ಕೋಲ್ಕತ: ಮಾಜಿ ಸಚಿವ ಸೇರಿ ತೃಣಮೂಲ ಕಾಂಗ್ರೆಸ್ನ 10 ಭ್ರಷ್ಟ ಮುಖಂಡರಿಗೆ ಸಿಎಂ ಮಮತಾ ಬ್ಯಾನರ್ಜಿ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಸರ್ಕಾರ ಬಡವರಿಗಾಗಿ ಕೊಟ್ಟಿದ್ದ ಪರಿಹಾರದ ಹಂಚಿಕೆಯಲ್ಲಿ ಇವರೆಲ್ಲರೂ ಭ್ರಷ್ಟಾಚಾರ ಎಸಗಿರುವುದಾಗಿ ಆರೋಪಗಳು ಕೇಳಿ ಬಂದಿದ್ದವು. ಕೆಲದಿನಗಳ ಹಿಂದೆ ಪರಿಹಾರ ವಿತರಣೆ ಕಾರ್ಯದಲ್ಲಿ ಭ್ರಷ್ಟಾಚಾರ ನಡೆಸದಂತೆ ದೀದಿ ತಮ್ಮ ಪಕ್ಷದ ಮುಖಂಡರಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇದನ್ನು ಮೀರಿ ಭ್ರಷ್ಟಾಚಾರ ಎಸಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ಷೋಕಾಸ್ ನೋಟಿಸ್ ಜಾರಿ ಮಾಡಿರುವುದಾಗಿ ಹೇಳಲಾಗಿದೆ.
ಪಕ್ಷದ ಮುಖಂಡರು ಭ್ರಷ್ಟಾಚಾರ ಎಸಗಿದ್ದೇ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಗೆ ಹಿನ್ನಡೆಯಾಗಲು ಕಾರಣ ಎಂಬುದು ಪಕ್ಷದ ಬಲವಾದ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೂಡ ಲಾಕ್ಡೌನ್ ಪರಿಹಾರ ವಿತರಣೆಯಲ್ಲಿನ ಭ್ರಷ್ಟಾಚಾರ ವಿಷಯವನ್ನು ಮುಂದಿಟ್ಟುಕೊಂಡು ವಿರೋಧಿಗಳು ಪ್ರಚಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನು ಮನಗಂಡು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮುಖಂಡರ ವಿರುದ್ಧ ದೀದಿ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: video/ ಮರದ ಮೇಲೆ ಶವ ಇದೆಯೆಂದು ಬಂದ ಪೊಲೀಸರಿಗೆ ಕಾದಿತ್ತೊಂದು ಅಚ್ಚರಿ!
ಜವಳಿ ಖಾತೆಯ ಮಾಜಿ ಸಚಿವ ಶ್ಯಾಮಪಾದಾ ಮುಖರ್ಜಿ, ಸೇರಿ ಬಂಕುರ ಜಿಲ್ಲೆಯ ಬಿಷ್ಣುಪುರ ಬ್ಲಾಕ್ನ ಮೂವರು ಮುಖಂಡರು, ಅಸಂಸಾಲ್ನ ಉಪಮೇಯರ್ ತಬಸ್ಸುಂ ಅರಾ ಹಾಗೂ ಇನ್ನಿಬ್ಬರು ಕೌನ್ಸಿಲರ್ಗಳು, ಪತ್ರಸ್ಯಾಸ್ ಬ್ಲಾಕ್ ಅಧ್ಯಕ್ಷ ಪಾರ್ಥ ಪ್ರಥಿಂ ಸಿನ್ಹಾ, ತಾಳದಂಗ್ರಾ ಬ್ಲಾಕ್ನ ಟಿಎಂಸಿಯ ಯುವ ಘಟಕದ ಅಧ್ಯಕ್ಷ ತಪಸ್ ಸುರ್, ಸಿಎಂ ಪರಿಹಾರ ನಿಧಿಗೆಂದು 20 ಲಕ್ಷ ರೂ. ಸಂಗ್ರಹಿಸಿ ತನ್ನ ಹೆಸರಿಗೆ ಜಮೆ ಮಾಡಿಕೊಂಡಿದ್ದಕ್ಕಾಗಿ ಕಾರ್ಮಿಕ ಸಂಘಟನೆ ಮುಖ್ಯಸ್ಥ ಪ್ರಭಾತ್ ಚಟರ್ಜಿ ಮತ್ತು ಬರ್ಧ್ವಾನ್ ಜಿಲ್ಲೆಯ ಪಕ್ಷದ ಇನ್ನೂ ಮೂವರು ಮುಖಂಡರು ಷೋಕಾಸ್ ನೋಟಿಸ್ ಪಡೆದವರಾಗಿದ್ದಾರೆ.
ಇವರೆಲ್ಲರಿಗೂ ಇನ್ನು 48 ಗಂಟೆಗಳ ಒಳಗಾಗಿ ಷೋಕಾಸ್ ನೋಟಿಸ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ ಎಂದು ಪಕ್ಷದ ಮುಖಂಡ ಸುಭಾಶಿಶ್ ಬಟಾಬ್ಯಾಲ್ ತಿಳಿಸಿದ್ದಾರೆ.