ಬೆಂಗಳೂರು: ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಆತನ ಸಂಬಂಧಿಕರೇ ಕಿಡ್ನಾಪ್ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕ ಶಶಾಂಕ್(19) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯೂ ಜುಲೈ 16ರಂದು ಬೆಂಗಳೂರು ಹೊರವಲಯದ ಕುಂಬಳಗೋಡು ಬಳಿ ನಡೆದಿತ್ತು. ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವಕನನ್ನು ಕಿಡ್ನ್ಯಾಪ್ ಮಾಡಿ ಯುವತಿ ದೊಡ್ಡಪ್ಪ ಮಹೇಶ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಬಳಿಕ ಮಣ್ಣಿನಲ್ಲಿ ಹೊರಳಾಡಿ ಬೆಂಕಿ ನಂದಿಸಿಕೊಂಡಿದ್ದ ಶಶಾಂಕ್. ಬ್ಯಾಗ್ನಲ್ಲಿದ್ದ ಮೊಬೈಲ್ ತೆಗೆದು ಅತ್ತೆಗೆ ಕರೆ ಮಾಡಿ ತನ್ನ ಅತ್ತೆಗೆ ವಿಚಾರವನ್ನು ತಿಳಿಸಿದ್ದ. ಗಾಯಾಳು ಶಶಾಂಕ್ನನ್ನು ಅವರ ಅತ್ತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು.
ಶೇ. 85ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಶಶಾಂಕ್ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸೂತಕದ ಸಂಪ್ರದಾಯ; ಬಾಣಂತಿಯನ್ನು ಊರಿನಿಂದ ಹೊರಗಿಟ್ಟ ಸಮುದಾಯ
ಘಟನೆಯ ಹಿನ್ನಲೆ
ಶಶಾಂಕ್, ತನ್ನ ಸಂಬಂಧಿಕರ ಮಗಳನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಈ ವಿಚಾರ ಯುವತಿಯ ಮನೆಯವರಿಗೆ ಇತ್ತೀಚೆಗಷ್ಟೇ ತಿಳಿದಿದ್ದು ವಿರೋಧ ವ್ಯಕ್ತವಾಗಿತ್ತು. ಯುವತಿ, 11ನೇ ತಾರೀಕಿನಂದು ಮೈಸೂರಿನಿಂದ ಬೆಂಗಳೂರಿಗೆ ಒಬ್ಬಳೇ ಬಂದಿದ್ದು ಶಶಾಂಕ್ ಮನೆಗೆ ತೆರಳಿದ್ದಳು. ಈ ವಿಚಾರ ಗೊತ್ತಾಗಿ ಶಶಾಂಕ್ ಯುವತಿಯ ಮನೆಯವರು ಮನೆಗೆ ಬಂದಿದ್ದರು ಎನ್ನಲಾಗಿದೆ.
ಇವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಶಶಾಂಕ್ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಕರೆದೊಯ್ದಿದ್ದಾರೆ. ನಂತರ ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದು ಇನೋವಾ ಕಾರಿನಲ್ಲಿ ಶಶಾಂಕನನ್ನು ಕಿಡ್ನಾಪ್ ಮಾಡಿ ಕರೆದೊಯ್ದಿದ್ದಾರೆ. ನಂತರ, ಈ ದುಷ್ಕರ್ಮಿಗಳು ಕುಂಬಳಗೋಡು ಕಡೆ ಕರೆದೊಯ್ದು ಪೆಟ್ರೋಲ್ ಹಾಕಿ ಯುವಕನನ್ನು ಸುಟ್ಟಿದ್ದಾರೆ. ಈ ವಿಚಾರವಾಗಿ ಶಶಾಂಕ್ ಅಜ್ಜಿ ಜಯಲಕ್ಷ್ಮಿ ಹೇಳಿಕೆ ನೀಡಿ ಮಾಹಿತಿ ನೀಡಿದ್ದಾರೆ.