ಬೆಂಗಳೂರು: 2023-24 ನೇ ಸಾಲಿನ ಬಜೆಟ್ ಮಂಡಿಸುವ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟೀಕೆಗಳನ್ನು ಮಾಡಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಯಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭಾಷಣ ಮಾಡುವ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರ ಕಾಲೆಳೆದಿದ್ದು, ಸದನ ಕೆಲಕಾಲ ನಗೆಗಡಲಲ್ಲಿ ತೇಲಿತ್ತು.
ಬೆಜಟ್ ಮೇಲಿನ ಚರ್ಚೆಯ ವೇಳೆ ಶಾಸಕ ವೇದವ್ಯಾಸ ಕಾಮತ್ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಿದ್ದರು. ಈ ವೇಳೆ ಇದಕ್ಕೆ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಖುಷಿ ಆಗುವ ವಿಷಯ ಹೇಳಿ ಮಾರಾಯಾ, ಬೇಸರ ಆಗುವ ವಿಷಯ ಹೇಳಬೇಡಿ ಎಂದು ಶಾಸಕ ವೇದವ್ಯಾಸ ಅವರ ಕಾಲೆಳೆದಿದ್ದಾರೆ.
ಒಂದು ಪೇಜ್ ಗೆ ಹೀಗೆ ಆದರೆ ನನಗೆ ಇಲ್ಲಿ 38 ಪೇಜ್ ಇದೆ. ಇದೆಲ್ಲಾ ಒಟ್ಟಿಗೆ ಹೇಳಿದರೆ ಏನು ಕಥ ಎಂದು ಹೇಳಿದ್ದರು. ನಿಮ್ಮ 38 ಪೇಜ್ ಅವರು ಕೇಳಲು ನಾನು ಬ್ಯಾಂಕ್ವೆಟ್ ಹಾಲ್ ನಲ್ಲಿ ಮೀಟಿಂಗ್ ಇಟ್ಟುಕೊಳ್ಳುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವೇದವ್ಯಾಸ ಕಾಮತ್ ನಾನು ಸವಾಲು ಸ್ವೀಕರಿಸುತ್ತೇನೇ, ಅಂಕಿ ಅಂಶ ಸುಳ್ಳು ಆದರೆ ನೀವು ಆಕ್ಷನ್ ತೆಗೆದುಕೊಳ್ಳಿ ಎಂದರು.
ರೇವಣ್ಣ ಟಾಂಗ್
ಸದನದಲ್ಲಿ ಇಲ್ಲದವರ ಬಗ್ಗೆ ಮಾತನಾಡದಂತೆ ಆಡಳಿತ ಪಕ್ಷದಿಂದ ಆಕ್ಷೇಪ. ಸದನದಲ್ಲಿ ಇಲ್ಲದವರ ಬಗ್ಗೆಯೂ ಮಾತನಾಡಬಹುದು, ಬೇಕಾದರೆ ಕಡತ ತೆಗೆಸಿ ನೋಡಿ, ಹಿಂದೆಯೂ ಮಾತನಾಡಿದ್ದಾರೆ ಎಂದು ಮಧ್ಯಪ್ರವೇಶಿಸಿದ ಶಾಸಕ ರೇವಣ್ಣ. ಆಗ ನೀವು ವಿಲೀನ ಆಗಿದ್ದೀರಾ ಎಂದು ಮಾಲೂರು ಶಾಸಕ ನಂಜೇಗೌಡ ರೇವಣ್ಣರನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ ನಾವು ವಿಲೀನ ಆಗಿಲ್ಲ, ನಾವು ಯಾಕೆ ವಿಲೀನ ಆಗೋಣ, ಹಿಂದೆ ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಜೈಲಿಗೆ ಹೋಗಿದ್ದು ಗೊತ್ತಿಲ್ವಾ ಎಂದು ಕಾಂಗ್ರೆಸ್ ಶಾಸಕರ ಕಾಲೆಳೆದರು.
ಇದನ್ನೂ ಓದಿ: ಇಂಡಿಯಾ ಗೆಲ್ಲುತ್ತದೆ ಬಿಜೆಪಿ ಸೋಲುತ್ತದೆ: ಮಮತಾ ಬ್ಯಾನರ್ಜಿ
ಲಘು ಆಕ್ಷೇಪ
ಮಾತು ಮುಂದುವರಿಸಿದ ಕಾಮತ್ ಅವರು ಸಾವರ್ಕರ್ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ, ಸಾವರ್ಕರ್ ಬ್ರಿಟೀಷರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ನೀವು ಸುಳ್ಳು ಹೇಳಬೇಡಿ ಎಂದು ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹೇಳಿದರು. ಕೊನೆಗೆ ವೇದವ್ಯಾಸ ಕಾಮತ್ ಚರ್ಚೆ ಮುಗಿಸದಿದ್ದಾಗ ರಾಯಚೂರು ಗ್ರಾಮೀಣ ಶಾಸಕ ಬಸವರಾಜ ದದ್ದಲ್ಗೆ ಚರ್ಚೆ ಮುಂದುವರಿಸುವಂತೆ ಸ್ಪೀಕರ್ ಸೂಚಿಸಿದರು.
ಈ ವೇಳೆ ಬಸವರಾಜ ದದ್ದಲ್ ಮತ್ತು ವೇದವ್ಯಾಸ ಕಾಮತ್ ಅವರು ಏಕಕಾಲದಲ್ಲಿ ಚರ್ಚೆಯಲ್ಲಿ ತೊಡಗಿದರು. ಹೀಗಾಗಿ ಕಾಮತ್ ಮೇಲೆ ಸಿಟ್ಟಾದ ಸ್ಪೀಕರ್, ನೀವು ಇಷ್ಟು ಸ್ವಾರ್ಥಿ ಆದರೆ ಹೇಗೆ, ಬೇರೆಯವರೂ ಮಾತಾಡುವುದು ಬೇಡವೇ ಎಂದರು. ನಂತರ ವೇದವ್ಯಾಸ ಕಾಮತ್ ಚರ್ಚೆ ಮುಗಿಸಿದರು. ಬಳಿಕ ಚರ್ಚೆ ಆರಂಭಿಸಿದ ಶಾಸಕ ಬಸವರಾಜ ದದ್ದಲ್, ನೀವು ಕರಾವಳಿಯವರು ಅಂತಾ ಪ್ರೀತಿಯಿಂದ ಅವರಿಗೆ ಜಾಸ್ತಿ ಸಮಯ ಕೊಟ್ಟಿದ್ದೀರಿ ಎಂದು ಲಘು ಆಕ್ಷೇಪ