ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ‘ಭಾರತ್ ಬಂದ್’ ಗೆ ರಾಜಧಾನಿ ಬೆಂಗಳೂರಿನಲ್ಲಿ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲವಾದರೂ ಕೆಲ ರೈತಪರ ಸಂಘಟನೆಗಳು ಟೌನ್ಹಾಲ್ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿವೆ. ದಿನದ ಚಟುವಟಿಕೆಗಳಿಗೆ ಯಾವುದೇ ಅಡೆ ತಡೆಯಾಗಿಲ್ಲ. ಬೆಂಗಳೂರಿನಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೆಜೆಸ್ಟಿಕ್ನಲ್ಲಿ ಕರವೇ ಕಾರ್ಯಕರ್ತರು ಬಸ್ಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಮೆಜೆಸ್ಟಿಕ್ನಲ್ಲಿ ಸಾರಾ ಗೋವಿಂದು ಅವರನ್ನು ಪೊಲೀಸರು ವಶಕ್ಕೆ ಪಡೆದಿದರು.
ಕೆ.ಆರ್. ಪುರಂ ಬಿಬಿಎಂಪಿ ಕಚೇರಿಯಿಂದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ಮೂಲಕ ಟೌನ್ಹಾಲ್ ಕಡೆ ಆಗಮಿಸುತ್ತಿದ್ದಾರೆ. ಪರಿಣಾಮ ಹಳೇ ಮದ್ರಾಸು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರತಿಭಟನೆ ಬಳಿಕ ಬೈಕ್ಗಳಲ್ಲಿ ಮೆರವಣಿಗೆ ನಡೆಯಲಿದೆ. ಶಿವಾಜಿನಗರದಲ್ಲಿ ಭಾರತ್ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ನಿಲ್ದಾಣದಲ್ಲಿ ಬಸ್ಗಳು ಓಡಾಡುತ್ತಿದ್ದು, ಪ್ರಯಾಣಿಕರು ಎಂದಿನಂತೆ ಸಂಚರಿಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶ ಕೊಡದೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬೆಂಗಳೂರಿನ ಗೊರಗುಂಟೆಪಾಳ್ಯ, ಕೆ.ಆರ್. ಪುರಂ ಸೇರಿ ವಿವಿಧೆಡೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಟೌನ್ ಹಾಲ್ಗೆ ಬಂದು ಸೇರಿದೆ. ವಿವಿಧ ಕನ್ನಡ ಪರ ಸಂಘಟನೆಗಳು ರೈತ ಸಂಘಟನೆಗಳಿಗೆ ಸಾಥ್ ನೀಡಿವೆ. ಟೌನ್ಹಾಲ್ ಮುಂದೆಯೇ ಮಲಗಿ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಟೌನ್ ಹಾಲ್ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಕೆ.ಜಿ. ರಸ್ತೆಯ ಸಂಚಾರ ಮಾರ್ಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಗೌಡ ನೇತೃತ್ವದಲ್ಲಿ ಐದಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರು ಗೊರಗುಂಟೆಪಾಳ್ಯದಲ್ಲಿ ಪ್ರತಿಭಟನೆ ನಡೆಸಿದರು. ಗೊರಗುಂಟೆಪಾಳ್ಯ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ಇರಲಿಲ್ಲ. ಹಾಗಾಗಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಗಡಿ ರಸ್ತೆಯ ಗೊಲ್ಲರಹಳ್ಳಿ ನೈಸ್ ರೋಡ್ ಜಂಕ್ಷನ್ನಲ್ಲಿ ಪ್ರತಿಭಟನೆ ಮಾಡಿದ ರೈತ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೊಸೂರು ರಸ್ತೆಯಿಂದ ಮಾಜಿ ಶಾಸಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಪೊಲೀಸರ ಭದ್ರತೆ: ನಗರದೆಲ್ಲೆಡೆ ಪೊಲೀಸರು ಬಬಂದೋಬಸ್ತ್ ಏರ್ಪಡಿಸಿದ್ದಾರೆ. ಟೌನ್ ಹಾಲ್ ಬಳಿ ಸಾವಿರಾರು ರೈತರು ಜಮಾವಣೆ ಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ನೇತೃತ್ವದಲ್ಲಿ 600 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. 8 ಎಸಿಪಿಗಳು ಹಾಗೂ 10 ಇನ್ಸ್ಪೆಕ್ಟರ್ ಸೇರಿ 600ಕ್ಕೂ ಹೆಚ್ಚು ಸಿಬ್ಬಂದಿ, ಜತೆಗೆ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ಪ್ರಿಯಕರನೊಂದಿಗೆ ಕಬ್ಬಾಳು ಬೆಟ್ಟದಿಂದ ಹಾರಿ ಪ್ರಾಣಬಿಟ್ಟ ವಿವಾಹಿತೆ! 4 ದಿನದ ಬಳಿಕ ಬೆಚ್ಚಿಬಿದ್ದ ಸ್ಥಳೀಯರು
ಟ್ಯೂಷನ್ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್!