ಬೆಂಗಳೂರು: ನಟ-ನಿರ್ದೇಶಕ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂ.ಎನ್. ಕುಮಾರ್ ನಡುವಿನ ಸಂಘರ್ಷದ ವಿಚಾರ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಅಷ್ಟಕ್ಕೂ ತಾವು ನ್ಯಾಯಾಲಯದ ಮೊರೆ ಹೋಗಿದ್ದೇಕೆ ಎಂಬ ಬಗ್ಗೆ ಕಿಚ್ಚ ಸುದೀಪ್ ಈಗ ಕಾರಣ ತಿಳಿಸಿದ್ದಲ್ಲದೆ, ಈ ಪ್ರಕರಣ ನ್ಯಾಯಾಲಯದಲ್ಲೇ ಬಗೆಹರಿಯಲು ಬಿಡಿ ಎಂದು ಪತ್ರಮುಖೇನ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಅವರು ಯಾವುದೇ ಸಂಧಾನಕ್ಕೂ ಬರಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕರ್ನಾಟಕ ನಿರ್ಮಾಪಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಉದ್ದೇಶಿಸಿ ಸುದೀರ್ಘ ಪತ್ರ ಬರೆದಿರುವ ಸುದೀಪ್, ಪ್ರಕರಣ ಕುರಿತ ಹಲವು ವಿಚಾರಗಳನ್ನು ತಿಳಿಸುವ ಜತೆಗೆ ನ್ಯಾಯಾಲಯದ ಮೆಟ್ಟಿಲೇರಿದ್ದಕ್ಕೆ ಕಾರಣವನ್ನೂ ನೀಡಿದ್ದಾರೆ.
ತಮ್ಮ ಪ್ರಕರಣವನ್ನು ದಾಂಪತ್ಯ ಕಲಹಕ್ಕೆ ಹೋಲಿಸಿ ಉದಾಹರಣೆ ನೀಡಿರುವ ಅವರು, ದಾಂಪತ್ಯದಲ್ಲಿ ಬಿರುಕು ಬಂದರೆ ಆ ಕುಟುಂಬದ ಸ್ನೇಹಿತರು ಯಾರ ಪರವಾಗಿ ನಿಲ್ಲಬೇಕೆಂದು ಸಂಕಟ ಪಡುತ್ತಾರೆ. ಆ ಸಂದಿಗ್ಧತೆಯಲ್ಲಿ ಒಬ್ಬರ ಪರ ನಿಲ್ಲುವುದು ಸಮಂಜಸವೂ ಆಗಿರುವುದಿಲ್ಲ. ಅಂಥದ್ದೇ ಒತ್ತಡ, ಸಂದಿಗ್ಧತೆ ಈಗ ನಮ್ಮ ಮಾತೃಸಂಸ್ಥೆಗಳದ್ದಾಗಿದ್ದು, ಆ ಒತ್ತಡ ಸಂಕಷ್ಟಕ್ಕೆ ನೀವು ಸಿಲುಕಬಾರದೆಂದೇ ನಾನು ನ್ಯಾಯಾಲಯದ ಮೊರೆ ಹೋಗಿದ್ದು ಎಂದು ಸುದೀಪ್ ಕಾರಣ ತಿಳಿಸಿದ್ದಾರೆ.
ಇದನ್ನೂ ಓದಿ: ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!
ದಯಮಾಡಿ ತಾವು ಸಂದಿಗ್ಧತೆಗೆ ಒಳಗಾಗದೆ, ನನ್ನ ಮೇಲೂ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರೆ ನ್ಯಾಯಾಲಯದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ. ನಾನು ಸರಿ ಇದ್ದೇನೆ, ನ್ಯಾಯ ಮತ್ತು ಸತ್ಯ ನನ್ನೊಂದಿಗಿದೆ ಎಂದು ಸಾಬೀತು ಮಾಡಿಕೊಳ್ಳಲು ನಂಗೊಂದಿಷ್ಟು ಅವಕಾಶ ಕೊಡಿ ಎಂದು ಪ್ರೀತಿಯಿಂದ ಕೇಳುತ್ತಿದ್ದೇನೆ ಎಂದಿರುವ ಸುದೀಪ್, ಈ ಪ್ರಕರಣವನ್ನು ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.