ಗುವಾಹಟಿ: ಬಿಜೆಪಿ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ದೇಶದ ಸಂವಿಧಾನವನ್ನು ಬದಲಾಯಿಸಲು ಹಾಗೂ ಮೀಸಲಾತಿಯನ್ನು ಕೊನೆಗೊಳಿಸಲು ಪ್ರಯತ್ನಿಸಲಿದೆ ಎಂದು ಕಾಂಗ್ರೆಸ್ ಸುಳ್ಳಿನ ಕಂತೆ ಹರಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ ಆರೋಪಿಸಿದ್ದಾರೆ.
‘ನಾವು ಮತದಾರರನ್ನು ಅಲ್ಪಸಂಖ್ಯಾತರು ಅಥವಾ ಬಹುಸಂಖ್ಯಾತರೆಂದು ನೋಡುವುದಿಲ್ಲ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ ಷಾ, ಅಸ್ಸಾಂನ 14 ಲೋಕಸಭೆ ಸ್ಥಾನಗಳ ಪೈಕಿ ಬಿಜೆಪಿ 12ರಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ ಬಿಜೆಪಿ ಬೆಂಬಲವಿದೆ. ಅವರ ಹಕ್ಕುಗಳನ್ನು ರಕ್ಷಿಸುವಲ್ಲಿ ಸಕ್ರಿಯ ಪಾತ್ರ ವಹಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅನೇಕ ಸಾರ್ವಜನಿಕ ಭಾಷಣ ಗಳಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಷಾ ಹೇಳಿದರು. ಕಾಂಗ್ರೆಸ್ ಅವಿಭಜಿತ ಆಂಧ್ರಪ್ರದೇಶದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಹಕ್ಕುಗಳನ್ನು ವಂಚಿಸಿದೆ ಎಂದು ಷಾ ಆಪಾದಿಸಿದರು.
ಕಾಂಗ್ರೆಸ್ಗೆ ಹತಾಶೆ: ಷಾ ಅವರ ಒಂದು ಫೇಕ್ ವಿಡಿಯೋವನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಅಸ್ಸಾಂನ ಕಾಂಗ್ರೆಸ್ ಕಾರ್ಯಕರ್ತನೊಬ್ಬ ನನ್ನು ಬಂಧಿಸಲಾದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಷಾ, ಅದು ಕಾಂಗ್ರೆಸ್ನ ಹತಾಶೆ ಹಾಗೂ ನಿರಾಶೆ ಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ರಾಹುಲ್ ನಾಯಕತ್ವಕ್ಕೆ ತರಾಟೆ: ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಾಗಿನಿಂದ ಆ ಪಕ್ಷದ ರಾಜಕಾರಣದ ಮಟ್ಟ ಕುಸಿಯುತ್ತಿದೆ.ಗೊಂದಲ ಹುಟ್ಟಿಸಿ ಜನರನ್ನು ತಪು್ಪ ದಾರಿಗೆಳೆಯುವ ಅದರ ಪ್ರಯತ್ನ ಖಂಡನೀಯ ಎಂದು ಷಾ ಹೇಳಿದರು.
ಗುಜರಾತ್ನಲ್ಲಿ ಇಬ್ಬರ ಸೆರೆ?: ಗೃಹ ಸಚಿವ ಅಮಿತ್ ಷಾ ಅವರ ಡೀಪ್ಫೇಕ್ ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿಯ ಒಬ್ಬ ಆಪ್ತ ಸಿಬ್ಬಂದಿ ಹಾಗೂ ಆಪ್ನ ಒಬ್ಬ ಕಾರ್ಯಕರ್ತನನ್ನು ಬಂಧಿಸಿರುವುದಾಗಿ ಗುಜರಾತ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬಂಧಿತರನ್ನು ಸತೀಶ್ ವನ್ಸೋಲಾ ಮತ್ತು ರಾಕೇಶ್ ಬರಿಯಾ ಎಂದು ಗುರುತಿಸಲಾಗಿದೆ. ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಮೀಸಲಾತಿ ಹಕ್ಕನ್ನು ದಮನಿಸುವುದಾಗಿ ಷಾ ಪ್ರಕಟಿಸುತ್ತಿರುವ ರೀತಿಯ ವಿಡಿಯೋ ಹಂಚಿಕೊಂಡಿದ್ದ ಆರೋಪದ ಮೇಲೆ ಸೈಬರ್ ಕ್ರೖೆಂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮಮತಾಗೆ ಮತಬ್ಯಾಂಕ್ ಭಯ: ನುಸುಳುಕೋರರ ಮತ ಬ್ಯಾಂಕ್ಗೆ ಹಾನಿ ಆಗುವುದೆಂಬ ಭೀತಿಯಿಂದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂದು ಅಮಿತ್ ಷಾ ಆರೋಪಿಸಿದ್ದಾರೆ. ಬಂಗಾಳದ ಪೂರ್ವ ಬರ್ಧಮಾನ್ ಜಿಲ್ಲೆಯ ಮೆಮಾರಿಯಲ್ಲಿ ಬಿಜೆಪಿ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಷಾ, ದೇಶದಲ್ಲಿ ‘ಪರಿವಾರ ರಾಜ್’ ಬೇಕೋ ಅಥವಾ ‘ರಾಮ ರಾಜ್ಯ’ ಬೇಕೋ ಎನ್ನುವುದನ್ನು ಈ ಲೋಕಸಭಾ ಚುನಾವಣೆ ನಿರ್ಧರಿಸಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಧರ್ವಧಾರಿತ ಮೀಸಲಾತಿ ರದ್ದು: ಕರ್ನಾಟಕದಲ್ಲಿ ಯಾವುದೇ ಸಮೀಕ್ಷೆ ನಡೆಸದೆ ಎಲ್ಲ ಮುಸ್ಲಿಮರನ್ನು ಒಬಿಸಿ ವಿಭಾಗಕ್ಕೆ ಸೇರಿಸಿ ಅಲ್ಪಸಂಖ್ಯಾತರಿಗೆ ಶೇ.4 ಮೀಸಲಾತಿ ಕಲ್ಪಿಸಿದೆ ಎಂದು ಷಾ ಹೇಳಿದರು. ಧರ್ವಧಾರಿತ ಮೀಸಲಾತಿ ಸಾಂವಿಧಾನಿಕವಾಗಿ ಸಿಂಧುವಲ್ಲ ಎನ್ನುವುದು ಬಿಜೆಪಿಯ ನಂಬಿಕೆಯಾಗಿದೆ. ಈ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಧರ್ವಧಾರಿತ ಮೀಸಲಾತಿಯನ್ನು ರದ್ದುಪಡಿಸುವುದಾಗಿ ಹೇಳಿದರು.
ಬಡವರಿಗೆ ಹೆಚ್ಚು ಮಕ್ಕಳಿರುತ್ತಾರೆ ಮುಸ್ಲಿಮರನ್ನೇಕೆ ದೂರುತ್ತೀರಿ..?
ಜಂಜ್ಗಿರ್-ಚಂಪಾ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರೀ ಮುಸ್ಲಿಮರನ್ನೇ ಗುರಿಯಾಗಿಸಿ ಮಾತನಾಡುತ್ತಿದ್ದಾರೆ ಎಂದು ಹೇಳಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಡವರಿಗೆ ಹೆಚ್ಚು ಮಕ್ಕಳಿರುತ್ತಾರೆ, ಮುಸ್ಲಿಮರನ್ನೇಕೆ ದೂರುತ್ತೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಛತ್ತೀಸ್ಗಢದ ಜಂಜ್ಗಿರ್-ಚಂಪಾದಲ್ಲಿ ಮಂಗಳವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳ ಐಎನ್ಡಿಐಎ ಮೈತ್ರಿಕೂಟ ಬಹುಮತದತ್ತ ಸಾಗುತ್ತಿರುವುದನ್ನು ಮನಗಂಡ ಮೋದಿ ಹತಾಶರಾದ್ದರಿಂದ ಬರೀ ಮುಸ್ಲಿಮರು ಮತ್ತು ಮಂಗಳಸೂತ್ರದ ಕುರಿತು ಮಾತನಾಡುತ್ತಿದ್ದಾರೆ ಎಂದರು. ನಾವು ನಿಮ್ಮ ಆಸ್ತಿಯನ್ನು ಕಸಿದುಕೊಂಡು ಹೆಚ್ಚುಮಕ್ಕಳು ಇರುವವರಿಗೆ ಕೊಡುತ್ತೇವೆ ಎಂದು ಮೋದಿ ಹೇಳುತ್ತಿದ್ದಾರೆ. ಬಡವರು ಯಾವಾಗಲೂ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ, ಬರೀ ಮುಸ್ಲಿಮರು ಮಾತ್ರವೇ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರಾ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಬಡವರ ಬಳಿ ಸಂಪತ್ತು ಇಲ್ಲದಿರುವುದರಿಂದ ಅವರು ಯಾವಾಗಲೂ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ. ಆದರೆ ನೀವು (ಮೋದಿ) ಯಾವಾಗಲೂ ಬರೀ ಮುಸ್ಲಿಮರನ್ನು ಗುರಿಯಾಗಿಸಿ ಮಾತನಾಡುತ್ತೀರಿ? ಮುಸ್ಲಿಮರೂ ಇದೇ ದೇಶಕ್ಕೆ ಸೇರಿದವರು ಎಂದ ಖರ್ಗೆ, ನಾವು ಎಲ್ಲರನ್ನೂ ಜೊತೆಗೇ ಕೊಂಡೊಯ್ಯುವ ಮೂಲಕ ದೇಶ ಕಟ್ಟಬೇಕೇ ಹೊರತು, ಬಿಜೆಪಿಯವರ ರೀತಿ ಒಡೆಯುವ ಮೂಲಕವಲ್ಲ ಎಂದರು.
ನಾವು 55 ವರ್ಷಗಳ ಕಾಲ ದೇಶ ಆಳಿದ್ದೇವೆ, ಯಾರದ್ದಾದರೂ ಮಂಗಳಸೂತ್ರ ದೋಚಿದ್ದೇವಾ? ಅಥವಾ ಇ.ಡಿ.-ಐಟಿ ದುರ್ಬಳಕೆ ಮಾಡಿಕೊಂಡು ಜನರನ್ನು ಜೈಲಿಗೆ ತಳ್ಳಿದ್ದೇವಾ? ಪ್ರಧಾನಿ ಮೋದಿ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲಿಮರ ಅಸ್ತಿತ್ವವೇ ಇರದ ವಿಚಾರಗಳಲ್ಲೂ ಹಿಂದು-ಮುಸ್ಲಿಂ ಎಂದು ಮೋದಿ ಮಾತನಾಡುತ್ತಿದ್ದಾರೆ. ಇಂಥವರು ಇನ್ನು ಐದು ವರ್ಷ ಆಡಳಿತ ನಡೆಸಿದರೆ ದೇಶ ಹಾಳಾಗುತ್ತದೆ ಎಂದು ಖರ್ಗೆ ಆರೋಪಿಸಿದರು.
ಮೋದಿ ಮತ್ತವರ ಬೆಂಬಲಿಗರು 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಿಸಿ ಎಂದು ಪದೇಪದೇ ಕೇಳುತ್ತಿದ್ದಾರೆ. ಅಷ್ಟು ಸ್ಥಾನಗಳನ್ನು ಕೇಳುತ್ತಿರುವುದು ಬಡವರ ಕಲ್ಯಾಣಕ್ಕಾಗಿ ಅಲ್ಲ, ಬದಲಿಗೆ ಅವರ ಹಕ್ಕುಗಳನ್ನು ಕಸಿಯಲು ಎಂದ ಖರ್ಗೆ, ಈ ಚುನಾವಣೆ ಇರುವುದು ದೇಶದ ಐಕ್ಯತೆ ಉಳಿಸಿಕೊಳ್ಳಲು ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಎಂದು ಹೇಳಿದರು.
ಅಶ್ಲೀಲ ಚಿತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಫೋಟೋ ಮಾರ್ಫಿಂಗ್: ಎಫ್ಐಆರ್ ದಾಖಲು