ತುಮಕೂರು: ಪೆಟ್ರೋಲ್ ಬಂಕ್ ನಲ್ಲಿನ ಅಂಡರ್ ಟ್ಯಾಂಕ್ ಸ್ವಚ್ಚಗೊಳಿಸಲು ಹೋಗಿದ್ದ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದು ಆಮ್ಲಜನಜಕದ ಕೊರತೆ ಮತ್ತು ಅತಿಯಾದ ಕೆಮಿಕಲ್ ವಾಸನೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ತುಮಕೂರು ಜಿಲ್ಲೆ, ತಿಪಟೂರು ಪಟ್ಟಣದ ಹಿಂಡಿಸ್ಕೆರೆ ಗೇಟ್ನಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದ್ದು ರವಿ (38) ನಾಗರಾಜು (48) ಮೃತ ದುರ್ದೈವಿಗಳು.
ಇಂಡಿಯನ್ ಆಯಿಲ್ ಕಂಪನಿಯವರ ಅಜಾಗರುಕತೆ, ನಿರ್ಲಕ್ಷ್ಯಕ್ಕೆ ಇಬ್ಬರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಕಂಪನಿಯವರು, ಪೆಟ್ರೋಲ್ ಬಂಕ್ನ ಟ್ಯಾಂಕರ್ ಒಳಭಾಗದಲ್ಲಿ ಹೊಸ ಪಂಪ್ ಮೋಟರ್ ಮತ್ತು ಕ್ಲೀನಿಂಗ್ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಕಂಪನಿಯವರು ರವಿ ಮತ್ತು ನಾಗರಾಜುಗೆ ಯಾವುದೇ ಜೀವರಕ್ಷಕ ಉಪಕರಣ ನೀಡದೇ ಟ್ಯಾಂಕ್ ಒಳಗೆ ಇಳಿಸಿದ್ದರು ಎನ್ನಲಾಗಿದೆ. ಟ್ಯಾಂಕ್ ಕ್ಯಾಪ್ ಓಪನ್ ಮಾಡಿದ ತಕ್ಷಣ ಒಳಕ್ಕೆ ಇಳಿಸಿದ್ದ ಕಾರಣ ಟ್ಯಾಂಕರ್ನಲ್ಲಿ ಆಮ್ಲಜನಕ ಇಲ್ಲದೆ ಅತಿಯಾದ ಕೆಮಿಕಲ್ ವಾಸನೆಯಿಂದ ಕಾರ್ಮಿಕರು ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ತಿಪಟೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೆಟ್ರೋಲ್ ಬಂಕ್ ಬಿಜೆಪಿ ಮುಖಂಡರಾಗಿರುವ ಮಾಜಿ ನಗರ ಸಭಾ ಸದಸ್ಯ ಪ್ರಸನ್ನಕುಮಾರ್ ಗೆ ಸೇರಿದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎಂಬ ಮಾಹಿತಿ ಲಭಿಸಿದೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ಇನ್ನೂ ಯಾಕೆ ಇವರಿಬ್ಬರು ಹೊರಬಂದಿಲ್ಲ ಎಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತದೇಹಗಳನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದ್ದು ತಿಪಟೂರು ನಗರದ ಪೊಲೀಸರಿಂದ ತನಿಖೆ ಮುಂದುವರಿದಿದೆ.