ಹೈದರಾಬಾದ್: ಕೆಟ್ಟು ಹೋದ ಫೋನ್ ರಿಪೇರಿ ಮಾಡಿಸಿಕೊಡಲು ಪಾಲಕರು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಜೈಪುರ ಮಂಡಲದ ವಲ್ಲಲ ಗ್ರಾಮದಲ್ಲಿ ಗುರುವಾರ ನಡೆದಿದೆ.
ವಲ್ಲಲ ಗ್ರಾಮದ ಪ್ಯಾಗ ಸರಕ್ಕ ಮತ್ತು ಸ್ವಾಮಿ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು. ಮಗಳು ಸೈಶುಮಾ (19) ಮಂಚೇರಿಯಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ತಾನು ಬಳಸುತ್ತಿದ್ದ ಸ್ಮಾರ್ಟ್ಫೋನ್ ಕೆಟ್ಟು ಹೋಗಿತ್ತು. ಹೀಗಾಗಿ ರಿಪೇರಿ ಮಾಡಿಸಿಕೊಡುವಂತೆ ತಾಯಿ ಬಳಿ ಕೇಳಿದ್ದಳು.
ಆದರೆ, ತಾಯಿ, ನೀನು ಆಗಾಗ ಫೋನ್ ಡ್ಯಾಮೇಜ್ ಮಾಡುತ್ತೀಯ, ಇದೀಗ ನಮ್ಮ ಬಳಿ ಹಣವಿಲ್ಲ, ರಿಪೇರಿ ಮಾಡಿಸಿಕೊಡಲು ಆಗುವುದಿಲ್ಲ ಎಂದು ಏರು ಧ್ವನಿಯಲ್ಲಿ ಬೈದು ಕಳುಹಿಸಿದ್ದರು. ನಾನು ಕೇಳಿದ್ದನ್ನು ಅಣ್ಣ ಏನಾದರೂ ಕೇಳಿದ್ದರೆ ತಕ್ಷಣವೇ ರಿಪೇರಿ ಮಾಡಿಸಿಕೊಡುತ್ತಿದ್ದರು. ಆದರೆ, ನಾನು ಕೇಳಿದರೆ ಯಾವಾಗಲೂ ಯಾವುದನ್ನೂ ಇಲ್ಲ ಅಂತಾರೆ ಎಂದು ಸೈಶುಮಾ ನೊಂದುಕೊಂಡಿದ್ದಳು.
ಇದೇ ದುಃಖದಲ್ಲಿದ್ದ ಸೈಶುಮಾ, ಮನೆಯವರೆಲ್ಲ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದಳು. ಬಳಿಕ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮಗಳ ಸ್ಥಿತಿಯನ್ನು ನೋಡಿದ ಪಾಲಕರು ಆಘಾತದಿಂದ ಕುಸಿದುಬಿದ್ದರು. ಮಗಳ ಸಾವಿನ ದುಃಖ ತಾಳಲಾರದೇ ಪಾಲಕರು ಆಕ್ರಂದನ ಮುಗಿಲು ಮುಟ್ಟಿತು. ಸ್ಥಳೀಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಬಾಲರಾಮನಿಗೆ 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ ಉಡುಗೊರೆ ಕೊಟ್ಟ ಮಾಜಿ ಐಎಎಸ್ ಅಧಿಕಾರಿ!