ಬೆಂಗಳೂರು: ರಾಜಧಾನಿಯ ಕಂಟೇನ್ಮೆಂಟ್ ಜೋನ್ಗಳಲ್ಲಿ ಕರೊನಾ ಪರೀಕ್ಷೆ ನಡೆಸಲು ಆರೋಗ್ಯ ಕಾರ್ಯಕರ್ತರು ಕಾಲಿಡಲು ಭಯಪಡುತ್ತಿದ್ದಾರೆ. ಸಾರ್ವಜನಿಕರು ಸಹಕರಿಸುತ್ತಿಲ್ಲ ಎನ್ನುವುದು ಒಂದು ಕಾರಣವಾದರೆ, ತಮ್ಮನ್ನೇ ಕೋವಿಡ್ ಆವರಿಸಿಕೊಳ್ಳುವ ಭೀತಿ ಇನ್ನೊಂದೆಡೆ.
ಆದರೆ, ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯ ಹಾಗೂ ಅನುಕರಣೀಯ. ಸೇವಾ ಸ್ಫೂರ್ತಿಯೊಂದಿಗೆ 800ಕ್ಕೂ ಅಧಿಕ ಜನರು ಕೋವಿಡ್ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಮನೆ ಮನೆಗೂ ತೆರಳಿ ಕರೊನಾ ಪರೀಕ್ಷೆ ನಡೆಸುತ್ತಿದ್ದಾರೆ.
ಕಳೆದ ಏಪ್ರಿಲ್ 27ರಂದು ಆರ್ಎಸ್ಎಸ್ನ ಜನ ಕಲ್ಯಾಣ ಸಮಿತಿ ಕೋವಿಡ್ ವಿರುದ್ಧ ಹೋರಾಟದಲ್ಲಿ ಕೈಜೋಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿತು. ಇದಕ್ಕಾಗಿ ‘ಪುಣೇಕರ್ ಅಗೇನ್ಸ್ಟ್ ಕರೊನಾ’ ಅಭಿಯಾನ ಆರಂಭಿಸಿತು. ಇದಕ್ಕೆ ಉತ್ತಮ ಬೆಂಬಲ ವ್ಯಕ್ತವಾಯಿತು. ಪುಣೆಯ ಖ್ಯಾತ ವೈದ್ಯರು ಇದರಲ್ಲಿ ಪಾಲ್ಗೊಂಡರು. 675ಕ್ಕೂ ಅಧಿಕ ಕಾರ್ಯಕರ್ತರು ಮುಂದೆ ಬಂದರು. ವಿಶೇಷವೆಂದರೆ ಇವರಲ್ಲಿ ಮಹಿಳೆಯರು ಇದ್ದಾರೆ. ಇವರೆಲ್ಲರಿಗೆ ಒಂದು ವಿಶೇಷ ತರಬೇತಿ ನೀಡಲಾಯಿತು. ಈ ತಂಡ ಸಾಮೂಹಿಕ ಕರೊನಾ ತಪಾಸಣೆಯಲ್ಲಿ ತೊಡಗಿಕೊಂಡಿದೆ.
ಇದನ್ನೂ ಓದಿ; ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಚೀನಾ ಸ್ವಾಟೆಗೆ ತಿವಿದ ಅಮೆರಿಕ
ನುರಿತ ವೈದ್ಯಕೀಯ ಸಿಬ್ಬಂದಿ ಒಳಗೊಂಡ ಕಂಟೇನ್ಮೆಂಟ್ ಜೋನ್ಗಳಲ್ಲಿ ಮನೆ ಮನೆಗೆ ತೆರಳಿ ಕರೊನಾ ಪರೀಕ್ಷೆ ಮಾಡುತ್ತಿದೆ. ಸುಡುವ ಬಿಸಿಲಲ್ಲೂ ನಿರಂತರ ಆರು ತಾಸು ಮನೆ ಮನೆ ಸುತ್ತಾಡುವ ತಂಡದ ಸಿಬ್ಬಂದಿ ಬಳಿಕ ಮನೆಗೆ ತೆರಳುವುದಿಲ್ಲ. ಬದಲಿಗೆ ಆರ್ಎಸ್ಎಸ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಶಿಬಿರಕ್ಕೆ ಬರುತ್ತದೆ. ಸತತ ಐದು ದಿನಗಳ ಕೆಲಸದ ಬಳಿಕ ಅವರನ್ನು ನಾಲ್ಕು ದಿನಗಳವರೆಗೆ ಕ್ವಾರಂಟೇನ್ನಲ್ಲಿಡಲಾಗುತ್ತದೆ. ಬಳಿಕ ಪರೀಕ್ಷೆ ನಡೆಸಿ ನೆಗೆಟಿವ್ ಫಲಿತಾಂಶ ಬಂದರಷ್ಟೇ ಮನೆಗೆ ಕಳುಹಿಸಲಾಗುತ್ತಿದೆ. ಆದರೆ, ಕಾರ್ಯಕರ್ತರು ಮನೆಗೆ ತೆರಳದೇ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
ಕಂಟೇನ್ಮೆಂಟ್ ಜೋನ್ಗಳಲ್ಲಿ ಕರೊನಾ ವ್ಯಾಪಿಸುವುದನ್ನು ತಡೆಯಲು ಅಲ್ಲಿರುವವರನ್ನೆಲ್ಲ ಪರೀಕ್ಷೆಗೆ ಒಳಪಡಿಸುವುದೊಂದೇ ಮಾರ್ಗವಾಗಿದೆ. ಪುಣೆಯಲ್ಲಿ ಸದ್ಯ 60ಕ್ಕೂ ಹೆಚ್ಚು ಕಂಟೇನ್ ಜೋನ್ಗಳನ್ನು ಗುರುತಿಸಲಾಗಿದೆ. ಹೀಗಾಗಿ ಲಕ್ಷಾಂತರ ಜನರ ಪರೀಕ್ಷೆ ನಡೆಸಲೇಬೇಕಾಗಿದೆ. ಇದಕ್ಕೆ ಸರ್ಕಾರದೊಂದಿಗೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಲೇಬೇಕಿದೆ.
ಇದನ್ನೂ ಓದಿ; ಈ ವರ್ಷ ನರ್ಸರಿ ಸ್ಕೂಲ್ ತೆರೆಯಲ್ವಾ…? ಆಡ್ಮಿಷನ್ ಮಾಡಿಸ್ಬೇಕೋ ಬೇಡ್ವೋ?
ಪುಣೇಕರ್ ಅಗೇನ್ಸ್ಟ್ ಕರೊನಾ ಅಭಿಯಾನದಲ್ಲಿ ಪುಣೆ ಮಹಾನಗರ ಪಾಲಿಕೆ ಆಂಬುಲೆನ್ಸ್ ಹಾಗೂ ಪೊಲೀಸ್ ಹಾಗೂ ಟೆಸ್ಟಿಂಗ್ ಕಿಟ್ಗಳನ್ನು ವ್ಯವಸ್ಥೆ ಮಾಡಿದ್ದರೆ, ಮಹಾರಾಷ್ಟ್ರ ಕೈಗಾರಿಕಾ ಹಾಗೂ ವಾಣಿಜ್ಯ ಸಂಸ್ಥೆ ಪಿಪಿಇ ಕಿಟ್ಗಳನ್ನು ಒದಗಿಸಿದೆ.
ಈ ಅಭಿಯಾನದಲ್ಲಿ ಈವರೆಗೆ 13,000 ಮನೆಗಳ 62,000 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 1000ಕ್ಕೂ ಹೆಚ್ಚು ಜನರನ್ನು ಮುಂದಿನ ಚಿಕಿತ್ಸೆ ಶಿಫಾರಸು ಮಾಡಲಾಗಿದೆ. ವಿಶೇಷವೆಂದರೆ ಆರ್ಎಸ್ಎಸ್ ನೇತೃತ್ವದ ಈ ಅಭಿಯಾನ ನಡೆಯುತ್ತಿರುವ ಭವಾನಿ ಪೇಟ್ ಹಾಗೂ ಕಸಬಾ ಪ್ರದೇಶಗಳು ಮುಸ್ಲಿಂ ಬಾಹುಳ್ಯದ ಪ್ರದೇಶಗಳಾಗಿವೆ. ಹಲವು ಕುಟುಂಬಗಳು ಈ ಅಭಿಯಾನದಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿವೆ. ಈ ಕಾರಣಕ್ಕಾಗಿ ಈ ಅಭಿಯಾನದ ದೇಶದ ಇತರ ಪ್ರದೇಶಗಳಿಗೂ ಮಾದರಿ ಎನಿಸಿದೆ.
ಅಂತರ ಜಿಲ್ಲಾ ಸಂಚಾರಕ್ಕೆ ಬೇಕಿಲ್ಲ ಪಾಸ್; ಬಸ್, ರೈಲು, ವಿಮಾನ ಪ್ರಯಾಣಕ್ಕೆ ಈ ನಿಯಮ ಪಾಲನೆ ಕಡ್ಡಾಯ