ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತಸಂಘಟನೆಗಳು ಇಂದು ನಡೆಸುತ್ತಿರುವ ಭಾರತ್ ಬಂದ್ನ ಬಿಸಿ ದೇಶದ ರಾಜಧಾನಿ ದೆಹಲಿಯ ಜನರಿಗೆ ಹೆಚ್ಚಾಗಿ ತಾಗುತ್ತಿದೆ. ಇಂದು ಬೆಳಿಗ್ಗೆಯಿಂದಲೇ ದೆಹಲಿಯ ಗಡಿಭಾಗಗಳಲ್ಲಿ ಭಾರೀ ಪ್ರಮಾಣದ ಟ್ರಾಫಿಕ್ ಜ್ಯಾಮ್ಗಳು ಏರ್ಪಟ್ಟಿರುವುದು ವರದಿಯಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆಯಡಿ 40 ರೈತ ಸಂಘಟನೆಗಳು ಒಟ್ಟಾಗಿ, ಇಂದು ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಬಂದ್ಗೆ ಕರೆ ನೀಡಿವೆ. ಸರ್ಕಾರಿ ಕಛೇರಿಗಳು, ಶಾಲೆ-ಕಾಲೇಜು, ವ್ಯಾಪಾರ-ವಹಿವಾಟುಗಳನ್ನು ನಡೆಸದಂತೆ ಆಗ್ರಹಿಸಿವೆ. ವಿವಾದಿತ ಕಾನೂನುಗಳನ್ನು ಅನುಷ್ಠಾನಗೊಳಿಸಿದರೆ, ಕೃಷಿ ಕ್ಷೇತ್ರವನ್ನು ಖಾಸಗಿ ಕಂಪೆನಿಗಳ ಹಿಡಿತಕ್ಕೆ ಒಳಗಾಗಲಿವೆ ಎಂಬುದು ಪ್ರತಿಭಟನಾಕಾರರ ವಾದವಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಬೀದಿಗಿಳಿದ ರೈತ ಸಂಘಟನೆಗಳು, ಎಲ್ಲೆಡೆ ಪೊಲೀಸ್ ಬಂದೋಬಸ್ತ್
ಇಂದು ಬೆಳಿಗ್ಗೆಯಿಂದಲೇ, ಮುಖ್ಯವಾಗಿ ರೈತರ ಪ್ರತಿಭಟನಾ ಧರಣಿ ನಡೆಯುತ್ತಿರುವ ಘಾಜಿಪುರ ಗಡಿ ಬಳಿಯ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇ ಬ್ಲಾಕ್ ಆಗಿತ್ತು. ಇದರಿಂದಾಗಿ ಉತ್ತರ ಪ್ರದೇಶದ ಕಡೆಯಿಂದ ಬರುವ ವಾಹನಗಳು ಸಿಕ್ಕಿಹಾಕಿಕೊಂಡಿದ್ದವು. ದೆಹಲಿಯ ಗುರ್ಗಾವ್ ಮತ್ತು ನಾಯ್ಡ ಗಡಿಗಳಲ್ಲಿಯೂ ಭಾರೀ ಜ್ಯಾಮ್ ಕಂಡುಬಂದಿದ್ದು, ವಾಹನಗಳ ಸಾಲು ರಸ್ತೆಗಳನ್ನು ಆವರಿಸಿವೆ. ಪಂಜಾಬ್ ಮತ್ತು ಹರಿಯಾಣದ ಕಡೆಗಿನ ಶಂಭು ಗಡಿ ಕೂಡ ಬ್ಲಾಕ್ ಆಗಿದೆ ಎನ್ನಲಾಗಿದೆ.
ಆದಾಗ್ಯೂ ನಗರದ ಒಳಗೆ ಆಟೋರಿಕ್ಷಾಗಳು, ಟ್ಯಾಕ್ಸಿಗಳು ಸಾಮಾನ್ಯದಂತೆಯೇ ಓಡುತ್ತಿವೆ ಮತ್ತು ವ್ಯಾಪಾರ ಮಳಿಗೆಗಳು ತೆರೆದಿವೆ. ಹಲವು ವ್ಯಾಪಾರಿ ಸಂಘಟನೆಗಳು ಬಂದ್ಗೆ ಕೇವಲ ಸೈದ್ಧಾಂತಿಕ ಬೆಂಬಲವನ್ನು ಮಾತ್ರ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು, ಮುನ್ನೆಚ್ಚರಿಕೆಯಾಗಿ ನಗರದ ಮತ್ತು ವಿವಿಧೆಡೆಯ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ಭಾರತ್ ಬಂದ್ಗೆ ಎಮ್ಮೆ-ಕತ್ತೆಗಳನ್ನ ಕರೆತಂದು ಪ್ರತಿಭಟನೆ
ಕೆಲವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಧರಣಿ ಸೇರಿದಂತೆ ಶಾಂತ ಪ್ರತಿಭಟನೆ ನಡೆಸುವುದಾಗಿ ರೈತಮುಖಂಡರು ಹೇಳಿದ್ದಾರೆ. ಪ್ರತಿಭಟನಾಕಾರರು ನಗರದೊಳಕ್ಕೆ ಪ್ರವೇಶಿಸದಂತೆ ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ದೆಹಲಿ ಪೊಲೀಸರೊಂದಿಗೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಾಮಿಲಿಟರಿ ಜವಾನ್ರನ್ನೂ ಗಡಿಗಳಲ್ಲಿ ನಿಯುಕ್ತಿಗೊಳಿಸಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)
ಲಸಿಕೆ ತಯಾರಿಕೆ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತಕ್ಕೆ ಬಿಲ್ ಗೇಟ್ಸ್ ಪ್ರಶಂಸೆ