ಬೆಂಗಳೂರು : ಸಾಮಾಜಿಕ ಸಾಮರಸ್ಯ ಕೆಡಿಸುವಂಥ ಟ್ವೀಟ್ಗಳಿಗೆ ಅವಕಾಶ ಕೊಟ್ಟ ಆರೋಪದ ಮೇಲೆ ಪೊಲೀಸ್ ನೋಟೀಸ್ ಸಿಕ್ಕಿರುವ ಟ್ವಿಟರ್ ಇಂಡಿಯ ಎಂಡಿ ಮನೀಶ್ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಉತ್ತರ ಪ್ರದೇಶ(ಯು.ಪಿ.) ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ.
ಘಾಜಿಯಾಬಾದ್ನ ನಿವಾಸಿಯೊಬ್ಬರು ಕೋಮು ಸೌಹಾರ್ದತೆಗೆ ಧಕ್ಕೆ ತರುವಂಥ ವಿಡಿಯೋ ತುಣುಕನ್ನು ಟ್ವೀಟ್ ಮಾಡಿದ್ದರು. ಅದರ ಬಗ್ಗೆ ಹಲವರು ಇತರರು ಟ್ವೀಟ್, ರೀಟ್ವೀಟ್ಗಳನ್ನು ನಡೆಸಿದ್ದರು. ಇದರಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ಟ್ವಿಟರ್ ಮೇಲೆ ಕೇಸು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಲು ಖುದ್ದಾಗಿ ಹಾಜರಾಗುವಂತೆ ಟ್ವಿಟರ್ ಇಂಡಿಯದ ಎಂಡಿ ಆಗಿರುವ ಮಹೇಶ್ವರಿ ಅವರಿಗೆ ಉತ್ತರಪ್ರದೇಶದ ಲೋನಿ ಬಾರ್ಡರ್ ಪೊಲೀಸರು ನೋಟೀಸು ನೀಡಿದ್ದರು.
ಇದನ್ನೂ ಓದಿ: ಸಾರಿಗೆ ಅಧಿಕಾರಿ ಮನೆಗೆ ವಿಜಿಲೆನ್ಸ್ ಅಧಿಕಾರಿಗಳ ದಾಳಿ
ಬೆಂಗಳೂರು ನಿವಾಸಿಯಾದ ಮನೀಶ್ ಮಹೇಶ್ವರಿ ಅವರು, ಯುಪಿ ಪೊಲೀಸರ ನೋಟಿಸ್ ರದ್ದುಪಡಿಸಲು ಕೋರಿ ಕರ್ನಾಟಕ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮನೀಶ್ ಪರ ವಕೀಲ ಸಿ.ವಿ.ನಾಗೇಶ್ ಅವರು, ಮನೀಶ್ ಟ್ವಿಟರ್ ಆಡಳಿತ ಮಂಡಳಿ ಸದಸ್ಯರಲ್ಲ. ಮಾರ್ಕೆಟಿಂಗ್, ಸೇಲ್ಸ್ ಮಾತ್ರ ನೋಡಿಕೊಳ್ಳುತ್ತಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದಾರೆ ಎಂದು ವಾದಿಸಿದರು.
ಯುಪಿ ಪೊಲೀಸರ ಪರ ವಕೀಲರು ಆಕ್ಷೇಪ ಸಲ್ಲಿಸಿ, ಯಾವುದೇ ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿದರು. ಮಧ್ಯಂತರ ಆದೇಶ ಹೊರಡಿಸಿದ ನ್ಯಾಯಾಲಯ ಮನೀಶ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಲೋನಿ ಬಾರ್ಡರ್ ಪೊಲೀಸರಿಗೆ ನಿರ್ದೇಶಿಸಿದೆ. ವಿಚಾರಣೆಗೆ ಮುನ್ನ ದಿನಾಂಕ ಮತ್ತು ಸಮಯ ತಿಳಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು ಎಂದು ಹೇಳಿದೆ.
ರಿಟ್ ಅರ್ಜಿಯ ಬಗೆಗಿನ ವಿಚಾರಣೆಯನ್ನು ಜೂನ್ 28 ಕ್ಕೆ ಮುಂದೂಡಲಾಗಿದೆ. (ಏಜೆನ್ಸೀಸ್)
ಪಾಲಿಕೆ ಅಧಿಕಾರಿ ಎಂದು ನಕಲಿ ಲಸಿಕಾ ಕಾರ್ಯಕ್ರಮ ನಡೆಸಿದ! ಸಂಸದೆಯನ್ನೂ ವಂಚಿಸಿದ!
ಮುಂದಿನ ಚೀಫ್ ಮಿನಿಸ್ಟರ್ ಅಂತ ಹೇಳ್ಬೇಡಿ ಎಂದು ಶಾಸಕರಿಗೆ ಮನವಿ ಮಾಡ್ತೀನಿ : ಸಿದ್ದರಾಮಯ್ಯ