ಪಡುಬಿದ್ರಿ: ಅನಿವಾಸಿ ಭಾರತೀಯ ಪತಿ ಶಿವದಯ ಹಾಗೂ ಅವರ ತಂದೆ ದಯಾಶಂಕರ್ ಮತ್ತವರ ಪತ್ನಿ ಸುಜಾತ ಮಾನಸಿಕ ಹಿಂಸೆ ನೀಡಿ ವರದಕ್ಷಿಣೆಗೆ ಬೇಡಿಕೆಯಿಟ್ಟು, ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಕಾಪು ಮಜೂರಿನ ಸ್ಮಿತಾ ಎಂಬುವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೂಲತಃ ಲಂಡನ್ ನಿವಾಸಿಯಾಗಿರುವ ಶಿವದಯ 2021 ಸೆ.8ರಂದು ಮಜೂರಿನ ಸ್ಮಿತಾ ಅವರನ್ನು ಉಡುಪಿಯಲ್ಲಿ ವಿವಾಹವಾಗಿದ್ದರು.
20 ಲಕ್ಷ ರೂ. ವರದಕ್ಷಿಣೆ
ಮದುವೆಯ ಸಂದರ್ಭ 20 ಲಕ್ಷ ರೂ. ವರದಕ್ಷಿಣೆ ನೀಡಬೇಕು ಹಾಗೂ ಮದುವೆಯ ಎಲ್ಲ ಖರ್ಚನ್ನು ನೋಡಿಕೊಳ್ಳುವಂತೆ ಆರೋಪಿತರು ತಿಳಿಸಿದ್ದರು. ಮದುವೆಯ ಸಮಯ ಗಂಡನಿಗೆ 3 ಪವನ್ ಬಂಗಾರ ನೀಡಿದ್ದು, ಮದುವೆ ನಂತರ ಮುಂಬೈಯ ಕುರ್ಲಾದ ಮನೆಗೆ ಗಂಡ ಹಾಗೂ ಅವರ ತಂದೆ-ತಾಯಿ ಕರೆದುಕೊಂಡು ಹೋಗಿದ್ದರು. ನಂತರ ಪುನಃ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸಲಾರಂಭಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಹಾರವನ್ನೂ ಕೊಡದೆ ಹಿಂಸೆ
ಮನೆಯಲ್ಲಿದ್ದ ಸಂದರ್ಭ ಆಹಾರವನ್ನ್ನೂ ಕೊಡದೆ ಮಾನಸಿಕವಾಗಿ ಹಿಂಸಿಸಿರುವುದಲ್ಲದೆ ಅತ್ತೆ ಸುಜಾತ ಹಲ್ಲೆ ನಡೆಸಿದ್ದಾರೆ. ನಂತರ ಗಂಡನನ್ನು ಪುಸಲಾಯಿಸಿ ಲಂಡನ್ಗೆ ಕರೆದುಕೊಂಡು ಹೋಗಿ ಅಲ್ಲಿಯೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರು. ಆ ಬಳಿಕ ಭಾರತಕ್ಕೆ ಬಂದಿದ್ದ ಸ್ಮಿತಾ ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಗಂಡನ ವಿರುದ್ಧ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಮಧ್ಯಸ್ಥಿಕೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಜ.23ರಂದು ಮಧ್ಯಸ್ಥಿಕೆ ಮುಗಿದ ಬಳಿಕ ಸ್ಮಿತಾ ಮನೆಗೆ ಹೋಗುವ ಸಂದರ್ಭ ತನ್ನ ಗಂಡ ಹಾಗೂ ಮಾವ ದಯಾಶಂಕರ್ ಮಜೂರಿನಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಹಿಂಸೆ ನೀಡಿ, ವರದಕ್ಷಿಣೆಗೆ ಬೇಡಿಗೆ ಇಟ್ಟು, ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.