ಬೆಂಗಳೂರು: ಗುಜರಿ ಹಾಗೂ ಕಳುವಾಗಿರುವ ಬಸ್ಸುಗಳ ಅಕ್ರಮ ನೋಂದಣಿ ಜಾಲದ ಕಿಂಗ್ಪಿನ್ ವೇಣುಗೋಪಾಲ ರೆಡ್ಡಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಈವರೆಗೆ ಆರ್ಟಿಒ ಏಜೆಂಟ್ಗಳು ಸೇರಿ ಐವರನ್ನು ಬಂಧಿಸಿದ್ದು, ದಂಧೆಯಲ್ಲಿ ಇನ್ನೂ ಕೆಲವು ಆರ್ಟಿಒ ಅಧಿಕಾರಿ, ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ಭಾಗಿಯಾಗಿರುವುದಕ್ಕೆ ಪ್ರಾಥಮಿಕ ಸಾಕ್ಷ್ಯ ದೊರೆತಿದೆ. ಇವರನ್ನು ಬಂಧಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಕಾಟಂನಲ್ಲೂರು ಬಳಿಯ ಎಸ್ಎಸ್ಪಿ ಮೋಟಾರ್ಸ್ ಮಾಲೀಕ ವೇಣುಗೋಪಾಲ ರೆಡ್ಡಿ, ಮ್ಯಾನೇಜರ್ ಚಿರಂಜೀವಿ, ಸೂಪರ್ವೈಸರ್ ಶ್ರೀನಿವಾಸ್, ಕೋಲಾರ ಆರ್ಟಿಒ ಕಚೇರಿ ಏಜೆಂಟ್ಗಳಾದ ರಾಜು ಹಾಗೂ ನವೀನ್ ಬಂಧಿತರು. ತಿರುಪತಿಯ ವೇಣುಗೋಪಾಲ ರೆಡ್ಡಿ ಪ್ರಮುಖ ಆರೋಪಿಯಾಗಿದ್ದು, ಎರಡೂವರೆ ವರ್ಷದಿಂದ ಅಕ್ರಮ ನೋಂದಣಿ ದಂಧೆ ನಡೆಸುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಾಗಾಲ್ಯಾಂಡ್ ಹಾಗೂ ಅರುಣಾಚಲ ಪ್ರದೇಶ ಆರ್ಟಿಒ ಕಚೇರಿಯಿಂದ ವಾಹನ ವರ್ಗಾವಣೆಗೆ ವಿತರಣೆಯಾಗಿರುವ ನಕಲಿ ನಿರಾಕ್ಷೇಪಣಾ ಪತ್ರಗಳನ್ನು (ಎನ್ಒಸಿ) ಆಧರಿಸಿ ಕೋಲಾರ ಆರ್ಟಿಒ ಕಚೇರಿಯಲ್ಲಿ ಬಸ್ಗಳನ್ನು ಅಕ್ರಮವಾಗಿ ನೋಂದಣಿ ಮಾಡಿಸಿ, ಶಾಲಾ-ಕಾಲೇಜುಗಳಿಗೆ ಅದೇ ಬಸ್ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಬೆಂಗಳೂರು ಹಾಗೂ ಕೋಲಾರ ಆರ್ಟಿಒ ಕಚೇರಿಯಲ್ಲೇ 250ಕ್ಕೂ ಅಧಿಕ ಬಸ್ಗಳನ್ನು ನೋಂದಣಿ ಮಾಡಿಸಿ, ಮಾರಾಟ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಹೊಸಕೋಟೆ ಕಾಟಂನಲ್ಲೂರು ಗ್ರಾಮದ ಸರ್ವೆ ನಂ.3ರಲ್ಲಿ ತಿರುಪತಿಯ ವೇಣುಗೋಪಾಲ ರೆಡ್ಡಿ ಎಸ್ಎಸ್ಪಿ ಗ್ಯಾರೇಜ್ ಇಟ್ಟುಕೊಂಡಿದ್ದು, ಹಳೆಯ ಲೇಲ್ಯಾಂಡ್ ಕಂಪನಿಯ ಚಾಸ್ಸಿಗಳನ್ನು ತಂದು ಯಾವುದೇ ಅನುಮತಿ ಇಲ್ಲದೆ ಬಸ್ಗಳ ವಿನ್ಯಾಸ ಮಾಡಿಸುತ್ತಿದ್ದ. ಅರುಣಾಚಲ ಪ್ರದೇಶದ ಆರ್ಟಿಒ ಕಚೇರಿಯಲ್ಲಿ 2-3 ವರ್ಷಗಳ ಹಿಂದೆ ನೋಂದಣಿ ಮಾಡಿಸಿದಂತೆ ದಾಖಲೆ ಸೃಷ್ಟಿಸುತ್ತಿದ್ದ. ಬಳಿಕ ಕೋಲಾರ ಆರ್ಟಿಒ ಕಚೇರಿಯಿಂದ ಎನ್ಒಸಿ ಪಡೆದುಕೊಳ್ಳಲಾಗಿದ್ದು, ಅಗತ್ಯ ದಾಖಲಾತಿ ಸೃಷ್ಟಿಸಿಕೊಂಡು ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿರುವ ಎಸ್ಸಿಟಿ ಡಿಗ್ರಿ ಕಾಲೇಜು ಹಾಗೂ ಇತರ ಶಾಲಾ-ಕಾಲೇಜುಗಳ ಹೆಸರಿನಲ್ಲಿ ಕಡಿಮೆ ತೆರಿಗೆ ಪಾವತಿಸಿ ನೋಂದಣಿ ಮಾಡಿಸಿದ್ದಾನೆ. ಈ ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಏಜೆಂಟ್ ನವೀನ್, ವೇಣುಗೋಪಾಲ ರೆಡ್ಡಿ ಜತೆ ಸಂಪರ್ಕದಲ್ಲಿರುತ್ತಿದ್ದ. ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿಕೊಂಡು ಆರ್ಟಿಒ ಕಚೇರಿಗೆ ತಲುಪಿಸುತ್ತಿದ್ದ. ನೋಂದಣಿಗೂ ಮುನ್ನ ಮಾತನಾಡಿಕೊಂಡಂತೆ ವೇಣುಗೋಪಾಲ ರೆಡ್ಡಿ, ನವೀನ್ಗೆ ಹಣ ತಲುಪಿಸುತ್ತಿದ್ದ ಎಂದು ಗೊತ್ತಾಗಿದೆ. ವೇಣುಗೋಪಾಲರೆಡ್ಡಿಯಿಂದ ಹಣ ಪಡೆದ ನಂತರ ನವೀನ್, ಉಳಿದವರಿಗೆ ಪಾಲು ಕೊಡುತ್ತಿದ್ದ ಎನ್ನಲಾಗಿದೆ.
ಗೂಡ್ಸ್ ವಾಹನ ನೋಂದಣಿಗೂ ಸೈ
ಪೊಲೀಸರೀಗ ಬರೀ ಶಾಲಾ-ಕಾಲೇಜುಗಳ ಹೆಸರಲ್ಲಿ ನೋಂದಣಿಯಾಗಿರುವ ಬಸ್ಗಳ ದಾಖಲಾತಿ ಮಾತ್ರ ಪರಿಶೀಲನೆ ನಡೆಸಿದ್ದಾರೆ. ಆದರೆ, ಬಸ್ಗಳ ಜತೆಗೆ 6 ತಿಂಗಳಲ್ಲಿ 750ಕ್ಕೂ ಹೆಚ್ಚು ಗೂಡ್ಸ್ ವಾಹನಗಳು ಅಕ್ರಮವಾಗಿ ನೋಂದಣಿಯಾಗಿರುವುದಕ್ಕೆ ದಾಖಲಾತಿಗಳಿವೆ. ಈ ಬಗ್ಗೆಯೂ ಪೊಲೀಸರು, ತನಿಖೆ ವ್ಯಾಪ್ತಿ ವಿಸ್ತರಿಸಿದರೆ ನೋಂದಣಿ ಅಕ್ರಮದ ಜಾಲ ಇನ್ನಷ್ಟು ಬಿಚ್ಚಿಕೊಳ್ಳುತ್ತದೆ ಎಂದು ಅಧಿಕಾರಿಗಳೇ ಮಾಹಿತಿ ನೀಡುತ್ತಾರೆ. ಪರ್ವಿುಟ್ ಇಲ್ಲದಿದ್ದರೂ ಒಂದೇ ದಿನದಲ್ಲಿ ಕೋಲಾರ ಆರ್ಟಿಒದಿಂದ ರಾಜ್ಯ ಹಾಗೂ ಹೊರರಾಜ್ಯಗಳ ಆರ್ಟಿಒಗೆ ಸಿಸಿ ಕೊಡಲಾಗಿದೆ.
ವಾಹನಗಳ ಅಕ್ರಮ ನೋಂದಣಿ ಜಾಲದ ಪ್ರಮುಖ ಆರೋಪಿ ವೇಣುಗೋಪಾಲ ರೆಡ್ಡಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿಸಿದಂತೆ ಇದೊಂದು ಬೃಹತ್ ಜಾಲ ಎಂಬ ವಿಚಾರ ತಿಳಿಯುತ್ತಿದೆ. ದಂಧೆಯಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಮಾಹಿತಿ ಸಿಕ್ಕಿದ್ದು, ಆದಷ್ಟು ಬೇಗ ಎಲ್ಲರನ್ನು ಬಂಧಿಸಲಾಗುತ್ತದೆ.
| ಶಂಕರಗೌಡ ಎ.ಪಾಟೀಲ್, ಹೊಸಕೋಟೆ ಉಪ ವಿಭಾಗದ ಡಿವೈಎಸ್ಪಿ
ಬಾಡಿಗೆ ಮನೆ ಕರಾರು ಪತ್ರ ನಕಲಿ!: ಸ್ಥಳೀಯವಾಗಿ ಬಾಡಿಗೆ ಮನೆಯಲ್ಲಿ ವಾಸವಿರುವಂತೆ ನಕಲಿ ಕರಾರು ಪತ್ರ ಸೃಷ್ಟಿಸಿ, ಹೊರ ರಾಜ್ಯಗಳಿಂದ ವಾಹನ ವರ್ಗಾವಣೆ ಮಾಡಲಾಗಿದೆ. ಒಂದೇ ದಿನದಲ್ಲಿ ರೀ ನಂಬರ್ ಕೊಟ್ಟು, ಮಾರನೆ ದಿನವೇ ರಾಜ್ಯದ ಬೇರೆಬೇರೆ ಆರ್ಟಿಒಗಳಿಗಲ್ಲದೆ ಮಣಿಪುರ, ಹರಿಯಾಣ, ಅರುಣಾಚಲಪ್ರದೇಶ ಇನ್ನಿತರ ರಾಜ್ಯಗಳಿಗೆ ಸಿಸಿ ಕೊಡಲಾಗಿದೆ.
ಏಜೆಂಟ್ಗಳ ಮನೆಯಲ್ಲಿ ಕಡತಗಳು?: ಸಾರಿಗೆ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸರು ಪರಿಶೀಲನೆಗೆ ಬಂದರೆ ಸಿಕ್ಕಿಬೀಳುವ ಭಯದಲ್ಲಿ ಅಕ್ರಮ ನೋಂದಣಿಗೆ ಸಂಬಂಧಿಸಿದ ದಾಖಲಾತಿಗಳನ್ನು ಆರ್ಟಿಒ ಕಚೇರಿಯಿಂದ ಸ್ಥಳಾಂತರಿಸಲಾಗಿದೆ ಎಂದು ಗೊತ್ತಾಗಿದೆ. ಕೆಲ ಏಜೆಂಟ್ಗಳ ಮನೆಗಳಲ್ಲಿ ವಾಹನ ನೋಂದಣಿ ಫೈಲ್ಗಳನ್ನು ಇಟ್ಟಿರುವ ಮಾಹಿತಿ ಸಿಕ್ಕಿದೆ.
ಸ್ಕ್ವಾಡ್ನಿಂದ ಕಡತಗಳ ಪರಿಶೀಲನೆ: ಇದೇ ಪ್ರಕರಣದ ವಿಚಾರಣೆಗಾಗಿ ಸಾರಿಗೆ ಇಲಾಖೆಯಿಂದಲೂ ಪ್ರತ್ಯೇಕ ತಂಡ ರಚಿಸಲಾಗಿದೆ. ಜಂಟಿ ಆಯುಕ್ತರಾದ ಗಾಯತ್ರಿದೇವಿ, ಎಆರ್ಟಿಒಗಳಾದ ನಯಾಜ್ ಪಾಷಾ ಹಾಗೂ ಉಮೇಶ್ ತಂಡದಲ್ಲಿದ್ದಾರೆ. ಸೋಮವಾರ ಕೋಲಾರ ಆರ್ಟಿಒ ಕಚೇರಿಗೆ ಭೇಟಿ ಕೊಟ್ಟಿದ್ದ ತಂಡ ಕೆಲ ಮಾಹಿತಿ ಪಡೆದಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಯ ವರ್ಗಾವಣೆಗೂ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ದಂಧೆ ಬಯಲಿಗೆಳೆದ ವಿಜಯವಾಣಿ: ಬಸ್ಗಳ ಅಕ್ರಮ ನೋಂದಣಿ ಮಾಡಿರುವ ಕುರಿತು ‘ಕದ್ದ ವಾಹನಕ್ಕೂ ನೋಂದಣಿ!’ ಶೀರ್ಷಿಕೆಯಡಿ ಜೂ.30ರಂದು ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ನ್ಯಾಯಾಲಯದ ಮೊರೆ ಹೋಗಿದ್ದೇಕೆ ಎಂದು ಕಾರಣ ಕೊಟ್ಟ ಕಿಚ್ಚ; ನ್ಯಾಯಾಲಯದಲ್ಲೇ ಬಗೆಹರಿಯಲು ಬಿಡಿ ಎಂದು ಸುದೀಪ್ ಪತ್ರ