ಗೋರಖಪುರ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾವೇ ಮುಖ್ಯಸ್ಥರಾಗಿರುವ ಗೋರಖಪುರದ ಗೋರಖನಾಥ್ ದೇಗುಲದ ಗಡಿ ಗೋಡೆಯನ್ನು ಧ್ವಂಸಗೊಳಿಸಲು ಆದೇಶಿಸಿದ್ದಾರೆ. ಆ ಮೂಲಕ ಸಮಾಜಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಸಿಎಂ ಆದೇಶದ ಮೇರೆಗೆ ದೇಗುಲಕ್ಕೆ ಸಂಬಂಧಿಸಿದ ಗೋಡೆ ಹಾಗೂ ಕೆಲ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಷ್ಟಕ್ಕೂ ದೇಗುಲದ ಆಸ್ತಿಯನ್ನು ಧ್ವಂಸ ಮಾಡಿದ್ದೇಕೆ ಅಂತೀರಾ…? ಗೋರಖಪುರದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ಕಾರ್ಯ ನಡೆಸಲಾಗುತ್ತಿದೆ. ಇದಕ್ಕಾಗಿ ಗೋರಖನಾಥ್ ದೇಗುಲ, ಧರ್ಮಶಾಲಾ, ಮೊಹ್ದಿಪುರ, ಖೂಡಾ ಘಾಟ್, ನಂದನಗರ ಪ್ರದೇಶದಲ್ಲಿ ರಸ್ತೆ ಅಗಲ ಮಾಡಲಾಗುತ್ತಿದೆ. ಇದಲ್ಲದೇ, ದೇಗುಲದ ಎದುರು ಭಾರಿ ವಾಹನ ದಟ್ಟಣೆ ಉಂಟಾಗುತ್ತಿತ್ತು. ಈ ಕಾರಣಕ್ಕಾಗಿ ರಸ್ತೆ ಅಗಲೀಕರಣ ಅನಿವಾರ್ಯವಾಗಿತ್ತು. ಹೀಗಾಗಿ ಸಿಎಂ ದೇಗುಲದ ಗಡಿ ಗೋಡೆಯನ್ನು ಕೆಡವಲು ಅನುಮತಿ ನೀಡಿದ್ದಾರೆ.
ಇದನ್ನೂ ಓದಿ; ಕಂಟೇನ್ಮೆಂಟ್ ಜೋನ್ನಲ್ಲಿ ಮನೆ ಮನೆಗೆ ತೆರಳುತ್ತಿರುವ ಆರ್ಎಸ್ಎಸ್ ಕಾರ್ಯಕರ್ತರು ಮಾಡುತ್ತಿರೋದೇನು?
ಸಾರ್ವಜನಿಕ ಹಿತ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಬಿದ್ದರೆ ಯಾವುದೇ ಕಟ್ಟಡ, ಅಂಗಡಿ, ಮನೆ, ಅಥವಾ ಧಾರ್ಮಿಕ ತಾಣಗಳ ಜಾಗವೇ ಆಗಿದ್ದರೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ದೇಗುಲದ ಹಿರಿಯ ಸಿಬ್ಬಂದಿ ವಿನಯ್ ಗೌತಮ್ ತಿಳಿಸಿದ್ದಾರೆ.
ದೇಗುಲದ ಮುಖ್ಯ ಗೇಟ್ನಿಂದ ಇನ್ನೊಂದು ಗೇಟ್ವರೆಗಿನ ಆವರಣ ಗೋಡೆ, ಹಾಗೂ ಅದಕ್ಕೆ ಹೊಂದಿಕೊಂಡಿದ್ದ 50ಕ್ಕೂ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಒಟ್ಟು 17 ಕಿ.ಮೀ. ಚತುಷ್ಪಥ ರಸ್ತೆಯ ಶೇ.30 ಕಾಮಗಾರಿ ಪೂರ್ಣವಾಗಿದ್ದು, 2021ರಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.