ಬೆಂಗಳೂರು: ಲಾಕ್ಡೌನ್ ಹೊರತಾಗಿಯೂ ವಾಹನ ಸಂಚಾರಕ್ಕಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಜತೆಗೆ ಅಂತರ ಜಿಲ್ಲಾ ಸಂಚಾರಕ್ಕೆ ಪಾಸ್ ಬೇಕಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ.
ಆದರೆ, ರಾತ್ರಿ ಏಳು ಗಂಟೆಯಿಂದ ಬೆಳಗ್ಗೆ ಏಳು ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂಬದನ್ನು ಗಮನದಲ್ಲಿಟ್ಟುಕೊಳ್ಳಬೇಕು ತಿಳಿಸಿದ್ದಾರೆ. ಅಂದರೆ, ನೀವು ರಾಜ್ಯದಲ್ಲಿ ಯಾವುದೇ ಪ್ರದೇಶಕ್ಕೆ ಹೋದರೂ ಸಂಜೆ ಏಳು ಗಂಟೆಯಿಂದ ಬೆಳಗ್ಗಿನ ಏಳು ಗಂಟೆವರೆಗೆ ಸಂಚಾರಕ್ಕೆ ಅವಕಾಶವಿರುವುದಿಲ್ಲ.
ಸದ್ಯ ಅಂತರ ಜಿಲ್ಲೆ ಪ್ರಯಾಣ ಕಲ್ಪಿಸಿದ್ದರೂ, ಬೇರೆ ರಾಜ್ಯಗಳಿಂದ ಇಲ್ಲಿಗೆ ಯಾರೂ ಬರುವಂತಿಲ್ಲ. ಬೇರೆ ರಾಜ್ಯಗಳಿಗೆ ತೆರಳುವವರು ಆಯಾ ರಾಜ್ಯಗಳ ಅನುಮತಿ ಪಡೆಯಲೇಬೇಕು.
ಇದನ್ನೂ ಓದಿ; ಪೆಟ್ರೋಲ್, ಡೀಸೆಲ್ ಮಾರಾಟ ಮೊದಲಿನಂತಾಗಲು ಇನ್ನಾರು ತಿಂಗಳು ಬೇಕು…!
ಸದ್ಯ ಬಸ್ ಸಂಚಾರ ಆರಂಭವಾಗಿದ್ದು, 22ರಿಂದ ಪ್ರಯಾಣಿಕ ರೈಲು, 25ರಿಂದ ವಿಮಾನ ಸಂಚಾರ ನಡೆಯಲಿದೆ. ಇದಕ್ಕಾಗಿ ಪ್ರಯಾಣಿಕರು ಹಲವಾರು ನಿಯಮಗಳನ್ನು ಪಾಲಿಸಬೇಕಿದೆ.
ಎಲ್ಲರೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವುದರಿಂದ ಪ್ರಯಾಣದ ವೇಳೆಯೂ ಮಾಸ್ಕ್ ಧರಿಸಿರಲೇಬೇಕು. ಎಲ್ಲ ಕಡೆಗಳಲ್ಲೂ ಥರ್ಮಲ್ ಸ್ಕ್ರೀನಿಂಗ್ (ದೇಹದ ಉಷ್ಣಾಂಶ ತಪಾಸಣೆ) ಜ್ವರದಿಂದ ಬಳಲುತ್ತಿರುವವರಿಗೆ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ರೈಲುಗಳ ಪ್ರಯಾಣಿಕರು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ಗಳಲ್ಲಿ ಆರೋಗ್ಯ ಸೇತು ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿರಬೇಕು. ಅದರಲ್ಲಿ ನೀವು ಸುರಕ್ಷಿತರಾಗಿದ್ದೀರಿ ಎಂದು ತೋರಿಸಿದಲ್ಲಿ ಮಾತ್ರ ರೈಲು ಹತ್ತಲು ಅವಕಾಶವಿರುತ್ತದೆ. ರೈಲಿನಲ್ಲಿ ಬೇರೆ ರಾಜ್ಯಗಳಿಗೆ ತೆರಳುವವರು ಅಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಆಯಾ ರಾಜ್ಯಗಳ ಕ್ವಾರಂಟೈನ್ ಪ್ರೋಟೊಕಾಲ್ ತಿಳಿದುಕೊಂಡೇ ಪ್ರಯಾಣಿಸಬೇಕು ಎಂದು ರೈಲ್ವೆ ಇಲಾಖೆ ಕಡ್ಡಾಯಗೊಳಿಸಿದೆ.
ಇದನ್ನೂ ಓದಿ; ನರ್ಸರಿ ಮಕ್ಕಳ ಗತಿಯೇನು? ಶಾಲಾರಂಭ ವಿಳಂಬವಾದರೂ ಪೂರ್ತಿ ಶುಲ್ಕ ನೀಡಬೇಕೇ?
ಈ ಎಲ್ಲ ನಿಯಮಗಳು ವಿಮಾನ ಯಾನಕ್ಕೂ ಅನ್ವಯಿಸುತ್ತವೆ. ಟಿಕೆಟ್ ಬುಕ್ ಮಾಡುವ ಮುನ್ನ ಇವನ್ನೆಲ್ಲ ತಿಳಿದುಕೊಂಡು ಪ್ರಯಾಣಕ್ಕೆ ಸಜ್ಜಾಗಿ. ಇಲ್ಲದಿದ್ದರೆ ಆಯಾ ರಾಜ್ಯಗಳು ನಿಮ್ಮನ್ನು ಸೇರಿಸಿಕೊಳ್ಳದೇ ವಾಪಸ್ ಕಳುಹಿಸಬಹುದು. ಎಲ್ಲಕಿಂತ ಮುಖ್ಯವಾಗಿ ಕೆಲ ರಾಜ್ಯಗಳಲ್ಲಿ ಕರೊನಾ ಪರೀಕ್ಷೆ ಹಾಗು ಕ್ವಾರಂಟೈನ್ ಶುಲ್ಕವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ. ಹೀಗಾಗಿ ಪ್ರಯಾಣಕ್ಕೆ ಲಗ್ಗೇಜ್ ಲೈಟಾಗಿದ್ದರೂ, ಜೇಬು ಭಾರವಾಗಿರಲೇಬೇಕು.
ಬೇಬಿ ಪೌಡರ್ನಿಂದ ಕ್ಯಾನ್ಸರ್ ವಿವಾದ; ಅಮೆರಿಕ, ಕೆನಡಾದಲ್ಲಿ ಮಾರಾಟ ನಿಲ್ಲಿಸಿದ ಜಾನ್ಸನ್ ಆ್ಯಂಡ್ ಜಾನ್ಸನ್