ಹೊಸನಗರ: ಕುಂಭತ್ತಿಯಲ್ಲಿ ಕಲ್ಲು ಗಣಿಗಾರಿಕೆ ತಡೆಯದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಕಾರಣಗಿರಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಅವರು, ನಗರ ಹೋಬಳಿ ಕುಂಭತ್ತಿ ಗ್ರಾಮದ ಸ.ನಂ.5 ಪ್ರದೇಶದಲ್ಲಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ಜನಜೀವನಕ್ಕೆ ತೊಂದರೆಯಾಗುತ್ತಿದೆ. ಅನೇಕ ಬಾರಿ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಮತದಾನ ಬಹಿಷ್ಕರಿಸುವುದಾಗಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಗಣಿಗಾರಿಕೆ ನಿಬಂಧನೆಗಳನ್ನು ಗಾಳಿಗೆ ತೂರಿ ಬ್ಲಾಸ್ಟಿಂಗ್ ಮಾಡುತ್ತಿದ್ದು, ಶಬ್ದಮಾಲಿನ್ಯ ಹೆಚ್ಚಾಗಿದೆ. ಗ್ರಾಮಸ್ಥರ ಬೆಳೆ ಹಾನಿಯಾಗುತ್ತಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಗ್ರಾಮಸ್ಥರಿಗೆ ಸೂಕ್ತ ಪರಿಹಾರ, ರಕ್ಷಣೆ ಇಲ್ಲವಾಗಿದೆ. ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಒಮ್ಮತದ ಅಭಿಪ್ರಾಯಕ್ಕೆ ಗ್ರಾಮಸ್ಥರು ಬಂದಿದ್ದಾರೆ. ಪ್ರತಿಭಟನೆಯಲ್ಲಿ ಕುಂಭತ್ತಿ ಕೃಷ್ಣಮೂರ್ತಿ, ಅನುಪಮಾ, ಶಶಾಂಕ್, ಸತ್ಯನಾರಾಯಣ, ಆನಂದ, ಲತಾ, ಮಂಜಪ್ಪ, ಸಂಜೀವ, ಆಟೋ ರಾಘು, ಗಿರಿಯ ಪೂಜಾರಿ, ಸುಮತಿ, ಮಹೇಶ, ಶಾಂತಾ, ಯಶೋದಾ, ಪದ್ಮಾವತಿ ಇದ್ದರು.