ನವದೆಹಲಿ: ಒಂದೂವರೆ ತಿಂಗಳ ಹಿಂದೆ ಐಪಿಎಲ್ನಲ್ಲಿ ಆಡುವ ಬಗ್ಗೆಯೇ ಅನುಮಾನದಲ್ಲಿದ್ದ ವಿಕೆಟ್ ಕೀಪರ್&ಬ್ಯಾಟರ್ ರಿಷಭ್ ಪಂತ್ ಇದೀಗ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಉಪನಾಯಕರಾಗಿ ಮರಳಿ ಕಣಕ್ಕಿಳಿಯುವ ಸಾಧ್ಯತೆ ಕಾಣಿಸಿದೆ. ಐಪಿಎಲ್ನಲ್ಲಿ ತೋರುತ್ತಿರುವ ಭರ್ಜರಿ ನಿರ್ವಹಣೆಯಿಂದ ರಿಷಭ್ ಪಂತ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಬದಿಗೊತ್ತಿ ಉಪನಾಯಕನ ಸ್ಥಾನಕ್ಕೆ ಮರಳುವ ಪ್ರಮುಖ ಆಕಾಂ ಎನಿಸಿದ್ದಾರೆ.
2022ರ ಅಂತ್ಯದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಕ್ಕೊಳಗಾಗಿದ್ದ ಪಂತ್, ಹಾಲಿ ಐಪಿಎಲ್ನಲ್ಲೇ ಮೊದಲ ಬಾರಿ ಮರಳಿ ಕಣಕ್ಕಿಳಿದಿದ್ದಾರೆ. ಆರಂಭಿಕ ಕೆಲ ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ಪರದಾಡಿದ ಬಳಿಕ ಪಂತ್ ಈಗ ಒಂದು ವರ್ಷ ಕಾಲ ಕ್ರಿಕೆಟ್ ಮೈದಾನದಿಂದ ಹೊರಗಿದ್ದೆ ಎಂಬುದನ್ನು ಮರೆತವರಂತೆ ಹಳೆಯ ಲಯದಲ್ಲೇ ಬಿರುಸಿನಾಟವಾಡುತ್ತಿದ್ದಾರೆ.
ಭೀಕರ ರಸ್ತೆ ಅಪಘಾತಕ್ಕೀಡಾಗುವುದಕ್ಕೆ ಮುನ್ನ ಪಂತ್ ಭಾರತ ಟಿ20 ತಂಡದ ಉಪನಾಯಕರೇ ಆಗಿದ್ದರು. 2022ರ ಜೂನ್ನಲ್ಲಿ ಪ್ರವಾಸಿ ದ. ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಅವರು ಹಂಗಾಮಿ ನಾಯಕರೂ ಆಗಿದ್ದರು. ಹೀಗಾಗಿ ಈಗ ತಂಡಕ್ಕೆ ಮರಳುತ್ತಿರುವಾಗ ಅವರಿಗೆ ಹಳೆಯ ಜವಾಬ್ದಾರಿಯನ್ನೂ ಮರಳಿ ಒಪ್ಪಿಸಲು ಆಯ್ಕೆಗಾರರು ಬಯಸಿದ್ದಾರೆ ಎನ್ನಲಾಗಿದೆ.
ಹಾರ್ದಿಕ್ ಪಾಂಡ್ಯ ಹಾಲಿ ಐಪಿಎಲ್ನಲ್ಲಿ ನಿರೀಕ್ಷಿತ ನಿರ್ವಹಣೆ ತೋರದಿರುವುದು ಪಂತ್ ಉಪನಾಯಕನ ಸ್ಥಾನಕ್ಕೆ ಮರಳುವ ಹಾದಿಯನ್ನು ಸುಗಮಗೊಳಿಸಿದೆ ಎನ್ನಲಾಗುತ್ತಿದೆ. 2022ರಲ್ಲಿ ಗುಜರಾತ್ ಟೈಟಾನ್ಸ್ಗೆ ಚೊಚ್ಚಲ ಯತ್ನದಲ್ಲೇ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ನಂತರದಲ್ಲಿ ಹಾರ್ದಿಕ್ ಭಾರತ ತಂಡವನ್ನು ಟಿ20 ಕ್ರಿಕೆಟ್ನಲ್ಲಿ ಮುನ್ನಡೆಸಿದ್ದಲ್ಲದೆ, ಟಿ20 ವಿಶ್ವಕಪ್ನಲ್ಲೂ ನಾಯಕತ್ವ ವಹಿಸುವ ನೆಚ್ಚಿನ ಅಭ್ಯರ್ಥಿ ಎನಿಸಿದ್ದರು. ಆದರೆ ರೋಹಿತ್ ಶರ್ಮಗೆ ಪಟ್ಟ ಖಚಿತಗೊಂಡ ಬಳಿಕ ಹಾರ್ದಿಕ್ಗೆ ಉಪನಾಯಕನ ಸ್ಥಾನವನ್ನೇ ಬಾಕಿ ಉಳಿದಿತ್ತು. ಹಾಲಿ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿ ಮಾತ್ರವಲ್ಲದೆ, ಬ್ಯಾಟಿಂಗ್-ಬೌಲಿಂಗ್ನಲ್ಲೂ ವೈಫಲ್ಯ ಅನುಭವಿಸಿರುವುದು ಈಗ ಅವರ ಈ ಹುದ್ದೆಗೂ ಕುತ್ತು ತರುವಂತೆ ಮಾಡಿದೆ. ಆದರೆ ಸದ್ಯ ಫಾರ್ಮ್ನಲ್ಲಿಲ್ಲದಿದ್ದರೂ, ಅವರನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಡುವ ರಿಸ್ಕ್ಅನ್ನು ಆಯ್ಕೆಗಾರರು ತೆಗೆದುಕೊಳ್ಳಲಾರರು ಎನ್ನಲಾಗಿದೆ.
ಅಹದಾಬಾದ್ನಲ್ಲಿ ಇಂದು ಆಯ್ಕೆ ಸಮಿತಿಯ ಸಭೆ
ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅಹಮದಾಬಾದ್ನಲ್ಲಿ ಮಂಗಳವಾರ ಸಭೆ ನಡೆಸಿ ಟಿ20 ವಿಶ್ವಕಪ್ಗೆ ಭಾರತದ 15 ಆಟಗಾರರ ತಂಡವನ್ನು ಅಂತಿಮಗೊಳಿಸಲಿದ್ದಾರೆ. ಒಂದು ದಿನದ ಬಳಿಕ ಅಂದರೆ ಬುಧವಾರ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸದ್ಯ ಗುಜರಾತ್ನ ರಾಜಕೀಯ ಚಟುವಟಿಕೆಯಲ್ಲೂ ಬಿಜಿಯಾಗಿರುವ ಜಯ್ ಷಾ, ಇದರ ನಡುವೆಯೂ ಮಂಡಳಿಯ ಕಾರ್ಯದರ್ಶಿಯಾಗಿ ಎಂದಿನಂತೆ ಆಯ್ಕೆ ಸಮಿತಿಯ ಸಭೆಯ ಸಂಚಾಲಕ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಆರ್ಚರಿ ವಿಶ್ವಕಪ್ನಲ್ಲಿ ಐತಿಹಾಸಿಕ ಪದಕ ಸಾಧನೆ ಮೆರೆದ ಭಾರತದ ಬಿಲ್ಗಾರರು