ವಿಜಯಪುರ: ನಗರದ ಪ್ರತಿಷ್ಠಿತ ಬಿಎಲ್ಡಿಇ ಆಸ್ಪತ್ರೆಗೆ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕರೊನಾ ಸೋಂಕಿತರಿಗೆ ಚಿಕಿತ್ಸೆ ಸೌಲಭ್ಯ, ವೆಂಟಿಲೇಟರ್ ಹಾಗೂ ಮಲ್ಟಿಫ್ಯಾರ್ ಮಾನಿಟರ್ಗಳ ಲಭ್ಯತೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಅವುಗಳನ್ನು ಸುಸ್ಥಿತಿಯಲ್ಲಿಡಲು ಜಿಲ್ಲಾಧಿಕಾರಿ ಸೂಚಿಸಿದರು.
ಆಕ್ಸಿಜನ್ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿ ಮತ್ತು ಆಕ್ಸಿಜನ್ ಕೊರತೆಯಿಂದ ಯಾವುದೇ ರೋಗಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಾವಿನ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ದಾಖಲಾಗಿ ಉಳಿದ ರೋಗಗಳ ರಕ್ತದ ಮಾದರಿಯನ್ನು ಕಲ್ಚರ್ ತಪಾಸಣೆಗೆ ಕಡ್ಡಾಯವಾಗಿ ಕಳುಹಿಸಲು ತಿಳಿಸಿದರು.
ಬೆಡ್ಗಳ ಲಭ್ಯತೆ ಹಾಗೂ ಅಲಭ್ಯತೆ ಬಗ್ಗೆ ತಂತ್ರಾಂಶದಲ್ಲಿ ಕಾಲಕಾಲಕ್ಕೆ ಮಾಹಿತಿ ನಮೂದಿಸಬೇಕು ಹಾಗೂ ಆಸ್ಪತ್ರೆ ಆವರಣದಲ್ಲಿ ಪ್ರದರ್ಶಿಸಬೇಕು. ಗಂಟಲು ದ್ರವ ಮಾದರಿಗಳನ್ನು ಆರ್ಟಿಪಿಸಿಆರ್ ತಪಾಸಣೆಗಾಗಿ ಸಂಗ್ರಹಿಸುವ ವೇಳೆಯಲ್ಲಿ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕಗಳನ್ನು ಕಡ್ಡಾಯವಾಗಿ ಐಸಿಎಂಆರ್ ಪೋರ್ಟಲ್ನಲ್ಲಿ ನಮೂದಿಸಲು ತಿಳಿಸಿದರು.
ಆರೋಗ್ಯ ಕರ್ನಾಟಕ ಯೋಜನೆ ಅಡಿ ದಾಖಲಾದ ಕೇಸ್ಗಳ ಬಗ್ಗೆ ವಿವರಣೆ ಕೇಳಿ, ಪ್ರತಿ ರೋಗಿಯಿಂದ ಚಿಕಿತ್ಸೆ ಕುರಿತಾಗಿ ಒಪ್ಪಿಗೆ ಪತ್ರ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ತಿಳಿಸಿದರು.
ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ (ಎಬಿಎಆರ್ಕೆ)ಯೋಜನೆ ಅಡಿಯಲ್ಲಿ ಅಥವಾ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಕುರಿತು ಪ್ರತಿರೋಗಿಯಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು. ಎಬಿಎಆರ್ಕೆ ಅಡಿಯಲ್ಲಿ ನೀಡುವ ಚಿಕಿತ್ಸೆಗಳ ವಿವರ ಫಲಕ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯಿಂದ ರೆಫರಲ್ ಕಾರ್ಡ್ನೊಂದಿಗೆ ಕಳುಹಿಸಿಕೊಡುವ ರೋಗಿಗಳನ್ನು ಕಡ್ಡಾಯವಾಗಿ ಎಬಿಎಆರ್ಕೆ ಯೋಜನೆಯಡಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಅವರು ಸೂಚಿಸಿದರು.
ಡಿಎಚ್ಒ ಡಾ. ಮಹೇಂದ್ರ ಕಾಪ್ಸೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿ, ಬಿಎಲ್ಡಿಇ ವೈದ್ಯಕೀಯ ಮಹಾವಿದ್ಯಾಲಯ ವೈದ್ಯಕೀಯ ವಿಭಾಗ ಮುಖ್ಯಸ್ಥರು ಡಾ. ಶರಣ ಬಡಿಗೇರ, ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ ಅನಸ್ತೇಶಿಯಾ ವಿಭಾಗ ಮುಖ್ಯಸ್ಥ ಡಾ. ರಾಜೇಂದ್ರಕುಮಾರ, ಡಾ. ಸಂತೋಷ ನೇಮಿಗೌಡ, ಪೀಟರ್ ಅಲೆಕ್ಸಾಂಡರ್ ಮತ್ತಿತರರಿದ್ದರು.