ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆ ಬಿರುಸಾಗಿದೆ. ಮಂಗಳವಾರವೂ ಬೆಳಗಾವಿಯ ಕಣಬರ್ಗಿ, ಚಿಕ್ಕಮಗಳೂರಿನ ಮೂಡಿಗೆರೆ, ಹಾವೇರಿಯ ಹನುಮಾನ್ಮಟ್ಟಿ, ಕೊಡಗಿನ ಗೋಣಿಕೊಪ್ಪ, ಬಾಗಲಕೋಟೆ ಮತ್ತು ಯಾದಗಿರಿ ಸೇರಿ ಹಲವು ಭಾಗಗಳಲ್ಲಿ ವರ್ಷಧಾರೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್ನಲ್ಲಿ ಜುಲೈ 19 ಹಾಗೂ 20ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ಷಿ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಜಯಲೈ 21ರಿಂದ ಮುಂದಿನ ಮೂರು ದಿನ ಹಾಗೂ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿಯಲ್ಲಿ ಮುಂದಿನ ನಾಲ್ಕು ದಿನ ಯೆಲ್ಲೋ ಅಲರ್ಟ್ ಇರಲಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಇಂದು ಎನ್ಡಿಎ ಮೈತ್ರಿಕೂಟದ ಸಭೆ; 38 ಪಕ್ಷಗಳು ಭಾಗಿ
ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಗದಗ, ಹಾವೇರಿ, ಧಾರವಾಡ, ರಾಯಚೂರು, ಯಾದಗಿರಿ, ಕೊಪ್ಪಳದಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಶೇ.34 ಮಳೆ ಕುಂಠಿತ
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ಒಂದು ಮುಕ್ಕಾಲು ತಿಂಗಳು ಸಮೀಪಿಸುತ್ತಿದ್ದರೂ 21 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ.ಜೂ 1ರಿಂದ ಜು.18ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 356 ಮಿಮೀ ಮಳೆ ಆಗಬೇಕಿತ್ತು. ಆದರೆ, 234 ಮಳೆ ಸುರಿದಿದ್ದು, ಶೇ.34 ಅಭಾವ ಉಂಟಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.13, ಉತ್ತರ ಒಳನಾಡಿನಲ್ಲಿ ಶೇ.36, ಮಲೆನಾಡಲ್ಲಿ ಶೇ.54 ಹಾಗೂ ಕರಾವಳಿಯಲ್ಲಿ ಶೇ.25 ಮಳೆ ಅಭಾವ ಉಂಟಾಗಿದೆ.