ಮಲೇಬೆನ್ನೂರು: ಹರಿಹರ ತಾಲೂಕಿನ ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಸ್ವಾಮಿ ರಥೋತ್ಸವವು ಮಂಗಳವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕರಿಬಸವೇಶ್ವರ ಹಾಗೂ ಅಜ್ಜಯ್ಯನ ಗದ್ದುಗೆಗೆ ಪೂಜೆ ಸಲ್ಲಿಸಿ, ವೀರಗಾಸೆ, ನಂದಿ ಧ್ವಜ ಸೇರಿ ಜನಪದ ಕಲಾ ಮೇಳಗಳೊಂದಿಗೆ ಮೆರವಣಿಗೆಗೆ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂದಿಗುಡಿ ಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಬೆಳಗ್ಗೆ 9.45ಕ್ಕೆ ಭಕ್ತರು ರಥ ಎಳೆದು ಸಂಭ್ರಮಿಸಿದರು.
ರಥೋತ್ಸವದ ಮಿಣಿ (ಹಗ್ಗ) ಎಳೆಯಲು ನೆರೆದಿದ್ದ ಭಕ್ತರಲ್ಲಿ ನೂಕು ನುಗ್ಗಲು ಉಂಟಾಗದಂತೆ ಪೋಲೀಸ್ ಸಿಬ್ಬಂದಿ ಸೂಕ್ತ ಭದ್ರತೆ ಕಲ್ಪಿಸಿದ್ದರು. ರಥಕ್ಕೆ ಸ್ಟೇರಿಂಗ್, ಬ್ರೇಕ್ ಸಿಸ್ಟಂ ಅಳವಡಿಸಿದ್ದರಿಂದ ತೇರು ನಿಧಾನವಾಗಿ ಸಾಗಿತು.
ಭಕ್ತರು ಬಾಳೆಹಣ್ಣು, ಸೂರುಬೆಲ್ಲ, ಮೆಣಸು, ಮೆಕ್ಕೆಜೋಳ, ದವನ ತೂರಿ, ಹರಕೆ ಒಪ್ಪಿಸಿದರು. ನೆರೆದಿದ್ದ ಭಕ್ತರು ಅಜ್ಜಯ್ಯನನ್ನು ಸ್ಮರಿಸಿದರು.
ಹರಕೆ ಮತ್ತು ಜವಳ: ಹರಕೆ ಹೊತ್ತ ಭಕ್ತರು ಜವಳ ತೆಗೆಸಿ, ಪುಣ್ಯಸ್ನಾನ ಮಾಡಿದರು. ಅಜ್ಜಯ್ಯನ ಗದ್ದುಗೆ ಆವರಣದಲ್ಲಿ ಉರುಳು ಸೇವೆ ಮಾಡಿದರು. ಕೆನ್ನೆಲೆ ಶಸ್ತ್ರ ಚುಚ್ಚಿಸಿಕೊಂಡು ಭಕ್ತಿ ಸಮರ್ಪಿಸಿದರು.
ದೇವಾಲಯದ ಬಳಿ ಸರದಿ ಸಾಲಿನಲ್ಲಿ ನಿಂತ ಭಕ್ತರು ಅಜ್ಜಯ್ಯನಿಗೆ ಪ್ರಿಯವಾದ ಮಂಡಕ್ಕಿ, ಹೂವು, ಹಣ್ಣು, ಕಾಯಿ, ಕರ್ಪೂರ ಊದುಬತ್ತಿಗಳನ್ನು ಅಜ್ಜಯ್ಯನಿಗೆ ಅರ್ಪಿಸಿದರು. ದೇಗುಲದ ಬಳಿ ಭಕ್ತರು ಕೊಬ್ಬರಿ ಸುಡುವ ಮೂಲಕ ಭಕ್ತಿ ಸಮರ್ಪಿಸಿದರು.
ಜಾನಪದ ಮೆರಗು: ಉತ್ಸವ ಮೂರ್ತಿ ಮೆರವಣಿಗೆ ಹಾಗೂ ರಥೋತ್ಸವಕ್ಕೆ ಜಾನಪದ ಕಲಾತಂಡಗಳು ಮೆರಗು ತಂದುಕೊಟ್ಟವು. ರಾಣೆಬೆನ್ನೂರಿನ ವೀರಗಾಸೆ ಕಲಾ ತಂಡ, ನಂದಿ ಕುಣಿತ, ಹಗಲು ವೇಷ, ಕುದುರೆ ಕುಣಿತ, ಡೊಳ್ಳು ಸೇರಿ ಇನ್ನಿತರ ಕಲಾ ಪ್ರಕಾರಗಳು ಭಾಗವಹಿಸಿದ್ದವು.
ಹೇಳಿಕೆ-ಕೇಳಿಕೆ
ಕೈಯಲ್ಲಿ ನಿಂಬೆಹಣ್ಣು ಹಿಡಿದು ದೇವತೆ ಆವಾಹನೆ ಆದ ವ್ಯಕ್ತಿಗೆ, ತಮ್ಮ ಬಯಕೆ ಈಡೇರುತ್ತವೆಯೇ? ಕೌಟುಂಬಿಕ ಸಮಸ್ಯೆ ಎಂದಿಗೆ ಪರಿಹಾರವಾಗುತ್ತದೆ? ಮಕ್ಕಳ ಭಾಗ್ಯ ಯಾವಾಗ ಸಿಗುತ್ತದೆ? ಹೀಗೆ ಭಕ್ತರು ಹೇಳಿಕೆ ಕೇಳಿಕೆಗಳು ನಡೆದವು.
ಪೊಲೀಸ್ ಭದ್ರತೆ
ಜಾತ್ರೆಯ ಬಂದೋಬಸ್ತ್ಗೆ 4 ಸಿಪಿಐ, 10 ಪಿಎಸ್ಐ, 14 ಎಎಸ್ಐ ಹಾಗೂ 125 ಪೇದೆ, 2 ಡಿಆರ್ ವ್ಯಾನ್ ಸಿಬ್ಬಂದಿ ನಿಯೋಜಿಸಲಾಗಿತ್ತು. ದೇವಾಲಯ ಆವರಣದಲ್ಲಿ 160 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಬುಲೆನ್ಸ್, ಗೃಹರಕ್ಷಕ ದಳ ಸಿಬ್ಬಂದಿ ಇದ್ದರು.