ಬೆಂಗಳೂರು: ಸೋಮವಾರ (ಮಾರ್ಚ್ 25) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರಸಕ್ತ ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) 4 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಬೊಬ್ಬಿರಿದ ವಿರಾಟ್ ಕೊಹ್ಲಿ ಕೇವಲ 49 ಎಸೆತದಲ್ಲಿ 2 ಸಿಕ್ಸರ್ 11 ಬೌಂಡರಿ ನೆರವಿನೊಂದಿಗೆ 77 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಮೋಘ ಆಟವಾಡಿದ ಕಿಂಗ್ ಕೊಹ್ಲಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸಹ ದೊರಕಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೊಹ್ಲಿ, ಕ್ರಿಕೆಟ್ನಿಂದ ಎರಡು ತಿಂಗಳು ಅಂತರ ಕಾಯ್ದುಕೊಂಡಿದ್ದರ ಬಗ್ಗೆ ಮತ್ತು ಆ ಸಮಯದಲ್ಲಿ ಭಾರತದಿಂದ ದೂರ ಉಳಿದಿದ್ದರ ಕುರಿತು ಮೊದಲ ಬಾರಿಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡರು.
ವಿರಾಟ್ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಜನ್ಮ ನೀಡಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಗಂಡು ಮಗುವಿಗೆ ಜನ್ಮ ನೀಡಿದ್ದು, ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಇದರ ಅರ್ಥವೇನು ಎಂಬುದರ ಕುರಿತು ಜಾಲತಾಣದಲ್ಲಿ ಬಹಳಷ್ಟು ಚರ್ಚೆಯಾಯಿತು. ಮಗು ಜನಿಸಿದ ಸಮಯದಲ್ಲಿ ಕ್ರಿಕೆಟ್ನಿಂದ ಅಂತರ ಕಾಯ್ದುಕೊಂಡ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಸಹ ಮಿಸ್ ಮಾಡಿಕೊಂಡರು.
ನಿನ್ನೆಯ ಪಂದ್ಯದ ಬಳಿಕ ಈ ಬಗ್ಗೆ ಕೊಹ್ಲಿ ಮಾತನಾಡಿದ್ದು, ನಾವು ಆ ಸಮಯದಲ್ಲಿ ಭಾರತದಲ್ಲೇ ಇರಲಿಲ್ಲ. ಜನರು ನಮ್ಮನ್ನು ಗುರುತಿಸದ ಸ್ಥಳದಲ್ಲಿ ನಾವಿದ್ದೆವು. ಆ ಎರಡು ತಿಂಗಳು ಒಂದು ಕುಟುಂಬವಾಗಿ ಒಟ್ಟಿಗೆ ಸಮಯ ಕಳೆದೆವು ಮತ್ತು ಸಾಮಾನ್ಯ ವ್ಯಕ್ತಿಯಂತೆ ಜೀವಿಸಿದೆವು. ನನಗೆ ಮತ್ತು ನಮಗೆ ಒಂದು ಕುಟುಂಬವಾಗಿ ಇದು ಅತಿವಾಸ್ತವಿಕ ಅನುಭವವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
ಎರಡು ಮಕ್ಕಳನ್ನು ಹೊಂದಿರುವಾಗ ಸಹಜವಾಗಿ ಕುಟುಂಬದ ದೃಷ್ಟಿಕೋನದಿಂದ ಎಲ್ಲ ವಿಷಯಗಳು ಸಂಪೂರ್ಣವಾಗಿ ವಿಭಿನ್ನವಾಗಿರುತ್ತವೆ. ಕುಟುಂಬದಲ್ಲಿ ಒಟ್ಟಿಗೆ ಇರುವುದು ತುಂಬಾ ಮುಖ್ಯವಾಗುತ್ತದೆ ಮತ್ತು ಈ ಸಮಯದಲ್ಲಿ ಹಿರಿಯ ಮಗುವಿನೊಂದಿಗೆ ನಿಮ್ಮ ಸಂಪರ್ಕ ನಿಜಕ್ಕೂ ಅದ್ಭುತ. ಸಾಮಾನ್ಯವಾಗಿ ಕುಟುಂಬದೊಂದಿಗೆ ಇರಲು ನನಗೆ ಹೆಚ್ಚು ಸಮಯ ಸಿಗುವುದಿಲ್ಲ. ಆದರೆ ನನ್ನ ಬಿಡುವಿನ ಅವಧಿಯ ಪ್ರತಿ ಸೆಕೆಂಡ್ ಅನ್ನು ನಾನು ಕುಟುಂಬದೊಂದಿಗೆ ಆನಂದಿಸಿದೆ ಎಂದು ಕೊಹ್ಲಿ ಹೇಳಿದರು. ಅಲ್ಲದೆ, ಕುಟುಂಬದೊಂದಿಗೆ ಸಮಯ ಕಳೆಯಲು ಸಿಕ್ಕ ಅವಕಾಶಕ್ಕಾಗಿ ದೇವರಿಗೆ ಕೃತಜ್ಞತೆ ಸಹ ಸಲ್ಲಿಸಿದರು.
Player Of The Match: Virat Kohli
First win of the season ✅
Orange Cap ✅
Most half centuries by an Indian in T20 cricket ✅#PlayBold #ನಮ್ಮRCB #IPL2024 pic.twitter.com/xk9GP6wDQq— Royal Challengers Bengaluru (@RCBTweets) March 26, 2024
ಎರಡು ತಿಂಗಳ ಸಮಯ ನಾನು ಎಲ್ಲೂ ನನ್ನ ಹೆಸರನ್ನು ಕೇಳಲಿಲ್ಲ. ಆದರೆ, ನಾನು ಭಾರತಕ್ಕೆ ಮರಳಿದಾಗ ನನ್ನ ಹೆಸರು ಹಿಂದಿನದಕ್ಕಿಂತ ಜೋರಾಗಿ ಕೇಳಿಸಿದ ಅನುಭವವಾಯಿತು. ಆ ಕ್ಷಣಕ್ಕೆ ಅದನ್ನು ತೆಗೆದುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಆದರೆ, ಸಮಯ ಕಳೆದಂತೆ ಸಹಜ ಸ್ಥಿತಿಗೆ ಮರಳಿದೆ. ಆದರೆ, ಎರಡು ತಿಂಗಳ ಸಮಯ ಸುಂದರವಾಗಿತ್ತು. ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಡುವುದು ಮತ್ತು ಯಾರು ಗುರುತಿಸದೇ ಸಾಮಾನ್ಯ ಜನರಂತೆ ದಿನನಿತ್ಯದ ಜೀವನವನ್ನು ನಡೆಸುವುದು ಅದ್ಭುತ ಅನುಭವ ಎಂದು ಕೊಹ್ಲಿ ಹೇಳಿದರು.
ನೀವು ಕ್ರೀಡೆಯನ್ನು ಆಡುವಾಗ ಜನರು ಇತರ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ನಮ್ಮ ಸಾಧನೆಗಳು, ಅಂಕಿಅಂಶಗಳು, ಸಂಖ್ಯೆಗಳು ಬಗ್ಗೆ ಜನರು ಮಾತನಾಡುತ್ತಾರೆ. ಆದರೆ, ಜೀವನದ ಅಂತ್ಯದಲ್ಲಿ ನಾವು ಹಿಂತಿರುಗಿ ನೋಡಿದಾಗ ಜನರು ಅಂಕಿ-ಅಂಶಗಳು ಮತ್ತು ಸಾಧನೆಗಳ ಬಗ್ಗೆ ಯೋಚಿಸಲು ಹೋಗುವುದಿಲ್ಲ. ಆದ್ದರಿಂದ ಹಲವು ವರ್ಷಗಳಿಂದ ಸ್ವಾಭಾವಿಕವಾಗಿ ಜೊತೆಯಾದ ಸಂಬಂಧಗಳು ನಾನೆಂದಿಗೂ ಮರೆಯಲಾಗದ ಸಂಗತಿಯಾಗಿದೆ. ಇಷ್ಟು ವರ್ಷಗಳಿಂದ ನಾನು ಎಲ್ಲರಿಂದ ಸ್ವೀಕರಿಸಿದ ಪ್ರೀತಿ ಮತ್ತು ಮೆಚ್ಚುಗೆ ಮತ್ತು ಬೆಂಬಲ ನಿಜಕ್ಕೂ ಅದ್ಭುತವಾಗಿದೆ ಎಂದು ಕೊಹ್ಲಿ ಭಾವುಕವಾಗಿ ಮಾತನಾಡಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಐಪಿಎಲ್ 2024ರ ಆವೃತ್ತಿಯಲ್ಲಿ ತನ್ನ ಮೊದಲು ಗೆಲುವು ದಾಖಲಿಸಿದ ಆರ್ಸಿಬಿ, ತವರಿನಲ್ಲೇ ಗೆದ್ದಿದ್ದು ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿತು. ಟಾಸ್ ಗೆದ್ದ ಆರ್ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಪಂಜಾಬ್ ಕ್ಯಾಪ್ಟನ್ ಶಿಖರ್ ಧವನ್, ಜಿತೇಶ್ ಶರ್ಮಾ ನೆರವಿನಿಂದ ಕಿಂಗ್ಸ್ 20 ಓವರ್ಗಳಲ್ಲಿ 176 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ಕ್ಯಾಪ್ಟನ್ ಫಾಫ್ ವಿಕೆಟ್ ಬೇಗ ಕಳೆದುಕೊಂಡಿದ್ದು, ಆರಂಭಿಕ ಆಘಾತ ತಂದೊಡ್ಡಿತು. ಆದ್ರೆ, ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತ ಕಿಂಗ್ ಕೊಹ್ಲಿ, 49 ಎಸೆತಗಳಲ್ಲಿ 77 ರನ್ ಗಳಿಸಿ ಪೆವಿಲಿಯನ್ ಸೇರಿದರು. ತದನಂತರ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನವಾದ ಬೆನ್ನಲ್ಲೇ ಯಾರು ಆಡಲಿದ್ದಾರೆ ಎಂಬ ಗೊಂದಲ ಕಾಡುತ್ತಿದ್ದಂತೆ ಆರ್ಸಿಬಿಯನ್ನು ಗೆಲುವಿನ ದಡ ಸೇರಿಸಿದ್ದು, ದಿನೇಶ್ ಕಾರ್ತಿಕ್! ಕೇವಲ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸುವ ಮೂಲಕ ಬೆಂಗಳೂರಿಗೆ ಭರ್ಜರಿ ಗೆಲುವು ತಂದುಕೊಟ್ಟರು.
ಆರ್ಸಿಬಿಯ ಮುಂದಿನ ಪಂದ್ಯ ಮಾರ್ಚ್ 29ರಂದು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ. (ಏಜೆನ್ಸೀಸ್)
IPL 2024: ಪಂದ್ಯ ಗೆದ್ದ ತಕ್ಷಣವೇ ಪತ್ನಿ-ಮಗಳಿಗೆ ವಿಡಿಯೋ ಕಾಲ್ ಮಾಡಿದ ವಿರಾಟ್! ಆರ್ಸಿಬಿ ಫ್ಯಾನ್ಸ್ ದಿಲ್ ಖುಷ್
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ದಾಖಲೆ ಬರೆದ ವಿರಾಟ್ ಕೊಹ್ಲಿ
ಐಪಿಎಲ್ 2024: ಮುಂಬೈ ಇಂಡಿಯನ್ಸ್ ಸೇರಿಕೊಳ್ಳಲಿದ್ದಾರೆ ರಶೀದ್ ಖಾನ್! ಆಕಾಶ್ ಅಂಬಾನಿಯಿಂದ ಡೀಲ್ ಫಿಕ್ಸ್?