ಶಾರ್ಜಾ: ಕರೊನಾ ಪಾಸಿಟಿವ್ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡದ ಕ್ವಾರಂಟೈನ್ ಅವಧಿ 2 ವಾರಗಳಿಗೆ ವಿಸ್ತರಣೆಯಾಗಿತ್ತು. ಇದರಿಂದಾಗಿ ನನಗೆ ಬ್ಯಾಟಿಂಗ್ ಅಭ್ಯಾಸಕ್ಕೆ ಸಾಕಷ್ಟು ಸಮಯ ಸಿಗಲಿಲ್ಲ ಎಂದು ನಾಯಕ ಎಂಎಸ್ ಧೋನಿ ರಾಜಸ್ಥಾನ ರಾಯಲ್ಸ್ ವಿರುದ್ಧದ 16 ರನ್ ಸೋಲಿನ ಬಳಿಕ ಹೇಳಿದರು.
ರಾಯಲ್ಸ್ ತಂಡದ 217 ರನ್ಗಳ ಬೃಹತ್ ಸವಾಲಿಗೆ ಪ್ರತಿಯಾಗಿ ಶೇನ್ ವ್ಯಾಟ್ಸನ್ (33) ಮತ್ತು ಮುರಳಿ ವಿಜಯ್ (21) ಅವರಿಂದ ಎಚ್ಚರಿಕೆಯ ಆರಂಭ ಪಡೆದ ಸಿಎಸ್ಕೆ ಬಳಿಕ ಫಾಫ್ ಡು ಪ್ಲೆಸಿಸ್ (72 ರನ್, 37 ಎಸೆತ, 1 ಬೌಂಡರಿ, 7 ಸಿಕ್ಸರ್) ಬಿರುಸಿನ ಆಟದಿಂದ ಗೆಲುವಿಗಾಗಿ ಹೋರಾಡಿತು. ಆದರೆ ಅವರಿಗೆ ಮಧ್ಯಮ ಕ್ರಮಾಂಕದಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಧೋನಿ ಕೂಡ 7ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದು ಆಡಿದ ಕಾರಣ ಪ್ಲೆಸಿಸ್ ಮೇಲೆ ಒತ್ತಡ ಹೆಚ್ಚಿತು. ಅಂತಿಮವಾಗಿ ಸಿಎಸ್ಕೆ 6 ವಿಕೆಟ್ಗೆ 200 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪಂದ್ಯದ ಕೊನೇ 4 ಎಸೆತಗಳಲ್ಲಿ ಸಿಎಸ್ಕೆಗೆ 36 ರನ್ ಗಳಿಸುವ ಅಸಾಧ್ಯ ಗುರಿ ಇತ್ತು. ಅಷ್ಟರವರೆಗೆ 13 ಎಸೆತಗಳಲ್ಲಿ 10 ರನ್ ಗಳಿಸಿ ಪರದಾಡುತ್ತಿದ್ದ ಧೋನಿ ನಂತರ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. ಆದರೆ ಅಷ್ಟರಲ್ಲಾಗಲೇ ಸಿಎಸ್ಕೆ ಸೋಲು ಖಚಿತಗೊಂಡಿತ್ತು.
ಇದನ್ನೂ ಓದಿ: VIDEO | ಆರ್ಸಿಬಿಯನ್ನು ಬೆಂಬಲಿಸುತ್ತಿರಿ, ಅಭಿಮಾನಿಗಳಿಗೆ ಕನ್ನಡದಲ್ಲೇ ಮನವಿ ಮಾಡಿದ ಪಡಿಕಲ್
‘ನಾನು ಸುದೀರ್ಘ ಸಮಯದಿಂದ ಬ್ಯಾಟಿಂಗ್ ಮಾಡಿರಲಿಲ್ಲ ಮತ್ತು 14 ದಿನಗಳ ಕ್ವಾರಂಟೈನ್ ಕೂಡ ನಮಗೆ ನೆರವಾಗಲಿಲ್ಲ’ ಎಂದು ಧೋನಿ ಪಂದ್ಯದ ಬಳಿಕ ತಮ್ಮ ಹಿಂಬಡ್ತಿಗೆ ಕಾರಣ ನೀಡಿದರು. ಜತೆಗೆ, ರಾಜಸ್ಥಾನ ತಂಡದ ಪರ ಬಿರುಸಿನ ಆಟವಾಡಿದ ನಾಯಕ ಸ್ಟೀವನ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಮಾತ್ರವಲ್ಲದೆ, ಎದುರಾಳಿ ತಂಡದ ಸ್ಪಿನ್ನರ್ಗಳನ್ನೂ ಹೊಗಳಿದರು ಮತ್ತು ತಮ್ಮ ತಂಡದ ಸ್ಪಿನ್ ಜೋಡಿ (ಪೀಯುಷ್ ಚಾವ್ಲ-ರವೀಂದ್ರ ಜಡೇಜಾ) ವಿಲರಾಗಿದ್ದಕ್ಕೆ ಬೇಸರಿಸಿದರು. ಒಂದು ವೇಳೆ ರಾಜಸ್ಥಾನ ತಂಡವನ್ನು 200ರೊಳಗೆ ಕಟ್ಟಿ ಹಾಕಿದ್ದರೆ ಗೆಲುವಿನ ಅವಕಾಶವಿತ್ತು ಎಂದೂ ಧೋನಿ ಹೇಳಿದರು.
ಸ್ಟೀವನ್ ಸ್ಮಿತ್ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ನಾಯಕರಾಗಿ 10ನೇ ಗೆಲುವು ಕಂಡರು. ಪಂದ್ಯದಲ್ಲಿ ಒಟ್ಟು 33 ಸಿಕ್ಸರ್ ಸಿಡಿಯಿತು. ಇದು 2018ರಲ್ಲಿ ಸಿಎಸ್ಕೆ-ಆರ್ಸಿಬಿ ಪಂದ್ಯದಲ್ಲಿ ಸಿಡಿದ 33 ಸಿಕ್ಸರ್ ದಾಖಲೆ ಸರಿಗಟ್ಟಿತು.
ಕೊನೇ ಓವರ್ನಲ್ಲಿ ಜೋಫ್ರಾ ಆರ್ಚರ್ ಅಮೋಘ ಸಿಕ್ಸರ್ಗಳನ್ನು ಸಿಡಿಸಿದ್ದು ಪಂದ್ಯದ ಚಿತ್ರಣ ಬದಲಾಯಿಸಿತು. ಸ್ಯಾಮ್ಸನ್ ಕೂಡ ಬಾರಿಸಿದ ದೊಡ್ಡ ಹೊಡೆತಗಳೆಲ್ಲ ಸಿಕ್ಸರ್ಗೆ ಹೋದವು. ಜೋಸ್ ಬಟ್ಲರ್ ಕೂಡಿಕೊಂಡಾಗ ತಂಡ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ರಾಯಲ್ಸ್ ನಾಯಕ ಸ್ಟೀವನ್ ಸ್ಮಿತ್ ಹೇಳಿದರು.
ಐಪಿಎಲ್ ಅಂಪೈರ್ಗಳನ್ನು ಟೀಕಿಸಿ ಟ್ವೀಟ್ ಮಾಡಿದ ಧೋನಿ ಪತ್ನಿ ಸಾಕ್ಷಿ, ಬಳಿಕ ಡಿಲೀಟ್!