ಇಂದೋರ್: ಊಟದ ಬಳಿಕ ಮಾವು ತಿಂದು ಯುವತಿಯೊಬ್ಬಳು ಮೃತಪಟ್ಟಿರುವ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಘಟನೆಯು ಮಧ್ಯಪ್ರದೇಶದ ಇಂದೋರ್ ಬಳಿಯ ಬಿಜಾಲ್ಪುರ ಎಂಬಲ್ಲಿ ನಡೆದಿದೆ.
ಅರ್ಚನಾ(23) ಎಂಬ ಯುವತಿಯೇ ಮೃತ ದುರ್ದೈವಿಯಾಗಿದ್ದು, ಈಕೆಯ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಯುವತಿಯು ಜುಲೈ 10ರಂದು ರಾತ್ರಿ ಊಟವಾದ ಬಳಿಕ ಮಾವಿನ ಹಣ್ಣಿನ ಸೇವನೆಯನ್ನು ಮಾಡಿದ್ದಳು. ಅದೇ ದಿನ ತಡರಾತ್ರಿ ಯುವತಿಯ ಆರೋಗ್ಯ ಹಠಾತ್ ಆಗಿ ಹದಗೆಟ್ಟು ತೀವ್ರವಾದ ಸುಸ್ತು ಹಾಗೂ ತಲೆನೋವಿನಿಂದಾಗಿ ಅಸ್ವಸ್ಥಳಾಗಿದ್ದಾಳೆ.
ಇದನ್ನೂ ಓದಿ: ಕಾಲೇಜ್ ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣ: ಆರು ಪಿಎಫ್ಐ ಕಾರ್ಯಕರ್ತರು ದೋಷಿ, ಐವರನ್ನು ಖುಲಾಸೆಗೊಳಿಸಿದ ನ್ಯಾಯಾಲಯ
ಕೂಡಲೇ ಯುವತಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಆಕೆಯ ಬಿಪಿ ನಿರಂತರವಾಗಿ ಕಡಿಮೆಯಾಗಿ ಇದ್ದಕ್ಕಿದ್ದಂತೆ ನಿಧನಳಾಗಿದ್ದಾಳೆ. ಕೂಡಲೇ ಆಸ್ಪತ್ರೆಯ ವ್ಯವಸ್ಥಾಪಕರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ಬಳಿಕವಷ್ಟೇ ಯುವತಿಯ ಸಾವಿನ ನಿಖರ ಕಾರಣ ಬಹಿರಂಗಪಡಿಸಲು ಸಾಧ್ಯ. ಈಗಾಗಲೇ ಕುಟುಂಬಸ್ಥರ ಹೇಳಿಕೆ ಪಡೆದು ತನಿಖೆ ನಡುಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಗ್ರಾಮದಲ್ಲಿ ಮಾವಿನ ಹಣ್ಣು ತಿಂದು ಹಲವರು ಅಸ್ವಸ್ಥರಾಗಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.(ಏಜೆನ್ಸೀಸ್)