ಬೆಂಗಳೂರು: ಗಂಡನ ಚಟವೊಂದನ್ನು ಸಹಿಸಲಾಗದೆ ಬೇಸತ್ತಿದ್ದ ಹೆಂಡತಿ ಅದಕ್ಕಾಗಿ ಮನೆ ಬಿಟ್ಟು ತವರು ಮನೆಗೆ ಹೊರಟು ರೈಲ್ವೇ ಸ್ಟೇಷನ್ವರೆಗೂ ಬಂದರೂ ಮೊಬೈಲ್ಫೋನ್ ಚಾರ್ಜರ್ ಆಕೆಯನ್ನು ಮತ್ತೆ ಮನೆ ಸೇರುವಂತೆ ಮಾಡಿದೆ. ಬೈಯ್ಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದ ನಿವಾಸಿ ಒರಿಸ್ಸಾ ಮೂಲದ ಯಮುನಾ (25) ಹಾಗೂ ಆಕೆಯ ಪತಿ ದಿನೇಶ್ ಈ ಪ್ರಕರಣದ ಕೇಂದ್ರಬಿಂದುಗಳು. ಈಕೆ ಮನೆಗೆ ಮರಳುವ ಮೂಲಕ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಭಾನುವಾರ ಅನುಮಾನಾಸ್ಪದವಾಗಿ ಕಾಣಸಿದ್ದ ಬ್ಯಾಗ್ನಿಂದಾಗಿ ಉಂಟಾಗಿದ್ದ ಬಾಂಬ್ ಭೀತಿ ಕೂಡ ನಿವಾರಣೆ ಆದಂತಾಗಿದೆ.
ಒಡಿಶಾ ಮೂಲದ ಯಮುನಾ ನಗರದಲ್ಲಿ ಮನೆ ಕೆಲಸ ಮಾಡುತ್ತಿದ್ದರೆ, ಈಕೆಯ ಪತಿ ದಿನೇಶ್ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ದಿನೇಶ್ ಪಬ್ಜಿ ಹುಚ್ಚಿಗೆ ಬಿದ್ದು, ಇದೇ ವಿಷಯಕ್ಕೆ ಪತ್ನಿ ಜೊತೆ ಕಿರಿಕ್ ಮಾಡಿಕೊಂಡಿದ್ದ. ಇದರಿಂದ ರೋಸಿ ಹೋಗಿದ್ದ ಯಮುನಾ ಒಡಿಶಾದ ತನ್ನೂರಿಗೆ ಹಿಂದಿರುಗಲು ಮುಂದಾಗಿದ್ದಳು. ಭಾನುವಾರ ಮಧ್ಯಾಹ್ನ ಬೆಂಗಳೂರಿನಿಂದ ರೈಲಿನಲ್ಲಿ ಒಡಿಶಾಗೆ ತೆರಳಲು ಬೈಯ್ಯಪ್ಪನಹಳ್ಳಿಯ ಮೆಟ್ರೋ ನಿಲ್ದಾಣಕ್ಕೆ ಟ್ರಾಲಿ ಲಗೇಜ್ ಬ್ಯಾಗ್ ಸಮೇತ ಬಂದಿದ್ದಳು. ಮೆಟ್ರೋ ಹತ್ತಬೇಕೆನ್ನುವಷ್ಟರಲ್ಲಿ ತಾನು ಮೊಬೈಲ್ಫೋನ್ ಮನೆಯಲ್ಲೇ ಮರೆತು ಬಂದಿರುವುದು ಗಮನಕ್ಕೆ ಬಂದಿತ್ತು. ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಮತ್ತೆ ಬ್ಯಾಗ್ ಸಮೇತ ಮನೆಗೆ ತೆರಳಲು ಯಮುನಾಗೆ ಕಷ್ಟವಾಗಿತ್ತು. ಹೀಗಾಗಿ ತನ್ನ ಟ್ರಾಲಿ ಲಗೇಜ್ ಬ್ಯಾಗ್ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಎಕ್ಸಿಟ್ಗೇಟ್ನ ಬಳಿ ಇಟ್ಟು ಮನೆಗೆ ಹೋಗಿದ್ದಳು.
ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..
ಪ್ರಯಾಣಿಕರಿಗೆ ಬಾಂಬ್ ಭೀತಿ: ಇತ್ತ ಅನುಮಾನಾಸ್ಪದವಾಗಿ ಕಂಡು ಬಂದ ಟ್ರಾಲಿ ಬ್ಯಾಗ್ ಗಮನಿಸಿದ ಮೆಟ್ರೋ ಸಿಬ್ಬಂದಿ ಸಂಶಯಗೊಂಡು ಮೆಟಲ್ ಡಿಟೆಕ್ಟರ್ ಮೂಲಕ ಪರಿಕ್ಷಿಸಿದಾಗ ಸೌಂಡ್ ಬ್ಲಿಂಕ್ ಆಗಿತ್ತು. ಆತಂಕಗೊಂಡ ಸಿಬ್ಬಂದಿ ಟ್ರಾಲಿ ಬ್ಯಾಗ್ನಲ್ಲಿ ಬಾಂಬ್ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮುಂಜಾಗ್ರತಾ ಕ್ರಮವಾಗಿ ನಿಲ್ದಾಣದಲ್ಲಿದ್ದ ಸಾರ್ವಜನಿಕರನ್ನು ಹೊರಗೆ ಕಳುಹಿಸಲಾಗಿತ್ತು. ವಿಚಾರ ತಿಳಿದು ಮೆಟ್ರೋ ಪ್ರಯಾಣಿಕರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು.
ಕೂಡಲೇ ಎಚ್ಚೆತ್ತುಕೊಂಡ ಬೈಯಪ್ಪನಹಳ್ಳಿ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ತಂಡದ ಸಿಬ್ಬಂದಿ ಜತೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಬಾಂಬ್ ನಿಷ್ಕ್ರಿಯ ತಂಡ ಮುನ್ನೆಚ್ಚರಿಕೆ ವಹಿಸಿ ಟ್ರಾಲಿ ಲಗೇಜ್ ಬ್ಯಾಗನ್ನು ತಮ್ಮ ಸಲಕರಣೆ ಸಹಾಯದಿಂದ ತೆರೆದಾಗ ಅದರೊಳಗೆ ಬಟ್ಟೆಗಳಿರುವುದನ್ನು ಕಂಡುಬಂದಿದೆ. ಬ್ಯಾಗ್ನಲ್ಲಿ ಯಾವುದೇ ಬಾಂಬ್ ಇಲ್ಲದಿರುವುದು ದೃಢಪಟ್ಟ ಬಳಿಕ ಮೆಟ್ರೋ ನಿಲ್ದಾಣದಲ್ಲಿ ನೆರೆದಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಪೊಲೀಸರು ಬ್ಯಾಗ್ ಪತ್ತೆಯಾದ ಜಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮಹಿಳೆಯೊಬ್ಬಳು ಬ್ಯಾಗ್ ಇಟ್ಟು ಹೋಗಿರುವುದು ಕಂಡು ಬಂದಿತ್ತು. ಕೆಲ ಹೊತ್ತಿನ ಬಳಿಕ ಯಮುನಾ ಮೆಟ್ರೋ ನಿಲ್ದಾಣಕ್ಕೆ ಬಂದು ತನ್ನ ಬ್ಯಾಗ್ಗಾಗಿ ಹುಡುಕಾಡಿ ಮೆಟ್ರೋ ಸಿಬ್ಬಂದಿ ಬಳಿ ಬ್ಯಾಗ್ ಬಗ್ಗೆ ಕೇಳಿದಾಗ ನಿಜವಾಗಿ ನಡೆದ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಪ್ಪನನ್ನು ಕೊಲೆ ಮಾಡಿಸಿದ್ದವನ ಹತ್ಯೆ ಮಾಡಿ ಸೇಡು ತೀರಿಸಿಕೊಂಡ ಮಗ; ಎರಡು ವರ್ಷಗಳ ಬಳಿಕ ನಡೆಯಿತು ಪ್ರತೀಕಾರ..
ಸಮಸ್ಯೆ ಆಗುತ್ತದೆ ಎಂದುಕೊಂಡಿರಲಿಲ್ಲ: ಬೈಯ್ಯಪ್ಪನಹಳ್ಳಿಯಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್ಗೆ ತೆರಳಿ ಸಿಟಿ ರೈಲ್ವೆ ನಿಲ್ದಾಣದಿಂದ ರೈಲಿನಲ್ಲಿ ಒಡಿಶಾಗೆ ಹೋಗಲು ಮುಂದಾಗಿದ್ದೆ. ಮೆಟ್ರೋ ನಿಲ್ದಾಣದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರಿಂದ ಇಷ್ಟೊಂದು ಸಮಸ್ಯೆಯಾಗುತ್ತದೆ ಎಂದುಕೊಂಡಿರಲಿಲ್ಲ ಎಂದು ಪೊಲೀಸರ ಬಳಿ ಯಮುನಾ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ. ಪೊಲೀಸರು ಕಿತ್ತಾಡದಂತೆ ಬುದ್ಧಿವಾದ ಹೇಳಿ ಆಕೆಯನ್ನು ಮರಳಿ ಮನೆಗೆ ಕಳುಹಿಸಿದ್ದಾರೆ.
ಕರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಿಂಚಣಿ-ಪಡಿತರವಿಲ್ಲ; ಈ ಕುರಿತ ಸತ್ಯಾಂಶವೇನು?