ಗದಗ: ಮಹಿಳೆಯರ ಸುರಕ್ಷತೆಗಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಶಹರ ಪೊಲೀಸ್ ಠಾಣೆ ಆವರಣದಲ್ಲಿ ಗಣರಾಜ್ಯೋತ್ಸವ ದಿನದಂದು ಗೆಳತಿ ಸಹಾಯ ಕೇಂದ್ರ ಆರಂಭಿಸಲಾಗಿದೆ.
ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ಮಹಿಳೆಯ ಹಕ್ಕುಗಳು ಕುರಿತ ಮಾಹಿತಿಯುಳ್ಳ ಪರಿಣಿತರು ಹಾಗೂ ವಕೀಲರನ್ನೊಳಗೊಂಡ ಮಹಿಳೆಯರ ತಂಡ ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದೆ. ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು, ತಮ್ಮ ಮೇಲೆ ಯಾವುದೇ ರೀತಿಯ ಅನ್ಯಾಯ, ದೌರ್ಜನ್ಯಗಳು ನಡೆದರೆ ಸಹಾಯವಾಣಿ ಕೇಂದ್ರಕ್ಕೆ ತೆರಳಿ ದೂರು ನೀಡಬಹುದು. ತಮಗಾಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಎಸ್ಪಿ ಶ್ರೀನಾಥ ಜೋಶಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಸಹಾಯವಾಣಿ ಕೇಂದ್ರದಲ್ಲಿ ನೊಂದ ಮಹಿಳೆಯರಿಗೆ ಸಹಾಯ, ಕುಟುಂಬ ದೌರ್ಜನ್ಯ ಪ್ರಕರಣಗಳು, ಮಕ್ಕಳ ಮೇಲಿನ ದೌರ್ಜನ್ಯ, ಸರ್ಕಾರದಿಂದ ಇರುವ ಸೌಲಭ್ಯಗಳ ಮಾಹಿತಿ, ಮಾನಸಿಕ, ದೈಹಿಕ ಅನಾರೋಗ್ಯದ ಬಗ್ಗೆ ಸಮಾಲೋಚನೆ, ಮಾನಸಿಕ ಖಿನ್ನತೆ, ಎಸ್ಸಿ, ಎಸ್ಟಿ ಮಹಿಳೆಯರಿಗೆ ಪರಿಹಾರ ಕುರಿತು ಯೋಜನೆ, ಅರಿವು, ಮಹಿಳೆ ಮತ್ತು ಬಾಲಕಿಯರಿಗೆ ಸ್ವಯಂ ರಕ್ಷಣೆ ಕಲೆಯ ಅರಿವು ಮೂಡಿಸುವುದು ಗೆಳತಿ ಸಹಾಯ ಕೇಂದ್ರದ ಉದ್ದೇಶವಾಗಿದೆ ಎಂದರು.
ಡಿಎಸ್ಪಿ ಪ್ರಲ್ಹಾದ, ಸಿಪಿಐ ಆರ್.ಎಫ್. ದೇಸಾಯಿ ಹಾಗೂ ಸಿಬ್ಬಂದಿ ಇದ್ದರು.