ಅರಕಲಗೂಡು: ತಾಲೂಕಿನ ಗೊಬ್ಬಳಿ ಕಾವಲು ಗ್ರಾಮದಲ್ಲಿ ರೈತರು ಬೆಳೆದ ಕಲ್ಲಂಗಡಿ ಹಣ್ಣಿನ ಗಿಡಗಳನ್ನು ಶನಿವಾರ ರಾತ್ರಿ ಕಿಡಿಗೇಡಿಗಳು ಕಿತ್ತು ನಾಶಪಡಿಸಿದ್ದಾರೆ.
ಗ್ರಾಮದ ರೈತರಾದ ಸಿ.ಕೆ.ಮೂರ್ತಿ, ವೆಂಕಟೇಶ್, ವಸಂತ ಅವರು ಸುಮಾರು 6 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಹಣ್ಣಿನ ಗಿಡಗಳನ್ನು ಬೆಳೆದಿದ್ದರು. ಒಂದೂವರೆ ತಿಂಗಳಿನ ಗಿಡಗಳನ್ನು ಕಿಡಿಗೇಡಿಗಳು ಕಿತ್ತು ನಾಶಪಡಿಸಿದ್ದಾರೆ.
ಬರಗಾಲದ ಕಾರಣ ಮೋಟಾರ್ ಮೂಲಕ ನೀರು ಹಾಯಿಸಿಕೊಂಡು ಬೆಳೆಸಿದ್ದೆವು. ದುಷ್ಕರ್ಮಿಗಳು 400 ಗಿಡಗಳನ್ನು ಕಿತ್ತು ಹಾನಿಪಡಿಸಿದ್ದಾರೆ. ಇದರಿಂದ ಸಾಲ ಮಾಡಿ ಬೆಳೆದಿದ್ದ ಗಿಡಗಳನ್ನು ಕಳೆದುಕೊಂಡು ಅಪಾರ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಸಿ.ಕೆ.ಮೂರ್ತಿ ಆಗ್ರಹಿಸಿದ್ದಾರೆ.