ಮುಂಬೈ: ಬಾಲಿವುಡ್ ನಟ ಸುಶಾಂತ್ ಸಾವಿನ ಬಳಿಕ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ ಸಾವಿನ ಪ್ರಕರಣವೂ ಸಹ ತುಂಬಾ ಮಹತ್ವ ಪಡೆದುಕೊಂಡಿದ್ದು, ತನಿಖೆ ನಡೆಯುತ್ತಿದೆ. ಇದರ ನಡುವೆ ಇಂಡಿಯಾ ಟುಡೆಗೆ ಲಭ್ಯವಾಗಿರುವ ದಿಶಾ ತನ್ನ ಕ್ಲೋಸ್ ಫ್ರೆಂಡ್ಸ್ ಜತೆ ನಡೆಸಿದ ವಾಟ್ಸ್ಆ್ಯಪ್ ಚಾಟ್, ಸಾಯುವ ದಿನದ ರಾತ್ರಿ ನಿಜಕ್ಕೂ ನಡೆದಿದ್ದೇನು ಎಂಬುದನ್ನು ಬಹಿರಂಗಪಡಿಸುವಂತಿದೆ.
ಸದ್ಯಕ್ಕೆ ದಿಶಾ ಅವರು ಮುಂಬೈನ ಮಲಾಡ್ನಲ್ಲಿರುವ ಅಪಾರ್ಟ್ಮೆಂಟ್ನ 14ನೇ ಮಹಡಿಯಿಂದ ಜಿಗಿದು ಜೂನ್ 9ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗಿದೆ. ಅಲ್ಲದೆ, ದಿಶಾ ಸಾವು ಜೂನ್ 14ರಂದು ಮೃತಪಟ್ಟ ನಟ ಸುಶಾಂತ್ ಸಾವಿಗೂ ತಳುಕು ಹಾಕಿಕೊಂಡಿದೆ. ಅದಕ್ಕೆ ಕಾರಣ ದಿಶಾ ಸುಶಾಂತ್ ಮ್ಯಾನೇಜರ್ ಆಗಿ ಕೆಲ ದಿನಗಳವರೆಗೆ ಕೆಲಸ ಮಾಡಿದ್ದರು.
ಇಂಡಿಯಾ ಟುಡೆಗೆ ಲಭ್ಯವಿರುವ ಮಾಹಿತಿ ಪ್ರಕಾರ ಪತಿ ಹಾಗೂ ದಿಶಾ ನಡುವೆ ಆಗಾಗ ಸಣ್ಣಪುಟ್ಟ ಜಗಳ ಕೂಡ ಆಗುತ್ತಂತೆ. ಸಾವಿಗೂ ನಾಲ್ಕು ದಿನಗಳ ಹಿಂದಷ್ಟೇ ಆಕೆ ಮಲಾಡ್ ಫ್ಲ್ಯಾಟ್ಗೆ ಸ್ಥಳಾಂತರವಾಗಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಪಾರ್ಟಿ ಆಯೋಜಿಸಿ, ಫ್ರೆಂಡ್ಸ್ಗೆ ಆಹ್ವಾನ ನೀಡಿದ್ದರು. ಈ ವೇಳೆ ತುಂಬಾ ಕುಡಿದಿದ್ದ ದಿಶಾ, ಯಾರು ಇನ್ಮುಂದೆ ಪರಸ್ಪರ ಯಾರನ್ನೂ ಕಾಳಜಿ ವಹಿಸುವುದಿಲ್ಲ ಎಂದಿದ್ದರಂತೆ. ಇದನ್ನು ಕೇಳಿಸಿಕೊಂಡ ಪಾರ್ಟಿಯಲ್ಲಿದ್ದ ಫ್ರೆಂಡ್ಸ್ ಈ ರೀತಿಯೆಲ್ಲ ಮಾತನಾಡಬೇಡ ಎಂದು ಸಮಾಧಾನ ಪಡಿಸಿದ್ದರಂತೆ. ಅಂದು ತುಂಬಾ ಭಾವುಕರಾಗಿದ್ದ ದಿಶಾ, ರಾತ್ರಿ 8 ಗಂಟೆಗೆ ಸ್ನೇಹಿತೆಯೊಬ್ಬಳಿಗೆ ಕರೆ ಮಾಡಿ ಲಾಕ್ಡೌನ್ ನಂತರದ ಯೋಜನೆಗಳ ಬಗ್ಗೆ ಚರ್ಚಿಸಿದ್ದಳಂತೆ. ಅಲ್ಲದೆ, ಮಧ್ಯ ರಾತ್ರಿ ಯುಕೆಯಲ್ಲಿರುವ ಸ್ನೇಹಿತೆಗೆ ವಿಡಿಯೋ ಕಾಲ್ ಮಾಡಿಯು ಮಾತನಾಡಿದ್ದಳಂತೆ.
ಇದಾದ ಕೆಲವೇ ಕ್ಷಣಗಳಲ್ಲಿ ತನ್ನ ಬೆಡ್ರೂಮ್ಗೆ ಓಡಿದ ದಿಶಾ ಬಾಗಿಲು ಲಾಕ್ ಮಾಡಿಕೊಂಡಳು. ಎಷ್ಟೇ ಬಾಗಿಲೂ ಬಡಿದರೂ ಏನು ಪ್ರತಿಕ್ರಿಯೆ ಬರದಿದ್ದಾಗ ಫ್ರೆಂಡ್ಸ್ ಹಾಗೂ ಆಕೆಯ ಪತಿ ಬಾಗಿಲು ಮುರಿದು ನೋಡುವಷ್ಟರಲ್ಲಿ ಆಕೆ ಬಾಲ್ಕನಿಯಿಂದ ಕೆಳಗೆ ಜಿಗಿದಿರುವುದನ್ನು ನೋಡಿ ಕಟ್ಟಡದ ಕೆಳಕ್ಕೆ ಓಡಿದ್ದಾರೆ. ಆ ವೇಳೆ ದಿಶಾ ಇನ್ನು ಜೀವಂತೆವಾಗಿದ್ದಳಂತೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆಕೆ ಬದುಕುಳಿಯಲಿಲ್ಲ.
ಈ ಮೇಲಿನ ಮಾಹಿತಿಯನ್ನು ದಿಶಾ ಫ್ರೆಂಡ್ಸ್ ಒಬ್ಬರು ಅಂದು ಪಾರ್ಟಿಯಲ್ಲಿ ನಡೆದಿದ್ದೇನು ಎಂಬುದರ ಬಗ್ಗೆ ಮತ್ತೊಬ್ಬ ಫ್ರೆಂಡ್ಸ್ ಜತೆ ವಾಟ್ಸ್ಆ್ಯಪ್ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಮಾಹಿತಿ ಕಾಲೇಜ್ ಫ್ರೆಂಡ್ಸ್ನ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಹರಿದಾಡಿದೆ. ಆ ಗ್ರೂಪ್ನಲ್ಲಿ ದಿಶಾ ಕೂಡ ಸದಸ್ಯರಾಗಿದ್ದರು. ಇದನ್ನು ಪೊಲೀಸರು ಸಹ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಈರುಳ್ಳಿಯಿಂದ ಹರಡುತ್ತಿದೆ ಸೋಂಕು- 500ಕ್ಕೂ ಅಧಿಕ ಮಂದಿಯಲ್ಲಿ ಪತ್ತೆ: ಏನಿದು ವೈರಸ್?
ಅಂದಹಾಗೆ ದಿಶಾ ಟಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುವುದರೊಂದಿಗೆ ಸುಶಾಂತ್ ಅವರ ಅಕೌಂಟ್ ಕೂಡ ನೋಡಿಕೊಳ್ಳುತ್ತಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡ ಐದು ದಿನದಲ್ಲೇ ಸುಶಾಂತ್ ಸಹ ಆತ್ಮಹತ್ಯೆ ಸ್ಥಿತಿಯಲ್ಲಿ ಸಾವಿಗೀಡಾದರು. ಅಂದಿನಿಂದ ಇಬ್ಬರ ಸಾವಿನ ನಡುವೆ ಅನೇಕ ಕತೆಗಳು ಹುಟ್ಟಿಕೊಂಡಿವೆ. ಇಬ್ಬರದ್ದು ಕೊಲೆ ಎನ್ನಲಾಗುತ್ತಿದ್ದು, ಈ ಸಂಬಂಧ ತನಿಖೆಯು ನಡೆಯುತ್ತಿದೆ. ಇದರ ನಡುವೆ ಮಹಾರಾಷ್ಟ್ರದ ಬಿಜೆಪಿ ಸಂಸದ ನಾರಾಯಣ ರಾಣೆ ಗಂಭೀರ ಆರೋಪ ಮಾಡಿ, ದಿಶಾ ಅವರನ್ನು ರೇಪ್ ಆ್ಯಂಡ್ ಮರ್ಡರ್ ಮಾಡಲಾಗಿದೆ. ಇದರ ಹಿಂದೆ ಮಹಾರಾಷ್ಟ್ರ ರಾಜಕೀಯ ಹಾಗೂ ಬಾಲಿವುಡ್ನ ದೊಡ್ಡವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಆದರೆ, ಸುಶಾಂತ್ ಅಥವಾ ದಿಶಾ ಕುರಿತಾಗಲಿ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದ್ದು, ಮುಗಿದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಬಹುದು ಎನ್ನಲಾಗಿದೆ. (ಏಜೆನ್ಸೀಸ್)
ಮಗಳ ಬರ್ತಡೇಗೆ ತಂದ ಗೊಂಬೆಯ ಜನನಾಂಗದಲ್ಲಿನ ಬಟನ್ ಒತ್ತಿದ ಮಹಿಳೆಗೆ ಕಾದಿತ್ತು ಶಾಕ್!