ಲಖನೌ: ಪೊಲೀಸರು ಅನೇಕ ಸಂದರ್ಭದಲ್ಲಿ ಕಠಿಣವಾಗಿ ವರ್ತಿಸುತ್ತಾರೆ. ಅದು ಅವರ ವೃತ್ತಿಧರ್ಮ ಕೂಡ ಹೌದು. ಆದರೆ ಅದೆಷ್ಟೋ ಸಲ ಅವರೊಳಗಿನ ಮೃದುತ್ವವನ್ನು, ಒಳ್ಳೆಯತನವನ್ನೂ ತೋರುತ್ತಾರೆ. ಖಾಖಿಯೆಂದರೆ ಬರೀ ಕಠಿಣವಲ್ಲ…ಅದರಲ್ಲೂ ಮನುಷ್ಯತ್ವ ಅಡಗಿದೆ ಎಂಬುದನ್ನು ಸಾಬೀತು ಮಾಡುತ್ತಾರೆ.
ಈಗ ಇಂಥದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಸಂತ ಕಬೀರ್ ನಗರದ ಪೊಲೀಸರು ಪ್ರೀತಿಸಿದ ಜೋಡಿಗೆ ಮದುವೆ ಮಾಡಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ಸ್ವತಃ ಕನ್ಯಾದಾನ ಮಾಡಿ, ಧಾರೆ ಎರೆದುಕೊಟ್ಟಿದ್ದಾರೆ.
ಸಾಧನಾ ಕೇವತ್ (19) ಮತ್ತು ಸರ್ವೇಶ್ ಕನೌಜಿಯಾ (20) ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಇವರಿಬ್ಬರನ್ನೂ ಒಟ್ಟಿಗೇ ನೋಡಿದ ಹುಡುಗಿಯ ಕುಟುಂಬದವರು ಪೌಲಿ ಪೊಲೀಸರಿಗೆ ಹುಡುಗನ ವಿರುದ್ಧ ದೂರು ನೀಡಿದ್ದರು. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದವನಿಗೆ ಕಪಾಳಮೋಕ್ಷ, ಬಂಧನ
ದೂರಿನ ಅನ್ವಯ ಪೊಲೀಸರು ಸರ್ವೇಶ್ಗೆ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು. ಸರ್ವೇಶ್ ವಿಚಾರಣೆ ವೇಳೆ ಎಲ್ಲವನ್ನೂ ಹೇಳಿಕೊಂಡ. ತಾನು ಸಾಧನಾಳನ್ನು ಪ್ರೀತಿಸುತ್ತಿದ್ದೇನೆ. ಅವಳನ್ನೇ ಮದುವೆಯಾಗುತ್ತೇನೆ ಎಂದೂ ಹೇಳಿಕೊಂಡ. ಅದನ್ನು ಕೇಳಿದ ಪೊಲೀಸರು ಸಾಧನಾಳ ಹೇಳಿಕೆಯನ್ನೂ ಪಡೆದುಕೊಂಡರು. ಅವಳೂ ಕೂಡ ತಾನು ಸರ್ವೇಶ್ನನ್ನು ವಿವಾಹವಾಗಲು ಸಿದ್ಧನಿದ್ದೇನೆ ಎಂದು ಹೇಳಿದಳು.
ಬಳಿಕ ಪೊಲೀಸರು ಎರಡೂ ಕುಟುಂಬದವರನ್ನು ಕರೆಸಿ ಮಾತನಾಡಿದರು. ಮದುವೆಯನ್ನು ಒಪ್ಪಿಕೊಳ್ಳುವಂತೆ ಮಾಡಿದರು. ಶಿವನ ದೇವಸ್ಥಾನದಲ್ಲಿ ಸಾಧನಾ-ಸರ್ವೇಶ್ ವಿವಾಹವಾದರು. ಇದನ್ನೂ ಓದಿ: ಮಗ ತಾಯಿಯನ್ನೇ ಮದುವೆಯಾದನಾ?: ವೈರಲ್ ಸ್ಟೋರಿ ಹಿಂದಿನ ಅಸಲಿಯತ್ತೇ ಬೇರೆ ಇದೆ!
ಸಾಧನಾಳ ಅಮ್ಮಂಗೆ ಕಣ್ಣುಕಾಣುವುದಿಲ್ಲ. ಅಪ್ಪ ಮೃತಪಟ್ಟಿದ್ದಾರೆ. ಸೋದರನೂ ಇಲ್ಲ. ಹೀಗಿರುವಾಗ ಕನ್ಯಾದಾನ ಮಾಡುವವರು ಯಾರು ಎಂಬ ಪ್ರಶ್ನೆ ಬಂದಾಗ, ಸಬ್ ಇನ್ಸ್ಪೆಕ್ಟರ್ ವಿವೇಕಾನಂದ ತಿವಾರಿ ಹಿಂದೆ ಮುಂದೆ ಯೋಚಿಸದೆ ಅದಕ್ಕೆ ಸಿದ್ಧರಾದರು.
ಇವರಿಬ್ಬರೂ ಪೌಲಿ ಗ್ರಾಮದವರು. ಒಟ್ಟಿಗೆ ಓದಿದ್ದಾರೆ. ಈಗಲೂ ಸಾಧನಾಳ ಮನೆಯಲ್ಲಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಸರ್ವೇಶ್ ತಂದೆ ಇನ್ನೂ ಪೂರ್ತಿ ಒಪ್ಪಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಬಾಡಿಗೆ ಗಂಡನಿಂದಾಗಿ ಗಲ್ಲುಶಿಕ್ಷೆಗೆ ಗುರಿಯಾದ ನರ್ಸ್ ಒಬ್ಬಳ ಕಣ್ಣೀರ ಕಥೆಯಿದು…