ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿಬಿಟ್ಟಿದೆ. ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿಯ ಜತೆಗೆ ಹಲವಾರು ಜೀವಗಳನ್ನು ಬಲಿ ಪಡೆದಿದೆ ಈ ಚಂಡಮಾರುತ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಪರಿಹಾರ ಕಾರ್ಯವು ಭರದಿಂದ ಸಾಗಿದೆ.
ಪರಿಹಾರ ಕಾರ್ಯದ ಫೋಟೋವನ್ನು ಭಾರತದ ಗೃಹ ಸಚಿವಾಲಯದ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಅದನ್ನು ನೋಡಿದ ಹಲವಾರು ಮಂದಿ ತಬ್ಬಿಬ್ಬಾಗಿಬಿಟ್ಟರು. ಏಕೆಂದರೆ ಪರಿಹಾರದ ಕಾರ್ಯದ ವಿಷಯ ಬರಬೇಕಾಗಿದ್ದ ಜಾಗದಲ್ಲಿ ವಿಸ್ಕಿ ಬಾಟಲ್ ಹಾಗೂ ಸ್ನ್ಯಾಕ್ಗಳು ಅಲ್ಲಿದ್ದವು!
ಇದನ್ನೂ ಓದಿ: ಎಲ್ಲವೂ ಮೋದಿಗಾಗಿ: 5 ಕಿ.ಮೀ ಆಟೋ ಪ್ರಯಾಣಕ್ಕೆ ಕೇವಲ ಒಂದೇ ರೂಪಾಯಿ!
ಇದನ್ನು ನೋಡಿದವರು ಸಾಕಷ್ಟು ಗೊಂದಲಕ್ಕೆ ಈಡಾದರು. ಎಲ್ಲೋ ಏನೋ ಎಡವಟ್ಟಾಗಿದೆ ಎಂದು ಬಹಳ ಮಂದಿಗೆ ತಿಳಿದರೂ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡರು. ‘ಅತಿಯಾಗಿ ಕೆಲಸ ಮಾಡಿದರೆ ಹೀಗೇ ಆಗುವುದು, ಪ್ರತಿಯೊಬ್ಬರೂ ವಿಶ್ರಾಂತಿ ಪಡೆಯಬೇಕು ಎನ್ನುವುದು ಇದಕ್ಕೇ’ ಎಂದು ತಮಾಷೆಯಾಗಿ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದರೆ, ಕೆಲವರು ಈ ಫೋಟೋ ನೋಡಿ ಆಕ್ರೋಶವನ್ನೂ ವ್ಯಕ್ತಪಡಿಸಿದರು.
“ಈ ಚಿತ್ರವನ್ನು ತೆಗೆದುಹಾಕಿ”, “ಇದೆಂಥ ಬೇಜವಾಬ್ದಾರಿ”, “ಇದಕ್ಕೆಲ್ಲಾ ಯಾರು ಹೊಣೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ” ಇತ್ಯಾದಿಯಾಗಿ ಕಮೆಂಟ್ಗಳನ್ನು ಹಾಕಿದವರೇ ಹೆಚ್ಚು.
ನಂತರ ಸಚಿವಾಲಯಕ್ಕೆ ಆಗಿರುವ ಪ್ರಮಾದ ತಿಳಿದು ಕೂಡಲೇ ಆ ಫೋಟೋವನ್ನು ಡಿಲೀಟ್ ಮಾಡಿದೆ. ಕಿರಿಯ ಉದ್ಯೋಗಿಯಾಬ್ಬರು ಫೇಸ್ಬುಕ್ ಪುಟವನ್ನು ನಿರ್ವಹಿಸುವಾಗ ಈ ರೀತಿ ಅಜಾಗರೂಕತೆಯಾಗಿದೆ. ತನ್ನ ವೈಯಕ್ತಿಕ ಫೇಸ್ಬುಕ್ ಖಾತೆಯಲ್ಲಿ ಹಾಕುವ ಫೋಟೋವನ್ನು ಸಚಿವಾಲಯದ ಫೇಸ್ಬುಕ್ಗೆ ಅಪ್ಲೋಡ್ ಮಾಡಿರುವ ಸಾಧ್ಯತೆ ಇದೆ ಎನ್ನುವ ಮೂಲಕ ಸ್ಪಷ್ಟನೆ ನೀಡಲಾಯಿತು.
ಇದನ್ನೂ ಓದಿ: ಮಿಡತೆ ಹಾವಳಿಯ ಭಯ ಬೇಡ: ರಾಜ್ಯದ ಕೃಷಿಕರಿಗೆ ಸಚಿವ ಪಾಟೀಲ್ ಅಭಯ
ಇದರ ಜತೆಗೆ ಇದನ್ನು ಅಪ್ಲೋಡ್ ಮಾಡಿರುವ ಉದ್ಯೋಗಿಯೂ ಕ್ಷಮೆ ಕೋರಿದ್ದಾರೆ. ಬೆಳಗ್ಗೆ 9.15ರಿಂದ 9.32ರವರೆಗೆ ಅಂದರೆ ಸುಮಾರು 17 ನಿಮಿಷ ಫೇಸ್ಬುಕ್ನಲ್ಲಿ ಇದ್ದ ಫೋಟೋ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಂತೂ ನಿಜ. ಗೃಹ ಸಚಿವಾಲಯದ ಫೇಸ್ಬುಕ್ಗೆ 2.79 ಲಕ್ಷಕ್ಕೂ ಹೆಚ್ಚು ಜನರು ಇದ್ದಾರೆ.