ಬೆಂಗಳೂರು: ವಾಹನ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದು ಇವೆಂಟ್ ಮ್ಯಾನೆಜ್ಮೆಂಟ್ ಕಂಪನಿಯ ಉದ್ಯೋಗಿಗಳು ಟೆಂಟ್ಹೌಸ್ನಲ್ಲಿ ಕೆಲಸ ಮಾಡುವ ಯುವಕನನ್ನು ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಪ್ರಕರಣ ಸೋಲದೇವನಹಳ್ಳಿ ನಡೆದಿದೆ.
ಬಾಗಲಗುಂಟೆ ನಿವಾಸಿ ಅರುಣ್ ಕುಮಾರ್(22) ಕೊಲೆಯಾದ ಯುವಕ. ಕೃತ್ಯ ಎಸಗಿದ ನಂದೀಶ್ ಎಂಬಾತನನ್ನು ವಶಕ್ಕೆ ಪಡೆದು, ಇತರೆ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಡಿ ನಿಲ್ಲಿಸುವ ವಿಚಾರಕ್ಕೆ ಹತ್ಯೆ
ಆರೋಪಿಗಳು ಮಾದನಾಯಕನಹಳ್ಳಿಯಲ್ಲಿರುವ ಎಪಿಪಿ ಎಂಟರ್ಟೈನ್ಮೆಂಟ್ ಇವೆಂಟ್ ಮ್ಯಾನೆಜ್ಮೆಂಟ್ ಕಂಪನಿಯಲ್ಲಿ ಡೆಕೋರೇಟರ್ಸ್ ಮತ್ತು ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.ಶುಕ್ರವಾರ ರಾತ್ರಿ ಸಪ್ತಗಿರಿ ಎಂಜಿನಿಯರ್ ಕಾಲೇಜು ಸಮೀಪದ ಪ್ರಾಂಗಣ ಫಂಕ್ಷನ್ ಹಾಲ್ನಲ್ಲಿ ಡೆಕೋರೇಟ್ ಮಾಡಲು ಬಂದಿದ್ದು, ಪ್ರಾಂಗಣ ಮುಂಭಾಗ ಬೈಕ್ಗಳ ಪಾರ್ಕಿಂಗ್ ಮಾಡಿದ್ದರು.
ಇದನ್ನೂ ಓದಿ: 550 ಮಕ್ಕಳ ತಂದೆಗೆ ಡಚ್ ನ್ಯಾಯಾಲಯ ನಿಷೇಧ ಹೇರಿದ್ದು ಯಾಕೆ?
ಅದೇ ವೇಳೆ ಬೈಕ್ನಲ್ಲಿ ಸ್ನೇಹಿತನ ಜತೆ ಬಂದ ಅರುಣ್ ಕುಮಾರ್, ಆರೋಪಿಗಳ ಜತೆ ಪಾರ್ಕಿಂಗ್ ವಿಚಾರಕ್ಕೆ ಜಗಳ ಆರಂಭಿಸಿದ್ದಾನೆ ಎಂದು ಹೇಳಲಾಗಿದೆ. ಅದು ವಿಕೋಪಕ್ಕೆ ಹೋದಾಗ ಆರೋಪಿಗಳ ಪೈಕಿ ನಂದೀಶ್ ಅರುಣ್ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾನೆ.
ಕ್ಷ್ರಿಪ್ರ ಕಾರ್ಯಾಚರಣೆ
ಬಳಿಕ ನಂದೀಶ್ ಹಾಗೂ ಇತರೆ ಆರೋಪಿಗಳು ಪರಾರಿಯಾಗಿದ್ದರು. ಆದರೆ, ಕ್ಷೀಪ್ರ ಕಾರ್ಯಾಚರಣೆ ನಡೆಸಿ ನಂದೀಶ್ನನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಂದೆಡೆ ಅರುಣ್ ಕುಮಾರ್ ಆರೋಪಿಗಳ ಬಳಿ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದ. ಅದೇ ವಿಚಾರಕ್ಕೆ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.