ವಿಜಯಪುರ: ಒಂದೇ ಪಕ್ಷದ ಇಬ್ಬರು ಎಂಎಲ್ಎಗಳ ಸಹೋದರರು ಮಾರಾಮಾರಿ ಹಂತಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರೂ ಕಾಂಗ್ರೆಸ್ ಶಾಸಕರ ಸಹೋದರರೇ. ಒಬ್ಬ ಕಾಂಗ್ರೆಸ್ ಪಕ್ಷದ ಶಾಸಕ ಎಂ.ಬಿ. ಪಾಟೀಲ್ ಸಹೋದರ, ಮತ್ತೊಬ್ಬ ಅದೇ ಕಾಂಗ್ರೆಸ್ ಪಾರ್ಟಿ ಶಾಸಕ ಶಿವಾನಂದ ಪಾಟೀಲ್ ಸಹೋದರ.
ಈ ಇಬ್ಬರು ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ.
ಇಬ್ಬರ ಗಲಾಟೆಗೆ ಕಾರಣ ಒಂದೇ: ತಳವಾರ ಸಮುದಾಯಕ್ಕೆ ಎಸ್.ಟಿ ಸರ್ಟಿಫಿಕೇಟ್ ನೀಡಿದ್ದು ಯಾರು ಎಂಬುದು. ಎಂ.ಬಿ. ಪಾಟೀಲ್ ಸಹೋದರ ಸುನೀಲ್ಗೌಡ ಪಾಟೀಲ್, ‘ಸಿದ್ದರಾಮಯ್ಯ ಅವಧಿಯಲ್ಲಿ ಎಸ್ಟಿ ಮೀಸಲಾತಿ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗಿತ್ತು..’ ಎಂದು ಹೇಳಿದರು. ಇನ್ನು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಸಹೋದರ ಮತ್ತು ಬಿಜೆಪಿ ಮುಖಂಡನೂ ಆಗಿರುವ ವಿಜುಗೌಡ ಪಾಟೀಲ್, ‘ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ನೀಡಲಾಗಿರುವುದು, ಇದಕ್ಕೆ ಸಿದ್ದರಾಮಯ್ಯ ಕಾರಣ ಅಲ್ಲವೇ ಅಲ್ಲ..’ ಎಂದು ಪ್ರತಿದಾಳಿ ನಡೆಸಿದರು.
ಸಿದ್ದರಾಮಯ್ಯ ಪರ ವಿಧಾನ ಪರಿಷತ್ ಸದಸ್ಯ ಸುನೀಲ್ಗೌಡ ಪಾಟೀಲ್ ವಾದ ಮುಂದುವರೆಸಿದಾಗ, ಬೊಮ್ಮಾಯಿ ಪರ ಬಿಜೆಪಿ ಮುಖಂಡ ವಿಜುಗೌಡ ವಾಗ್ಯುದ್ಧ ನಡೆಸಿದರು. ಇವರಿಬ್ಬರ ವಾದ-ಪ್ರತಿವಾದ ಮಾರಾಮಾರಿ ಹಂತಕ್ಕೆ ಹೋಗುವುದನ್ನು ಗಮನಿಸಿದ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ಮಧ್ಯೆ ಪ್ರವೇಶಿಸಿ, ಇಬ್ಬರನ್ನೂ ಸಮಾಧಾನ ಪಡಿಸಿದರು.