆ ಬರುವುದಕ್ಕೆ ಖುಷಿಯಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಇದನ್ನೂ ಓದಿ: ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲ ಸುರಕ್ಷತಾ ಕ್ರಮ ಅನುಸರಿಸಿ ಶಾಲೆ ಆರಂಭಿಸಲಾಗಿದೆ. 1ರಿಂದ 5ನೇ ತರಗತಿಗಳ ಭೌತಿಕ ಕ್ಲಾಸ್ ಆರಂಭಕ್ಕೆ ತಜ್ಞರ ಅಭಿಪ್ರಾಯ ಮತ್ತು ಒಪ್ಪಿಗೆ ಪಡೆಯಲಾಗುತ್ತಿದೆ. 6ರಿಂದ 8ನೇ ತರಗತಿಗಳಿಗೆ ವಿದ್ಯಾರ್ಥಿಗಳ ಆಗಮನದ ಆಧಾರದ ಮೇಲೆ ಪ್ರಾಥಮಿಕ ಶಾಲೆ ಆರಂಭಿಸಲು ನಿರ್ಧಾರ ತೆಗೆದುಕೊಳ್ಳುತ್ತೇವೆ. ಉಳಿದಂತೆ ಎಲ್ಲ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಲು ಈಗಾಗಲೆ ಸಾರಿಗೆ ಅಧಿಕಾರಿಗಳ ಜತೆಗೆ ಮಾತನಾಡಿದ್ದೇನೆ. ಹಳೇ ಬಸ್ ಪಾಸ್, ಶಾಲೆ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು ಎಂದರು.
ಆಟ ಆಡುತ್ತಲೇ ಪ್ರಾಣ ಕಳೆದುಕೊಂಡ ಬಾಲಕ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಡಿದ್ದೇ ಮುಳುವಾಯ್ತೇ?