ಮುಂಬೈ: ಕಳೆದ ಕೆಲ ತಿಂಗಳಿನಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಒಂದಿಲ್ಲೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆಯುತ್ತಿದ್ದು, ಇನ್ನಿಲ್ಲದಂತೆ ಟ್ರೋಲ್ಗೆ ಗುರಿಯಾಗುತ್ತಿದ್ದಾರೆ. ಇದೀಗ ಮುಂಬರುವ ಟಿ-20 ವಿಶ್ವಕಪ್ಗೆ ಸಂಬಂಧಿಸಿದಂತೆ ಬಿಸಿಸಿಐ ಹಾರ್ದಿಕ್ ಪಾಂಡ್ಯಗೆ ಷರತ್ತು ಒಂದನ್ನು ಹಾಕಿದ್ದು, ಅದರಲ್ಲಿ ಪಾಸ್ ಆದರೆ ಮಾತ್ರ ತಂಡದಲ್ಲಿ ಸ್ಥಾನ ಎಂದು ಹೇಳಲಾಗಿದೆ.
ಟಿ-20 ವಿಶ್ವಕಪ್ಗೆ ತಂಡ ಆಯ್ಕೆ ಮಾಡುವ ಸಂಬಂಧ ಸಭೆ ಸೇರಿದ್ದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಈ ನಿರ್ಣಯಕ್ಕೆ ಬಂದಿದ್ದು, ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸ್ ಆಗಬೇಕಾದರೆ ಮತ್ತೊಂದು ಸುತ್ತಿನ ಸವಾಲು ಎದುರಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಮೇಥಿಯಿಂದ ಚುನಾವಣೆಗೆ ಸ್ಪರ್ಧೆ; ಇದು ಬಿಜೆಪಿಯವರ ಪ್ರಶ್ನೆ ಎಂದು ಕಿಡಿಕಾರಿದ ರಾಹುಲ್
ಹಾಲಿ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹಾಲಿ ಟೂರ್ನಿಯಲ್ಲಿ 26.20ರ ಸರಾಸರಿಯಲ್ಲಿ 131 ರನ್ ಸಿಡಿಸಿರುವ ಪಾಂಡ್ಯ ಬೌಲಿಂಗ್ನಲ್ಲೂ ಅಷ್ಟಾಗಿ ಏನು ಪ್ರದರ್ಶನ ನೀಡಿಲ್ಲ. ಒಂದು ವೇಳೆ ಹಾರ್ದಿಕ್ ಪಾಂಡ್ಯ ಟಿ-20ಯಲ್ಲಿ ಸ್ಥಾನ ಪಡೆಯಬೇಕಾದರೆ ಅವರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ರಾಹುಲ್, ರೋಹಿತ್ ಹಾಗೂ ಅಜಿತ್ ನಡುವೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
ಒಂದು ವೇಳೆ ಹಾರ್ದಿಕ್ ಪಾಂಡ್ಯ ಟಿ-20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರೆ ಅವರ ಬದಲಿಗೆ ಆಲ್ರೌಂಡರ್ ಶಿವಂ ದುಬೆ ಅವರನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ. ಹಾಲಿ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ದುಬೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಆಲ್ರೌಂಡರ್ ಆಗಿರುವ ದುಬೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟ್ ಮೂಲಕವೇ ಹೆಚ್ಚು ಸೌಂಡ್ ಮಾಡುತ್ತಿದ್ದು, ಅವರ ಆಯ್ಕೆಗೆ ಬೌಲಿಂಗ್ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಅಂತಿಮವಾಗಿ ಬಿಸಿಸಿಐ ಆಯ್ಕೆ ಸಮಿತಿ ಯಾರಿಗೆ ಮಣೆ ಹಾಕುತ್ತದೆ ಎಂದು ಕಾದು ನೋಡಬೇಕಿದೆ.