ತುಮಕೂರು: ರಾಮನವಮಿಯಂದು ಹಂಚಲಾದ ಮಜ್ಜಿಗೆ-ಪಾನಕ ಸೇವಿಸಿ 45ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ತುಮಕುರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಮಂಗಳ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿಯಲ್ಲಿ ಕೊಡವತ್ತಿ ಗ್ರಾಮ ಸಮೀಪದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಬುಧವಾರ (ಏಪ್ರಿಲ್ 17) ರಾಮನವಮಿ ಪ್ರಯುಕ್ತ ಮಜ್ಜಿಗೆ, ಪಾನಕ ವಿತರಣೆ ಮಾಡಲಾಗಿತ್ತು. ಪಾನಕ-ಮಜ್ಜಿಗೆ ಸೇವಿಸಿದ ಕೆಲ ಹೊತ್ತಿನಲ್ಲಿ ವಾಂತಿ-ಭೇದಿ ಶುರುವಾಗಿದೆ. ಕೂಡಲೇ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ದೋಷಪೂರಿತ ಪಾನಕ-ಮಜ್ಜಿಗೆ ಸೇವನೆ ಆರೋಗ್ಯ ಹದಗೆಡಲು ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ಚಿಕಿತ್ಸೆ ಮುಂದುವರೆಸಲಾಗಿದ್ದು, ರೋಗಿಗಳು ಶೀಘ್ರ ಗುಣಮುಖರಾಗಲಿದ್ದಾರ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.