ಬೆಂಗಳೂರು: ಹೊಸ ಅಧ್ಯಾಯವನ್ನು ಸತತ ಸೋಲುಗಳಿಂದ ಶುರು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿರುವ 7 ಪಂದ್ಯಗಳ ಪೈಕಿ ಆರರಲ್ಲಿ ಸೋತು ಒಂದರಲ್ಲಿ ಗೆಲ್ಲುವ ಮೂಲಕ ಪ್ಲೇಆಫ್ ಹಾದಿಯನ್ನು ದುರ್ಗಮವಾಗಿಸಿಕೊಂಡಿದೆ. ಹಾಲಿ ಟೂರ್ನಮೆಂಟ್ನಲ್ಲಿ ಆರ್ಸಿಬಿಯ ಆಟಕ್ಕೆ ಹಲವರು ಅತೃಪ್ತಿ ವ್ಯಕ್ತಪಡಿಸುತ್ತಿರುವ ನಡುವೆಯೇ ಮಾಜಿ ಆಟಗಾರನೋರ್ವ ಅಭಿಮಾನಿಗಳ ಕ್ಷಮೆಯಾಷಿಸಿದ್ದಾರೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಬಾರಿ 2009, 2011, 2016ರಲ್ಲಿ ಫೈನಲ್ ಪ್ರವೇಶಿಸಿದೆ. ಇದಾಗ್ಯೂ ಆರ್ಸಿಬಿಗೆ ಒಮ್ಮೆಯೂ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, 2016ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್ಸಿಬಿ ವಿರೋಚಿತ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿತ್ತು.
2016ರಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿದ್ದವು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಎಸ್ಆರ್ಎಚ್ ತಂಡವು 8ರನ್ಗಳ ಜಯ ಸಾಧಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಆರ್ಸಿಬಿ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಪಾಂಡ್ಯ; ಹಾರ್ದಿಕ್ಗೆ ಕಠಿಣ ಷರತ್ತು ಹಾಕಿದ ಬಿಸಿಸಿಐ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಎಸ್ಆರ್ಎಚ್ ತಂಡವು 19 ಓವರ್ಗಳ ಮುಕ್ತಾಯಕ್ಕೆ 184ರನ್ಗಳನ್ನು ಗಳಿಸಿತ್ತು. ಅಂತಿಮ ಓವರ್ಅನ್ನು ನಾಯಕ ವಿರಾಟ್ ಕೊಹ್ಲಿ ಶೇನ್ ವ್ಯಾಟ್ಸನ್ಗೆ ಬೌಲ್ ಮಾಡುವಂತೆ ಸೂಚಿಸಿದರು. ಅದರಂತೆ ಬೌಲ್ ಮಾಡಿದ ವ್ಯಾಟ್ಸನ್ 4, 6, 6, 1, 1, 6 ರನ್ಗಳನ್ನು ನೀಡುವ ಮೂಲಕ ದುಬಾರಿಯಾದರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು.
209ರನ್ಗಳ ಗುರಿ ಬೆನ್ನತ್ತಿದ್ದ ಆರ್ಸಿಬಿ ತಂಡವು ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕಗಳ ನೆರವಿನಿಂದ 10.3 ಓವರ್ಗಳಲ್ಲಿ 114 ರನ್ ಕಲೆಹಾಕಿತು. ಈ ವೇಳೆ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ ಸೇರಿದಂತೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ ಪರಿಣಾಮ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 200 ರನ್ಗಳಿಸಿ 8 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಕುರಿತು ಮಾತನಾಡಿದ ಶೇನ್ ವ್ಯಾಟ್ಸನ್ ಆರ್ಸಿಬಿ ತಂಡವು 2016 ರಲ್ಲೇ ಕಪ್ ಗೆಲ್ಲಬೇಕಿತ್ತು. ಆದರೆ ಅಂದು ನಾನು 4 ಓವರ್ಗಳಲ್ಲಿ 61 ರನ್ ನೀಡಿದ್ದೆ. ಕೊನೆಯ ಓವರ್ನಲ್ಲಿ 24 ರನ್ ನೀಡಿದ್ದು ಆರ್ಸಿಬಿ ಪಾಲಿಗೆ ದುಬಾರಿಯಾಯಿತು. ಅಲ್ಲದೇ ಬ್ಯಾಟಿಂಗ್ನಲ್ಲೂ ವಿಫಲನಾದೆ. ಅವತ್ತು ನನ್ನ ಕಳಪೆ ಪ್ರದರ್ಶನಿಂದಾಗಿ ಆರ್ಸಿಬಿ ತಂಡ ಚೊಚ್ಚಲ ಬಾರಿಗೆ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿಕೊಂಡಿತು. ಅಂತಹದೊಂದು ಅವಕಾಶವನ್ನು ಕೈ ತಪ್ಪಿಸಿದಕ್ಕಾಗಿ ನಾನು ಆರ್ಸಿಬಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಶೇನ್ ವಾಟ್ಸನ್ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.