ಮುಂಬೈ: ತಮ್ಮ ಪಕ್ಷದ ವಿರುದ್ಧ ಮಾತನಾಡಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ವಿರುದ್ಧ ಶಿವಸೇನಾ ವಾಗ್ದಾಳಿ ನಡೆಸಿದ್ದು, ಪ್ರತಿಯೊಂದು ಅಕ್ಷರಮಾಲೆಯು ಸಹ ಪ್ರಮುಖವಾದುದ್ದು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕೆಂದು ಟೀಕಿಸಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷವು ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದ್ದಕ್ಕೆ ಗುರುವಾರ ಅಮೃತಾ ಫಡ್ನವೀಸ್, “ಶವ ಸೇನಾ” ಎಂದು ಉಲ್ಲೇಖಿಸಿ ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಯಾಗಿ ತಿರುಗೇಟು ನೀಡಿರುವ ಶಿವಸೇನೆ ಅಮೃತಾ ಅವರು ತಮ್ಮ ಹೆಸರಿನ ಅಕ್ಷರಮಾಲೆಯ ಪ್ರಾಮುಖ್ಯತೆಯನ್ನು ಅರಿಯಲಿ ಎಂದು ಟೀಕಿಸಿದೆ.
ಇದನ್ನೂ ಓದಿ: ಸಂಸದೆ ಸುಮಲತಾ ನಡೆ ಟೀಕಿಸಿ ಗಂಭೀರ ಆರೋಪ ಮಾಡಿದ ಸಂಸದ ಪ್ರತಾಪ್ ಸಿಂಹ..!
ನಿಮ್ಮ ಹೆಸರಿನ “ಎ” ಅಕ್ಷರವನ್ನು ಬಿಡಬೇಡಿ. ಬಿಟ್ಟರೆ, ಮೃತ ಎಂದಾಗುತ್ತದೆ. ನಿಮ್ಮ ಹೆಸರಿನ “ಎ” ಅಕ್ಷರದ ಮಹತ್ವ ಅರಿಯಿರಿ ಅ”ಮೃತ” ಎಂದಿರುವ ಶಿವಸೇನೆ, ದೀಪಾವಳಿಯಂತಹ ಸುಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತಂದುಕೊಳ್ಳಬೇಡಿ ಎಂದು ಶಿವಸೇನಾ ವಕ್ತಾರ ನೀಲಂ ಗೊರ್ಹೆ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಶಿವಸೇನಾ ಹೆಸರನ್ನು ಕರೆಯುವುದರಿಂದ ನಿಮಗೆ ಯಾವುದೇ ಲಾಭವಾಗದು ಎಂದು ಕಾಲೆಳೆದಿದ್ದಾರೆ.
ಇದಕ್ಕೂ ಮುಂಚೆ ಟ್ವೀಟ್ ಮಾಡಿದ್ದ ಅಮೃತಾ ಫಡ್ನವೀಸ್, ನಿಖರವಾಗಿ ಏನು ನಡೆಯುತ್ತಿದೆ? ಶಿವಸೇನಾ ಬಿಹಾರದಲ್ಲಿ ತನ್ನ ಸಹೋದ್ಯೋಗಿಯನ್ನೇ (ಕಾಂಗ್ರೆಸ್) ಕೊಂದಿದೆ. ಮಹಾರಾಷ್ಟ್ರವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ ಎಂಬುದು ಅವರಿಗೆ ವಿಷಯವೇ ಅಲ್ಲ, ಆದರೆ, ಬಿಹಾರವನ್ನು ಮಾತ್ರ ಸರಿಯಾದ ಸ್ಥಳದಲ್ಲಿ ಇಟ್ಟಿದ್ದಾರೆಂದು ಕುಹಕವಾಡಿದ್ದರು. (ಏಜೆನ್ಸೀಸ್)